ಭಾಗ – 625
ಭರತೇಶ್ ಶೆಟ್ಟಿ ,ಎಕ್ಕಾರು

ಆಗ ನಿಯತಿ ಇವರ ಜಿಜ್ಞಾಸೆಗೆ ಉತ್ತರ ನೀಡುತ್ತಾ “ನಿಮ್ಮ ಪ್ರಶ್ನೆ ತಪ್ಪಲ್ಲ. ನೀವು ಈ ತನಕ ಬದುಕಿದ್ದ ಜಗತ್ತಿನ ಪರಿಕಲ್ಪನೆಯಲ್ಲಿ ನೀವು ಪ್ರಶ್ನೆ ಮಾಡಿದ್ದೀರಿ. ನೀವಿರುವ ಬ್ರಹ್ಮಾಂಡದಲ್ಲಿ ಮೇಲೆ, ಕೆಳಗೆ, ಅಥವಾ ದಿಕ್ಕುಗಳು ಎಂಬ ದಿಗ್ದರ್ಶನಗಳಿವೆ. ಅವುಗಳ ಆಧಾರದಲ್ಲಿ ಎಲ್ಲಿ ಎಂಬ ಪ್ರಶ್ನೆಗೆ ಸೂಚಿಯಾಗಿ ನೀವು ತೋರಿಸಬಲ್ಲಿರಿ. ಹಾಗೆಂದು ಇಲ್ಲಿ ಅಂತಹ ಯಾವುದೂ ಇಲ್ಲ. ಈಗ ನೀವು ಬಂದಿರುವ ಸ್ಥಳದಲ್ಲಿ ಇದಕ್ಕಿಂತ ಮೇಲೆ ಏನೂ ಇಲ್ಲ, ಕೆಳಗೂ ಇಲ್ಲ. ಅಂದರೆ ಇಲ್ಲಿ ಮೇಲೆ ಅಥವಾ ಕೆಳಗೆ ಎಂಬ ಅಂತರವಾಗಲಿ ಅರ್ಥವಾಗಲಿ ಇಲ್ಲವೇ ಇಲ್ಲ. ಮಾತ್ರವಲ್ಲ ಇಲ್ಲಿ ಆಚೆ ಈಚೆ ಎಂಬ ದಿಕ್ಕುಗಳೂ ಸ್ಥಿತವಾಗಿಲ್ಲ. ಹಾಗಾದರೆ ನಾನು ಹೇಳಿದ ಲೋಕಗಳು ಎಲ್ಲಿವೆ ಎಂಬ ಪ್ರಶ್ನೆ ನಿಮ್ಮ ಮನ ಮಾಡಿರಬಹುದು! ನೀವೀಗ ಇರುವ ಈ ಸ್ಥಳ ಎಲ್ಲಿದೆ ಎಂಬ ಪ್ರಶ್ನೆಯೂ ಮೂಡಿರಬಹುದು! ಏನೋ ಒಂದು ಅಸಂಭವನೀಯ ಘಟನೆಯಾಗಿ ನೀವು ಇಲ್ಲಿಯವರೆಗೆ ಬರುವಂತೆಯೂ, ಈ ರೀತಿ ನಮಗರಿಯದ, ತರ್ಕಕ್ಕೂ ನಿಲುಕದ ಇನ್ನೆಷ್ಟೋ ಸತ್ಯಗಳಿವೆ ಎಂಬುವುದನ್ನು ಅರಿತುಕೊಳ್ಳುವ ಅವಕಾಶ ಎಂಬಂತೆ ಕಾಕತಾಳೀಯವಾಗಿ ನಿಮಗೆ ಈ ದರ್ಶನ ಪ್ರಾಪ್ತವಾಗಿದೆ. ಇದು ದುರ್ಲಭವಾದ ವಿಚಾರವಾಗಿರುವಾಗ ಇನ್ನುಳಿದಿರುವ ವಿಚಾರಗಳು ಅಸಾಮಾನ್ಯವಾದವುಗಳು ಆಗಿವೆ. ಅದನ್ನೂ ತಿಳಿಯಬೇಕೆಂಬ ಕೌತುಕ ನಿಮಗಿದ್ದರೆ ಅದಕ್ಕಿರುವ ಮಾರ್ಗವೊಂದೇ ಅದು ಇಚ್ಚಾಶಕ್ತಿ. ಲೋಕಾಲೋಕಗಳನ್ನು ನೀವು