ರಾಜ್ಯದಲ್ಲಿ ಮತ್ತೆ ಸಮವಸ್ತ್ರ ವಿವಾದ ಭುಗಿಲೇಳುವ ಸಾಧ್ಯತೆ

ಮೈಸೂರು: ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಗುರುತುಳ್ಳ ವಸ್ತುಗಳನ್ನು ಧರಿಸಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ, ಸಮವಸ್ತ್ರ ನಿಯಮದ ವಿಚಾರ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. 2022ರಲ್ಲಿ ಜಾರಿಗೊಂಡಿದ್ದ ವಸ್ತ್ರಸಂಹಿತೆಯನ್ನು ಹೈಕೋರ್ಟ್ ಸಮರ್ಥಿಸಿತ್ತು ಎಂದು ಬಿಜೆಪಿ ಸೇರಿದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕಿಸಿವೆ.
ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಜಾಬ್ಗೆ ಮಾತ್ರವಲ್ಲದೆ ಜನಿವಾರ, ಶಿವದಾರ, ರುದ್ರಾಕ್ಷಿ ಹಾಗೂ ಸಾಂಪ್ರದಾಯಿಕ ಪೇಟ ಧರಿಸುವುದಕ್ಕೂ ಅವಕಾಶ ನೀಡಲಾಗಿದೆ. ಆದರೆ ಶಾಲೆಗಳಿಗೆ ಕೇಸರಿ ಶಾಲು ಅಥವಾ ಹೊಸ ರೀತಿಯ ಕೇಸರಿ ಪೇಟ ಧರಿಸಲು ಅನುಮತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಆದೇಶವನ್ನು SDPI ಮುಖಂಡ ಮೊಹಮ್ಮದ್ ಅಶ್ರಫ್ ಸ್ವಾಗತಿಸಿದ್ದು, ಹಿಂದಿನ ಸರ್ಕಾರ ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಧಕ್ಕೆ ತಂದಿತ್ತು. ಈ ವಿಷಯ ಉಡುಪಿ ಜಿಲ್ಲೆಯಿಂದ ಆರಂಭವಾಗಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು ಎಂದರು.
ಇನ್ನೊಂದೆಡೆ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಬಾಕಿ ಇರುವಾಗ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.























