
ತುಮಕೂರು: ಮಂಗಳೂರು ರೈಲ್ವೆ ವಿಭಾಗವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ವಿಚಾರದಲ್ಲಿ ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿನಿಂತುಕೊಂಡರೂ ಅಷ್ಟೇ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಕೇರಳದಲ್ಲಿ ತಮ್ಮ ವಿರುದ್ಧ ವಿರೋಧ ವ್ಯಕ್ತವಾಗುತ್ತಿದ್ದರೂ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಕೇರಳದ ವಿರೋಧ ಪಕ್ಷಗಳು ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, “ಯಾರು ಏನೇ ಮಾತನಾಡಿದರೂ ನಾನು ಕೆಲಸ ಮಾಡುವವ ಎಂಬುದು ಎಲ್ಲರಿಗೂ ಗೊತ್ತಿದೆ. ಕೇಂದ್ರ ಸಚಿವನಾಗಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡಿದ್ದೇನೆ” ಎಂದರು.
ಯುಡಿಎಫ್ಓ, ಸಿಪಿಐ, ಸಿಪಿಎಂ ಎಲ್ಲಾ ಪಕ್ಷದವರು ನನ್ನ ವಿರುದ್ಧ ಬಟ್ಟೆ ಬಿಚ್ಚಿ ನಿಂತ್ಕೊಂಡು ನಾನು ರಾಜೀನಾಮೆ ಕೊಡಬೇಕು ಅನ್ನುತ್ತಿದ್ದಾರೆ. ನಾನೇನು ತಪ್ಪು ಮಾಡಿಲ್ಲ. ಭಾರತ ಸರ್ಕಾರದ ಮಂತ್ರಿಯಾಗಿ ಈ ರೀತಿಯಾಗಿರುವ ಅಡಚಡಣೆಗಳನ್ನು ಸರಿಪಡಿಸುವ ಕೆಲಸ ಮಾಡಿದ್ದೇನೆ ಎಂದರು.
ಕೇರಳಕ್ಕೆ ಯಾವುದೇ ಅಪಚಾರ ಮಾಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಜಾಲವನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸುವ ಮೂಲಕ ಬಹುಕಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಹೇಳಿದರು.
ಈ ನಿರ್ಧಾರದಿಂದ ರೈಲ್ವೆ ಇಲಾಖೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಕೇರಳದಲ್ಲಿ 20 ಮೀನುಗಾರಿಕಾ ಬಂದರುಗಳಿದ್ದು, 17 ಅಧಿಕೃತವಾಗಿವೆ. ಅಲ್ಲಿನ ಬಜೆಟ್ಗೂ ಇದಕ್ಕೆ ಆದ್ಯತೆ ನೀಡಲಾಗಿದೆ ಎಂದು ಸೋಮಣ್ಣ ತಿಳಿಸಿದರು.
ಕರ್ನಾಟಕದಲ್ಲಿ ಮಂಗಳೂರು ಬಂದರು ಮಾತ್ರ ಪ್ರಮುಖ ಬಂದರಾಗಿದ್ದು, ಸರಕುಗಳ ಆಮದು-ರಫ್ತಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ರೈಲ್ವೆ ಜಾಲದ ಅಭಿವೃದ್ಧಿಯೂ ಇದಕ್ಕೆ ಸಹಕಾರಿಯಾಗಲಿದೆ ಎಂದರು.
ಮಂಗಳೂರು ವಿಭಾಗದ ವಿಚಾರವಾಗಿ ಕಳೆದ 25 ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಹಲವು ಸಚಿವರು ಈ ಕುರಿತು ಪ್ರಯತ್ನಿಸಿದ್ದರು. ಸಂಸದ ಕ್ಯಾ. ಬ್ರಿಜೇಶ್ ಚೌಟಾ ತಮ್ಮನ್ನು ಭೇಟಿ ಮಾಡಿ ಈ ಬೇಡಿಕೆಗೆ ರೂಪ ನೀಡುವಂತೆ ಮನವಿ ಮಾಡಿದ್ದರು ಎಂದು ಸೋಮಣ್ಣ ಹೇಳಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಈ ಹಿಂದೆ ಪ್ರಯತ್ನಿಸಿದ್ದರು. ತಾವು ಮೂವರು ಜನರಲ್ ಮ್ಯಾನೇಜರ್ಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸಾಧಕ-ಬಾಧಕಗಳ ಕುರಿತು ಚರ್ಚಿಸಿದ್ದಾಗಿ ತಿಳಿಸಿದ ಸೋಮಣ್ಣ, ಈ ನಿರ್ಧಾರದಲ್ಲಿ ಯಾವುದೇ ಫೇವರಿಸಂ ಇಲ್ಲ ಎಂದು ಸ್ಪಷ್ಟಪಡಿಸಿದರು.





















































































