
ಚಾಮರಾಜನಗರ: 10 ವರ್ಷದ ಹಿಂದೆ ಪರಿಹಾರ ಕೇಳಲು ಹೋಗಿದ್ದ ಕೂಲಿ ಕೆಲಸಗಾರನ ಮೇಲೆ ದರ್ಶನ್ ಮತ್ತು ಅವರ ಗ್ಯಾಂಗ್ ನಾಯಿ ಛೂ ಬಿಟ್ಟು ವಿಕೃತಿ ಮೆರೆದಿದ್ದರೆಂಬ ಗಂಭೀರ ಆರೋಪ ವ್ಯಕ್ತವಾಗಿದೆ.
ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಎಂಬವರು ಟಿ ನರಸೀಪುರ ಸಮೀಪದ ತೂಗುದೀಪ ಫಾರಂ ಹೌಸ್ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು ಎತ್ತಿಗೆ ಲಾಳ ಕಟ್ಟಿಸಲು ಹೋದ ಸಂದರ್ಭದಲ್ಲಿ ಎತ್ತು ಮಹೇಶ್ ಅವರ ಕಣ್ಣಿಗೆ ತಿವಿದಿತ್ತು. ಕೊಂಬು ತಲೆಯಿಂದ ಹೊರಬಂದಿತ್ತು. ದರ್ಶನ್ ಕಡೆಯುವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ಬಿಟ್ಟು ಹೋಗಿದ್ದರು. ನಂತರ ಕುಟುಂಬದತ್ತ ತಿರುಗಿಯೂ ನೋಡಿಲ್ಲ.
ಈ ವಿಚಾರವನ್ನು ಹೊರಗಡೆ ಎಲ್ಲಿಯಾದರೂ ಹೇಳಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಬೆದರಿಸಿದ್ದಾರೆ ಎಂದು ಈ ಕುಟುಂಬವು ಆರೋಪಿಸಿದೆ.
ಹತ್ತು ವರ್ಷಗಳಿಂದ ಕೂಲಿ ಕಾರ್ಮಿಕ ಮಹೇಶ್ ಹಾಸಿಗೆ ಹಿಡಿದಿದ್ದು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. ತಾಯಿ ಮತ್ತು ಹೆಂಡತಿಯಿಬ್ಬರೂ ಕೂಲಿ ಕೆಲಸ ಮಾಡಿಕೊಂಡು ಮಹೇಶ್ ಆರೈಕೆ ಮಾಡುತ್ತಿದ್ದಾರೆ.