
ಬೆಂಗಳೂರು: ಅಪಘಾತ ಉಂಟು ಮಾಡಿದ ವಾಹನಕ್ಕೆ ರಹದಾರಿ ಪರವಾನಿಗೆ ಮತ್ತು ಸದೃಢ ಪ್ರಮಾಣ ಪತ್ರ ಇಲ್ಲದಿದ್ದರೂ ಆ ವಾಹನಕ್ಕೆ ವಿಮಾ ಪಾಲಿಸಿ ವಿತರಿಸಿರುವ ಕಂಪನಿಯು ಮೊದಲು ಘಟನೆಯ ಸಂತ್ರಸ್ತರಿಗೆ ಪರಿಹಾರ ಪಾವತಿಸಿ, ನಂತರ ಆ ಮೊತ್ತವನ್ನು ವಾಹನ ಮಾಲೀಕರಿಂದ ವಸೂಲಿ ಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಶ್ರೀರಾಮ ಜನರಲ್ ವಿಮಾ ಕಂಪನಿಯು ಅಪಘಾತ ಉಂಟು ಮಾಡಿದ ಸರಕು ಸಾಗಣೆ ವಾಹನಕ್ಕೆ ಸದೃಢ ಪ್ರಮಾಣ ಪತ್ರ ಇಲ್ಲದಿದ್ದರೂ ಸಂತ್ರಸ್ತರಿಗೆ ಪರಿಹಾರ ಪಾವತಿಸಲು ತನಗೆ ಸೂಚಿಸಿದ ಅಧೀನ ನ್ಯಾಯಾಲಯ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರ ನ್ಯಾಯಪೀಠ ಮತ್ತೇ ಈ ಆದೇಶ ಹೊರಡಿಸಿದೆ. ಪ್ರಕರಣದ ಹಿನ್ನೆಲೆ: 2013ರ ಜೂ.17ರಂದು ಹೊಸ ಕೋಟೆ ಚಿಕ್ಕತಿರುಪತಿ ಮಾರ್ಗದಲ್ಲಿ ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದ ಸೈಕಲ್ ಸವಾರ ನಂದೀಶಪ್ಪ ಎಂಬುವರಿಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿತ್ತು.
ಇದರಿಂದ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ಕೋರ್ಟ್ ಮೃತನ ಕುಟುಂಬದವರಿಗೆ 13.88 ಲಕ್ಷ ರು. ಪರಿಹಾರ ನೀಡಲು ಸರಕು ಸಾಗಣೆ ವಾಹನಕ್ಕೆ ವಿಮಾ ಪಾಲಿಸಿ ವಿತರಿಸಿದ್ದ ಶ್ರೀರಾಮ ಜನರಲ್ ವಿಮಾ ಕಂಪನಿಗೆ ಸೂಚಿಸಿತ್ತು. ಕಂಪನಿಯು ಈ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಅಪಘಾತ ಉಂಟು ಮಾಡಿರುವ ಸರಕು ಸಾಗಣೆ ವಾಹನಕ್ಕೆ ರಹದಾರಿ ಪರವಾನಿಗೆ ಮತ್ತು ಸದೃಢ ಪ್ರಮಾಣ ಪತ್ರವೇ ಚಾಲ್ತಿಯಲ್ಲಿ ಇರಲಿಲ್ಲ. ಈ ಪ್ರಮಾಣ ಪತ್ರ ನವೀಕರಣ ಮಾಡದಿರುವುದು ವಾಹನ ಮಾಲೀಕನ ತಪ್ಪು. ಇದರಿಂದ ಅವರೇ ಘಟನೆಯ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕಿದ್ದು, ಆ ಸಂಬಂಧ ಆದೇಶಿಸುವಂತೆ ಕೋರಿದರು.ವಿಚಾರಣೆ ನಡೆಸಿದ ಹೈಕೋರ್ಟ್, ಸದೃಢ ಪ್ರಮಾಣ ಪತ್ರ ಮತ್ತು ನೋಂದಣಿ, ರಹದಾರಿ ಪರವಾನಗಿ ನವೀಕರಣ ಮಾಡದೆ ವಾಹನವನ್ನು ರಸ್ತೆಗಿಳಿಸಿರುವುದು ಮಾಲೀಕನ ತಪ್ಪು. ಆದರೆ, ಈ ಒಂದು ಕಾರಣಕ್ಕೆ ವಿಮಾ ಕಂಪನಿ ತನ್ನ ಹೊಣೆಗಾರಿಕೆಯಿಂದ ನುಣಚಿಕೊಳ್ಳುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ವಿಮಾ ಕಂಪೆನಿಯು ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ಪಾವತಿಸಬೇಕು. ಅಧೀನ ನ್ಯಾಯಾಲಯವು ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು 18 ಲಕ್ಷ ರು. ಹೆಚ್ಚಿಸಿ ಮುಂದಿನ ಎಂಟು ವಾರಗಳಲ್ಲಿ ಮೊತ್ತವನ್ನು ಸಂತ್ರಸ್ತರ ಖಾತೆಗೆ ಪಾವತಿ ಮಾಡಬೇಕು. ನಂತರ ಆ ಮೊತ್ತವನ್ನು ವಾಹನ ಮಾಲೀಕರಿಂದ ವಸೂಲಿ ಮಾಡಿಕೊಳ್ಳಬೇಕು ಎಂದು ಆದೇಶಿಸಿದೆ.













