
ಹೆಬ್ರಿ :ದೇವರ ಚಿಂತನೆಯನ್ನು ಬೆಳೆಸಿಕೊಳ್ಳಲು ಧಾರ್ಮಿಕ ಶಿಕ್ಷಣ ಶಿಬಿರದ ಅವಶ್ಯಕತೆ ಇದೆ. ನಾವು ಮಾಡುವ ಉತ್ತಮ ಕಾರ್ಯಗಳಿಗೆ ದೇವರು ಸದಾ ನಮ್ಮನ್ನು ಕಾಪಾಡುತ್ತಾನೆ. ನಮ್ಮ ಸನಾತನ ಧರ್ಮದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಾಲಕರು ತಮ್ಮ ಮಕ್ಕಳನ್ನು ಅವಶ್ಯವಾಗಿ ಧಾರ್ಮಿಕ ಶಿಕ್ಷಣ ಶಿಬಿರಕ್ಕೆ ಕಳುಹಿಸಬೇಕು.
ವಿದ್ಯಾರ್ಥಿಗಳು ಕಲಿತ ವಿದ್ಯೆ ಫಲಿಸಬೇಕಾದರೆ ಚುರುಕುತನ, ಏಕಾಗ್ರತೆ, ಕರ್ತವ್ಯ ಪ್ರಜ್ಞೆ ಸದಾ ಅಗತ್ಯ. ಸಾತ್ವಿಕ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು. ಗುರುಕುಲದ ಶಿಕ್ಷಣವನ್ನು ಪಡೆಯಲು ಸದಾ ತ್ಯಾಗಿಗಳಾಗಬೇಕು ಎಂದು ವಿದ್ವಾನ್ ವಾಸುದೇವ ಉಪಾಧ್ಯಾಯ ಹೇಳಿದರು.
ಅವರು ಹೆಬ್ರಿ ಗಿಲ್ಲಾಳಿ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ವಿಪ್ರ ಬಾಂಧವರಿಗೆ ನಡೆದ ಹತ್ತು ದಿನಗಳ ಧಾರ್ಮಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ವೇದಿಕೆಯಲ್ಲಿ ಗಿಲ್ಲಾಳಿ ನರಸಿಂಹ ಆಚಾರ್ಯ ಹೊಸಪೇಟೆ, ಪೋಷಕರಾದ ಕೃಷ್ಣಪ್ರಸಾದ ಭಟ್ ಕಬ್ಬಿನಾಲೆ, ಶಿಬಿರದ ಗುರುಗಳಾದ ಸುಬ್ರಮಣ್ಯ ಅಡಿಗ , ಶಿಬಿರ ವ್ಯವಸ್ಥಾಪನ ಸಮಿತಿಯ ಪ್ರಮುಖರಾದ ಬಲ್ಲಾಡಿ ಚಂದ್ರಶೇಖರ ಭಟ್, ಮಡಾಮಕ್ಕಿ ವೇದವ್ಯಾಸ ತಂತ್ರಿ, ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ವರಂಗ ರಾಮಚಂದ್ರ ಭಟ್, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗೋಶಾಲೆಯ ಟ್ರಸ್ಟಿಗಳಾದ ವಿದ್ವಾನ್ ಪದ್ಮನಾಭ ಆಚಾರ್ಯ ಅಧ್ಯಕ್ಷತೆ ವಹಿಸಿ, ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.ಹರೀಶ್ ಭಟ್, ಗೋಶಾಲೆಯ ಉಸ್ತುವಾರಿ ಸುಬ್ರಮಣ್ಯ ನಾಯಕ್, ಪೋಷಕರು, ದಾನಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಶಿಬಿರಾರ್ಥಿಗಳಾದ ಮಹತಿ ಮತ್ತು ಹರಿಪ್ರಸಾದ, ಅಧ್ಯಾಪಕರಾದ ಶ್ರೀವತ್ಸ ಕುಲಕರ್ಣಿ ಹಾಗೂ ಶ್ರೀವಾಸ ಆಚಾರ್ಯ, ಪೋಷಕರಾದ ವೆಂಕಟೇಶ ವೈಲಾಯ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಉತ್ತಮ ಸಾಧನೆ ಮಾಡಿದ ಶಿಬಿರಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಆದ್ಯಾ ಜೋಯಿಸ್ ಹಾಗೂ ಪದ್ಮಶ್ರೀ ಜೋಯಿಸ್ ಪ್ರಾರ್ಥಿಸಿದರು. ಶಿಬಿರಾರ್ಥಿ ಅದಿತಿ ಸ್ವಾಗತಿಸಿ, ವಂದಿಸಿದರು.ಶಿಬಿರದ ಅಧ್ಯಾಪಕರಾದ ಶ್ರೀಧಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.













