ಯಶ್ಪಾಲ್ ಸುವರ್ಣ ಮನವಿ, ನಿರ್ಮಲಾ ಸೀತಾರಾಮನ್ ಗೆ ಶಾಸಕರ ವಿನಂತಿ

ಉಡುಪಿ:ಉಡುಪಿ–ಮಂಗಳೂರು ಭಾಗದ ಸ್ಟಾರ್ಟ್ಅಪ್ ಕಂಪನಿಗಳ ಬೆಳವಣಿಗೆಗೆ ಪೂರಕವಾದ ನಿಯಮಗಳನ್ನು ರೂಪಿಸಿ, ಕೇಂದ್ರ ಬಜೆಟ್ನಲ್ಲಿ ವಿಶೇಷ ಅವಕಾಶಗಳನ್ನು ಕಲ್ಪಿಸುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಭಾಗದಲ್ಲಿ 25ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿ ವರ್ಷ 15,000 ಕ್ಕೂ ಹೆಚ್ಚು ಇಂಜಿನಿಯರ್ಗಳು ಉದ್ಯೋಗ ಕ್ಷೇತ್ರಕ್ಕೆ ಹೊರಹೊಮ್ಮುತ್ತಿದ್ದಾರೆ.
ಅಲ್ಲದೆ, 150 ಕ್ಕೂ ಹೆಚ್ಚು ಪದವಿ ಕಾಲೇಜುಗಳಿಂದ 40,000 ಕ್ಕೂ ಹೆಚ್ಚು ಪದವೀಧರರು ಪದವಿ ಪಡೆದು ಮಾರುಕಟ್ಟೆಗೆ ಬರುತ್ತಿದ್ದಾರೆ. 15 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಮತ್ತು 15 ಕ್ಕೂ ಹೆಚ್ಚು ಇನ್ಕ್ಯುಬೇಷನ್ ಸೆಂಟರ್ಗಳು ಇಲ್ಲಿ ಸಕ್ರಿಯವಾಗಿವೆ.
ಉಡುಪಿ ಮತ್ತು ಮಂಗಳೂರು ಉತ್ತಮ ಶಿಕ್ಷಣ ವ್ಯವಸ್ಥೆಯಿಂದ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿವೆ. ಸ್ಟಾರ್ಟ್ಅಪ್ಗಳಿಗೆ ಪೂರಕ ವಾತಾವರಣ ರೂಪುಗೊಂಡಿದ್ದು, ರೋಬೋ ಸಾಫ್ಟ್ ಟೆಕ್ನಾಲಜೀಸ್ ಹಾಗೂ ನವೀಸ್ ಸೊಲ್ಯೂಷನ್ಸ್ ಮುಂತಾದ ಸಂಸ್ಥೆಗಳು ಗಣನೀಯ ಸಾಧನೆ ಮಾಡಿವೆ.
ಬಜೆಟ್ನಲ್ಲಿ ವಿಶೇಷ ಪ್ಯಾಕೇಜ್ ಅಗತ್ಯ
ಯಶ್ಪಾಲ್ ಸುವರ್ಣ ಅವರು, ಕೇಂದ್ರ ಬಜೆಟ್ನಲ್ಲಿ ಈ ಪ್ರದೇಶದ ಸ್ಟಾರ್ಟ್ಅಪ್ಗಳಿಗೆ ಪ್ರೋತ್ಸಾಹ ನೀಡುವಂತಹ ನೀತಿಗಳನ್ನು ರೂಪಿಸುವ ಮೂಲಕ ಯುವ ಉದ್ಯಮಿಗಳ ಹಾಗೂ ಉದ್ಯೋಗಾಕಾಂಕ್ಷಿಗಳ ಭವಿಷ್ಯವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದ್ದಾರೆ.











































