
ನವದೆಹಲಿ: ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಓದುತ್ತಿದ್ದ 22 ವರ್ಷದ ಯುವತಿಯ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿಗಳು ಬಹಿರಂಗವಾಗುತ್ತಿವೆ. ಮರಣೋತ್ತರ ಪರೀಕ್ಷೆಯ ವರದಿ ಆಕೆ ಸಾವಿಗೆ ಮುನ್ನ ಅನುಭವಿಸಿದ ನರಕಯಾತನೆ ಘಟನೆಗಳನ್ನು ಬಹಿರಂಗಪಡಿಸಿದೆ.
ವೈದ್ಯಕೀಯ ವರದಿಗಳ ಪ್ರಕಾರ, ಯುವತಿಯ ಕೈ ಮತ್ತು ತೋಳುಗಳಲ್ಲಿ ಹಲವು ಗಾಯಗಳಿದ್ದು, ಆಕೆ ಕೊನೆಯವರೆಗೂ ತನ್ನ ಪ್ರಾಣ ಉಳಿಸಿಕೊಳ್ಳಲು ದಾಳಿಕೋರನೊಂದಿಗೆ ಸೆಣಸಾಡಿದ್ದಾಳೆ ಎಂಬುದು ತಿಳಿದುಬಂದಿದೆ. ದಾಳಿಕೋರನು ಮೊಂಡಾದ ವಸ್ತುವಿನಿಂದ ಮುಖಕ್ಕೆ ಹೊಡೆದ ಪರಿಣಾಮ ಮೂಗಿನ ಎಲುಬು ಮುರಿದಿದೆ.
ಇನ್ನೂ, ಕುತ್ತಿಗೆಯ ಭಾಗದಲ್ಲಿ ಗಂಭೀರ ಗಾಯಗಳಿದ್ದು, ಮೊಬೈಲ್ ಚಾರ್ಜಿಂಗ್ ಕೇಬಲ್ನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯ ನಂತರ ಲೈಂಗಿಕ ದೌರ್ಜನ್ಯ ನಡೆದಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ಪ್ರಕಾರ, ಆರೋಪಿ ರಾಹುಲ್ ಮೀನಾ ಬೆಳಿಗ್ಗೆ ಮನೆಯೊಳಗೆ ನುಗ್ಗಿ ಕೃತ್ಯ ಎಸಗಿದ್ದಾನೆ. ಬಳಿಕ ಲಾಕರ್ ಒಡೆದು ಹಣ ಮತ್ತು ಆಭರಣ ಕಳವು ಮಾಡಿ, ಪೋಷಕರು ಮನೆಗೆ ಬರುವ ಮುನ್ನ ಪರಾರಿಯಾಗಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ , ಕೆಲಸದಿಂದ ವಜಾಗೊಳಿಸಿದ್ದಕ್ಕೆ, ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಲಾಗಿದೆ ಎನ್ನಲಾಗುತ್ತಿದೆ.





















































































