
ಕೊಡಗು: ಸೋಮವಾರ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ನಡುವೆ ನಡೆದ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
ಕಂಜನ್ ಆನೆ ದಂತದಿಂದ ಮನಬಂದಂತೆ ಚುಚ್ಚಿ ಗಾಯಗೊಳಿಸಿದ್ದರಿಂದ ಮಾರ್ತಾಂಡಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದು ಕೊನೆಯುಸಿರೆಳೆದಿದೆ. ಕಂಜನ್ ಆನೆಯ ಅಟ್ಟಹಾಸದಿಂದ ಮಾರ್ತಾಂಡ ಸಾವನ್ನಪ್ಪಿದ್ದು, ದುಬಾರೆ ಶಿಬಿರದಲ್ಲಿ ದುಃಖ ಮಡುಗಟ್ಟಿದೆ.
ಈ ಘಟನೆ ವೇಳೆ ತಮಿಳುನಾಡಿನಿಂದ ಬಂದಿದ್ದ ಪ್ರವಾಸಿ ಮಹಿಳೆ ಜೋಯ್ಸಿ ಕೂಡ ಕಾಡಾನೆಗಳ ದಾಳಿಗೆ ಬಲಿಯಾಗಿದ್ದರು. ಘಟನೆ ಹಿನ್ನೆಲೆ ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ದುಬಾರೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇಂದು ಹಾಗೂ ನಾಳೆ ಪ್ರವಾಸಿಗರಿಗೆ ಶಿಬಿರಕ್ಕೆ ಭೇಟಿ ನೀಡಲು ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



