ಕಾಣಬೇಕಾದರೆ ಅದು ನಿಮ್ಮ ಸಾಧನೆಯ ಇಚ್ಚಾಶಕ್ತಿಯಿಂದ ಮಾತ್ರ ಸಾಧ್ಯ ಹೊರತು, ಯಾರೂ ನಿಮಗೆ ಸಹಾಯ ಮಾಡಲು ಸಾಧ್ಯ ಇಲ್ಲ – ಶಕ್ತರೂ ಅಲ್ಲ. ಇನ್ನೂ ಒಂದು ಸೂಚನೆಯನ್ನು ನೀಡುತ್ತೇನೆ ಅದೇನೆಂದರೆ ನಿಮ್ಮ ನಿಮ್ಮ ಲೋಕಗಳ ವ್ಯಾಪ್ತಿಯಲ್ಲಿ ನಿಮಗೆ ದೈವದತ್ತವಾದ ಪರಮಾತ್ಮನ ವಿಶೇಷ ಶಕ್ತಿಗಳಿದ್ದವು. ಆದರೆ ಅವುಗಳ್ಯಾವುದೂ ಇಲ್ಲಿ ಉಪಯೋಗಕ್ಕೆ ಬಾರದು. ಆ ಶಕ್ತಿಗಳು ಇಲ್ಲಿಂದ ಮುಂದೆ ಅಥವಾ ನಿಮ್ಮ ಲೋಕ ದಾಟಿದಾಕ್ಷಣ ಶೂನ್ಯವಾಗಿಯಾಗಿದೆ. ನೀವೇನಾದರೂ ಇನ್ನು ಮುಂದಕ್ಕೂ ತಿಳಿದುಕೊಳ್ಳಲು ಬಯಸುವಿರಾದರೆ ಅದಕ್ಕೆ ನಿಮಗ್ಯಾರೂ ಮಾರ್ಗದರ್ಶಕರು ಇರಲಾರರು. ನಾನೂ ನಿಮಗೆ ಇದಕ್ಕಿಂತ ಹೆಚ್ಚು ಹೇಳದೆ ನಿಮ್ಮ ಇಚ್ಚಾಶಕ್ತಿಯ ಸಾಧನೆಗೆ ಬಿಟ್ಟು ಬಿಡುತ್ತೇನೆ. ಹಾಗಾಗಿ ನೀವ್ಯಾರಾದರೂ ಇನ್ನು ಉಳಿದಿರುವ ಲೋಕಗಳ ಬಗ್ಗೆ ತಿಳಿಯಬಯಸುವಿರಾದರೆ ಅದನ್ನು ಸಾಧಿಸಿ ಕಂಡು ಕೊಳ್ಳಬೇಕು” ಎಂದು ನಿರ್ದೇಶವಿತ್ತು ಆದೇಶ ಮಾಡಿದಳು.
ಈಗ ಇಪ್ಪತ್ತನಾಲ್ಕು ಬ್ರಹ್ಮರಿಗೂ, ಬಕದಾಲ್ಭ್ಯರಿಗೂ ಸೃಷ್ಠಿ ಮತ್ತು ಸಮಷ್ಠಿಯ ವೈಶಾಲ್ಯತೆ ಎಷ್ಟಿರಬಹುದು ಎಂಬ ಜಿಜ್ಞಾಸೆ ಮೂಡಿತು. ಹಂತ ಹಂತವಾಗಿ ಒಂದೊಂದು ಲೋಕಗಳನ್ನು ಕಾಣುತ್ತಾ ನೇರವಾಗಿ ಇಲ್ಲಿಗೆ ಹಾರಿಸಲ್ಪಟ್ಟೆವು. ಒಂದು ಬ್ರಹ್ಮ, ಅಲ್ಲಿಂದ ಎರಡನೇ ಬ್ರಹ್ಮನ ಲೋಕ ನಂತರ ಮೂರನೇ ಬ್ರಹ್ಮನ ಲೋಕ ಹೀಗೆ ಇಪ್ಪತ್ತನಾಲ್ಕು ಬ್ರಹ್ಮರ ಬಗ್ಗೆ ನಮಗೆ ಕಿಂಚಿತ್ ಜ್ಞಾನ ಇರದಿದ್ದರೂ ಈಗ ತಿಳಿದುಕೊಳ್ಳುವಂತಾಯಿತು. ಪ್ರತಿಯೊಬ್ಬ ಬ್ರಹ್ಮನೂ ಉಳಿದ ಇಪ್ಪತ್ತ ಮೂರು ಬ್ರಹ್ಮರನ್ನು ನೋಡುತ್ತಾ ಲೆಕ್ಕ ಹಾಕುತ್ತಿದ್ದಾರೆ. ಅವರವರೊಳಗೆ ಮಾತುಕತೆ, ಸಂವಾದ ಸಾಗುತ್ತಿದೆ. ಈಗ ಎಲ್ಲರ ಮನದಲ್ಲಿ ಹಾಗಾದರೆ ಇಪ್ಪತ್ತೈದನೆ ಬ್ರಹ್ಮನೂ ಇದ್ದಾನೆ. ಅವನಿಗೂ ನಮ್ಮ ಬಗ್ಗೆಯಾಗಲಿ ಇಪ್ಪತ್ತಾರರಿಂದ ಮುಂದಿರುವ ಲೋಕಗಳ ಬಗ್ಗೆಯಾಗಲಿ ತಿಳಿದಿರಲು ಸಾಧ್ಯವಿಲ್ಲ ಎಂಬ ಸತ್ಯ ಅರಿವಾಯಿತು. ಮೊದಲು ತಾನೇ ಸರ್ವಶ್ರೇಷ್ಠ, ಎಲ್ಲವೂ ನನ್ನಿಂದ ಸೃಷ್ಠಿಯಾದದ್ದು. ನಾನೇ ಎಲ್ಲಾ ಸೃಷ್ಠಿಯ ಸೃಷ್ಟಿಕರ್ತ ಹೀಗೆ ಆವರಿಸಿಕೊಂಡಿದ್ದ ನಾನು ಎಂಬ ಭಾವ ನಾಶವಾಗಿದೆ. ಇನ್ನೂ ಎಷ್ಟೋ ಇದೆ! ಅದು ಹೇಗಿರಬಹುದು. ಅನಂತವಾದ ಈ ಸೃಷ್ಟಿಯ ರಹಸ್ಯವೇನು? ಎಂಬ ತುಡಿತ ಮೂಡಿ ಪರಮಾತ್ಮನೆದುರು ಏನೂ ಅರಿಯದ, ಕಲಿಯಲು ಬಂದ ವಿದ್ಯಾರ್ಥಿಗಳಂತೆ ಭಾವಶುದ್ಧಿಯಾಗಿದೆ. ಹೀಗಾಗುತ್ತಿದ್ದಂತೆಯೆ ನಮಗೆಲ್ಲರಿಗೂ ತಲೆಕೆಳಗಾದಂತೆ ಭಾಸವಾಯಿತು. ನಮ್ಮ ದೇಹದ ಭಾರ ತೂಕವೂ ಕಳೆದುಕೊಂಡಂತಾಯಿತು. ಎಲ್ಲಿಗೊ ಕುಸಿದು ಹೋಗುತ್ತಿದ್ದೇವೆ ಎಂಬಂತಾಗುತ್ತಿದೆ. ಏನಾಗುತ್ತಿದೆ ಎಂದು ಅರಿವಾಗಲಿಲ್ಲ. ನಾವು ಎಲ್ಲೋ ಮತ್ತೆ ಒಯ್ಯಲ್ಪಡುತ್ತಿದ್ದೇವೆ ಎಂಬುವುದನ್ನೂ ಖಾತ್ರಿ ಪಡಿಸಲಾಗುತ್ತಿಲ್ಲ. ಎಲ್ಲವೂ ಶೂನ್ಯವಾಗಿದೆ. ಹೀಗಾಗಿ ಅರೆಕ್ಷಣದಲ್ಲಿ ಏನೊ ಗೋಚರಿಸತೊಡಗಿತು. ಮತ್ತೆ ಏನೇನೋ ಹೊಸತು ಕಾಣಿಸುತ್ತಿದೆ. ಮೊದಲಿದ್ದದ್ದು ಯಾವುದೂ ಇಲ್ಲಿಲ್ಲ….
ಮುಂದುವರಿಯುವು





















































































