
ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಲೋಕಾಯುಕ್ತ ಸಂಸ್ಥೆಯು ಸ್ವಾಯತ್ತ ಸಂಸ್ಥೆಯಾಗಿದ್ದರೂ ಅಲ್ಲಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳು ಸರ್ಕಾರ ವ್ಯಾಪ್ತಿಯಲ್ಲಿರುತ್ತಾರೆ. ವರ್ಗಾವಣೆ, ಬಡ್ತಿ ಇತರೆ ಯೋಚನೆಗಳು ಬರುವುದು ಸಹಜ. ಹೀಗಾಗಿ ಪ್ರಮುಖ ಹುದ್ದೆಯಲ್ಲಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಆಗದಿರಬಹುದು. ಆದರೆ, ಲೋಕಾಯುಕ್ತ ಸಂಸ್ಥೆಯು ಯಾವಾಗಲೂ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವಂತಹ ಸಂಸ್ಥೆಯಾಗಿರುತ್ತದೆ. ಆದರೆ, ಮುಖ್ಯಮಂತ್ರಿಗಳ ಕೈ ಕೆಳಗಿರುವ ಅಧಿಕಾರಿಗಳಿಂದ ನಡೆಸುವುದು ಸಮಂಜಸವಲ್ಲ. ಯಾಕೆಂದರೆ ಹಲವು ಸಂಶಯಗಳು ಇದ್ದೇ ಇರುತ್ತವೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ರಾಜೀನಾಮೆ ಕೇಳಲು ನಾನು ರಾಜಕಾರಣಿಯಲ್ಲ. ಅದನ್ನು ಹೇಳುವುದಿಲ್ಲ. ಯಾವುದೇ ಆರೋಪಗಳು ಬಂದಾಗ ಕಾರ್ಯ ನಿರ್ವಹಿಸುವ ಹುದ್ದೆಯಿಂದ ಕೆಳಗಿಳಿದು ವಿಚಾರಣೆ ನಡೆಸಿ ಎಂದು ಹೇಳುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಇಲ್ಲ. ಈ ಹಿಂದೆ ಹಲವು ರಾಜಕಾರಣಿಗಳು ಆರೋಪಗಳು ಕೇಳಿ ಬಂದಾಗ ರಾಜೀನಾಮೆ ನೀಡಿ ವಿಚಾರಣೆ ಎದುರಿಸುತ್ತಿದ್ದರು. ಅಂಥ ಉದಾಹರಣೆಗಳೂ ಇವೆ.
ಬೇರೆ ಸಂಸ್ಥೆಗಳಲ್ಲಿ ನ್ಯೂನತೆ ಇರುವಂತೆ ನ್ಯಾಯಾಂಗದಲ್ಲಿಯೂ ನ್ಯೂನತೆಗಳಿಲ್ಲ, ಭ್ರಷ್ಟಾಚಾರ ಇಲ್ಲ ಎಂದು ಹೇಳುವುದಿಲ್ಲ. ಆದರೆ, ಇತರೆ ಸಂಸ್ಥೆಗಳಲ್ಲಿರುವಂತೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಅನೇಕ ಬಾರಿ ಕಾಲ ಹರಣ ಮಾಡಬೇಕು ಎಂಬ ಕಾರಣಕ್ಕಾಗಿ ಮೇಲ್ಮನವಿ ಸಲ್ಲಿಸಲಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯತೆ ಇದೆ. ಅಮೆರಿಕದಲ್ಲಿ ಎರಡೇ ನ್ಯಾಯಾಲಯಗಳಿವೆ. ಅಲ್ಲಿನ ವ್ಯವಸ್ಥೆ ನಮ್ಮಲ್ಲಿಯೂ ಜಾರಿಯಾದರೆ ಬೇಗ ಪ್ರಕರಣಗಳ ಇತ್ಯರ್ಥವಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ಅವರು ಹೇಳಿದ್ದಾರೆ.













