
ಕುಲಾಲ ಚಾವಡಿ ವಾಟ್ಸಾಪ್ ಬಳಗ ದಶಕವೊಂದರಿಂದ ನಿರಂತರ ಸಮುದಾಯದ ಆಶಕ್ತರ ಮತ್ತು ಅನಾರೋಗ್ಯ ಪೀಡಿತರ ಸಂಕಷ್ಟಕ್ಕೆ ಸಹಾಯ ಧನ ಸಂಗ್ರಹಿಸಿ ಆರ್ಥಿಕ ನೆರವು ನೀಡುವ ಸತ್ಕಾರ್ಯದಲ್ಲಿ ನಿರತವಾಗಿದೆ. ದೇಶ ವಿದೇಶದಲ್ಲಿ ಉದ್ಯೋಗ ನಿಮಿತ್ತ ನೆಲೆ ನಿಂತಿರುವ ಸಮುದಾಯ ಬಂಧುಗಳು ಈ ಸಂಘಟನೆಯೊಂದಿಗೆ ಕೈ ಜೋಡಿಸಿ ಈ ಸತ್ಕಾರ್ಯಕ್ಕೆ ತಮ್ಮ ಸಹಕಾರ ನೀಡುತಿದ್ದಾರೆ. ಕುಲಾಲ ಚಾವಡಿಯ ಈ ಸದುದ್ದೇಶಕ್ಕೆ ಬಡವ ಬಲ್ಲಿದ ಎಂಬ ಭೇದವಿಲ್ಲದೆ ಸರ್ವರೂ ಸಹಕಾರ ನೀಡಲು ಅನುಕೂಲ ಆಗುವಂತೆ “ಮುನ್ನೂರು ಒರೆಸಲು ಕಣ್ಣೀರು” ಎಂಬ ಘೋಷ ವಾಕ್ಯದಡಿ ಒರ್ವ ಸದಸ್ಯ ಕನಿಷ್ಠ ಮುನ್ನೂರು ರೂಪಾಯಿ ನೀಡುವ ಯೋಚನೆ ಇಂದು ದೊಡ್ಡ ಯೋಜನೆಯಾಗಿ ನೂರಾರು ಆಶಕ್ತರ ಪಾಲಿಗೆ ಅಮೃತ ಸಂಜೀವಿನಿ ಆಗಿದೆ.
ಹಾಗೇ ಕಳೆದ ಮೂರು ವರ್ಷದ ಹಿಂದೆ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಸಮುದಾಯದ ಸಂಕಷ್ಟ ಪೀಡಿತರ ಮಕ್ಕಳ ವಿದ್ಯಾರ್ಜನೆಗೆ ಆರ್ಥಿಕ ಚೇತರಿಕೆ ನೀಡಲು , “ಪುಸ್ತಕ ಜೋಳಿಗೆ ಬಾಳಿನ ದೀವಿಗೆ” ಎಂಬ ಶಿರೋನಾಮೆಯಲ್ಲಿ ಪಠ್ಯ ಪರಿಕರದ ಕಿಟ್ ವಿತರಣೆಯ ಕಾರ್ಯಕ್ರಮವನ್ನು ದಿನಾಂಕ 20/7/2025 ರಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಹೋಟೆಲ್ ಉಷಾ ಜೋಡು ರಸ್ತೆ ಕಾರ್ಕಳ ಇಲ್ಲಿ ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಆಧುನಿಕತೆ ಹೊಸ ಪರ್ವಕಾಲಕ್ಕೆ ಜಗತ್ತು ತೆರೆದು ಕೊಳ್ಳುವ ತೊಂಬತ್ತರ ದಶಕದ ಮಧ್ಯಂತರದಲ್ಲಿ, ಸಮುದಾಯ ಸಂಘಟನೆಯಲ್ಲಿ ಅಹರ್ನಿಶಿ ದುಡಿದು ಸಾಮಾಜಿಕ ನ್ಯಾಯಕ್ಕಾಗಿ ಕುಂಬಾರ ಜನಾಂಗದ ಗಟ್ಟಿ ಧ್ವನಿಯಾಗಿ ನೇಪಥ್ಯಕ್ಕೆ ಸರಿದ ಅಮರ ಚೇತನ ದಿ! ಯು. ಸಿ. ಮೂಲ್ಯ ಮತ್ತು ಸಮುದಾಯದ ಮಾಣಿಕ್ಯ ದಿ! ಬಾಲೋಡಿ ಮಹಾಬಲ ಹಾಂಡರ ಸಂಸ್ಮರಣೆಯ ಕಾರ್ಯಕ್ರಮ ನಡೆಯಲಿದೆ. ಅವರ ಬದುಕು, ಸಾಧನೆಯ ವಿವಿಧ ಮಜಲುಗಳಲ್ಲಿ ಕಂಡ ಸಾಧಕ, ಬಾಧಕಗಳ ರೋಚಕ ಸ್ಥಿತ್ಯಂತರವನ್ನು ಪ್ರೇರಣಾದಾಯಿಯಾಗಿ ಯುವ ಪೀಳಿಗೆಗೆ ಹಸ್ತಾಂತರಿಸುವ ಘನತರದ ಉದ್ದೇಶವನ್ನು ಒಳಗೊಂಡ ವಿನೂತನ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ






























































































































