
ಬೆಂಗಳೂರು: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ಮೊದಲ ಆರತಿಯಲ್ಲಿ ಇನ್ನು ಮುಂದೆ ಕರ್ನಾಟಕದ ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳಿಗೆ ಶಿಷ್ಟಾಚಾರದ ಆಧಾರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬನಶಂಕರಿಯ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಬಂಧ ರಾಜ್ಯ ಸರ್ಕಾರ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಹೇಳಿದರು.
ತಿರುಪತಿಯಲ್ಲಿ ಕರ್ನಾಟಕದ ಪರವಾಗಿ ಮೊದಲ ಆರತಿ ಸಲ್ಲಿಸುವ ಸಂಪ್ರದಾಯಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರು ಒಡೆಯರ್ ರಾಜವಂಶದ ಕೊಡುಗೆಗಳ ಹಿನ್ನೆಲೆ ಈ ಗೌರವ ಕರ್ನಾಟಕಕ್ಕೆ ದೊರೆತಿದೆ.
ಸ್ವಾತಂತ್ರ್ಯಾ ನಂತರವೂ ಈ ಹಕ್ಕನ್ನು ಕರ್ನಾಟಕ ಸರ್ಕಾರ ಮುಂದುವರಿಸಿಕೊಂಡು ಬಂದಿದೆ. ಇದುವರೆಗೆ ಮುಖ್ಯಮಂತ್ರಿಗಳು ಅಥವಾ ಅವರ ಪರವಾಗಿ ನೇಮಕಗೊಂಡ ಅಧಿಕಾರಿಗಳು ಮಾತ್ರ ಮೊದಲ ಆರತಿಯಲ್ಲಿ ಭಾಗವಹಿಸುವ ಅವಕಾಶ ಹೊಂದಿದ್ದರು.
ಹೊಸ ವ್ಯವಸ್ಥೆಯಡಿ ಕರ್ನಾಟಕವನ್ನು ಪ್ರತಿನಿಧಿಸುವ ಸಚಿವರು, ಸಂಸದರು, ಶಾಸಕರು, ನ್ಯಾಯಾಧೀಶರು ಹಾಗೂ ಹಿರಿಯ ಐಎಎಸ್-ಐಪಿಎಸ್ ಅಧಿಕಾರಿಗಳಿಗೂ ಮೊದಲ ಆರತಿ ವೀಕ್ಷಣೆ ಮತ್ತು ವಿಶೇಷ ದರ್ಶನದ ಅವಕಾಶ ದೊರೆಯಲಿದೆ.
ಈ ನಿರ್ಧಾರವನ್ನು ತಮ್ಮ ಅಧಿಕಾರಾವಧಿಯ ಪ್ರಮುಖ ಘೋಷಣೆಗಳಲ್ಲಿ ಒಂದೆಂದು ಬಣ್ಣಿಸಿದ ಸಿಎಂ, ರಾಜ್ಯದ ಗಣ್ಯರಿಗೆ ತಿರುಪತಿಯಲ್ಲಿ ಸುಗಮ ದರ್ಶನದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದೇ ವೇಳೆ ತಿರುಪತಿ ವೆಂಕಟೇಶ್ವರ ಸ್ವಾಮಿ ತಮ್ಮ ಮನೆದೇವರು ಎಂದು ತಿಳಿಸಿದ ಡಿ.ಕೆ. ಶಿವಕುಮಾರ್, ಇತ್ತೀಚಿನ ತಿರುಮಲ ಭೇಟಿ ವೇಳೆ ಈ ಆಲೋಚನೆ ಮೂಡಿದ್ದು, ಇದೀಗ ಅದನ್ನು ಜಾರಿಗೆ ತರುವ ಸಮಯ ಬಂದಿದೆ ಎಂದು ಹೇಳಿದರು.











































