
ನವದೆಹಲಿ: ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪೆಹಲ್ಗಾಮ್ನ ಬೈಸರನ್ ಕಣಿವೆ ಪ್ರದೇಶದಲ್ಲಿ ನಾಲ್ವರು ಉಗ್ರರು ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನ ಗುಂಡಿಕ್ಕಿ ಕೊಂದಿದ್ದು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಣ ತೊಟ್ಟಿದ್ದ ಭಾರತ ʻಆಪರೇಷನ್ ಸಿಂಧೂರʼ ಎಂಬ ಹೆಸರಿನಡಿ ಮಂಗಳವಾರ ತಡರಾತ್ರಿ 1:44 ಗಂಟೆ ಸುಮಾರಿಗೆ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಪ್ರತೀಕಾರದ ದಾಳಿಯಲ್ಲಿ 100 ಉಗ್ರರ ಹತ್ಯೆಯಾಗಿದೆ ಎಂದು ಇಂದು ಸಂಸತ್ ಭವನದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.
ಭಾರತ ನಡೆಸಿದ ವಾಯುದಾಳಿಯಲ್ಲಿ 100 ಉಗ್ರರ ಹತ್ಯೆಯಾಗಿದೆ. ನಾವು ಈ ಪರಿಸ್ಥಿತಿಯನ್ನು ಬೆಳೆಸಲು ಬಯಸುವುದಿಲ್ಲ. ಆದ್ರೆ ಪಾಕಿಸ್ತಾನ ಕಿತಾಪತಿ ಮಾಡಿದ್ರೆ ನಾವು ಸಹ ಹಿಂದೆ ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.



















