
ಹೊಸದಿಲ್ಲಿ: ಹಿಂದೂ ಧರ್ಮವು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿಲ್ಲ, ಅದು ಒಂದು ಜೀವನ ಪದ್ಧತಿ ಎಂಬ ಮಹತ್ವದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಬುಧವಾರ ವ್ಯಕ್ತಪಡಿಸಿದೆ. ದೇವಾಲಯಗಳಿಗೆ ತೆರಳುವುದು ಅಥವಾ ನಿರ್ದಿಷ್ಟ ಆಚರಣೆಗಳನ್ನು ಪಾಲಿಸುವುದು ಹಿಂದೂವಾಗಿ ಉಳಿಯಲು ಕಡ್ಡಾಯವಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶ, ದಾವೂದಿ ಬೊಹ್ರಾ ಸಮುದಾಯದ ಧಾರ್ಮಿಕ ಹಕ್ಕುಗಳ ವ್ಯಾಪ್ತಿ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಒಂಭತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ಅಭಿಪ್ರಾಯ ಹೊರಹಾಕಿತು.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಡಾ. ಜಿ. ಮೋಹನ್ ಗೋಪಾಲ್, “ಇಂದಿನ ಕಾಲದಲ್ಲಿ ಎಲ್ಲ ಹಿಂದೂಗಳೂ ವೇದಗಳನ್ನು ಅತ್ಯುನ್ನತ ಅಧಿಕಾರವೆಂದು ಒಪ್ಪಿಕೊಳ್ಳುತ್ತಾರೆ ಎನ್ನುವುದು ಸರಿಯೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ, “ಹಿಂದೂ ಧರ್ಮವನ್ನು ಜೀವನ ವಿಧಾನವೆಂದು ಕರೆಯುವುದೇ ಇದರ ಕಾರಣ” ಎಂದು ಅಭಿಪ್ರಾಯಪಟ್ಟರು.
ಧಾರ್ಮಿಕ ಆಚರಣೆಗಳನ್ನು ಪಾಲಿಸುವುದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯಾಗಿದ್ದು, ನಂಬಿಕೆಯನ್ನು ವ್ಯಕ್ತಪಡಿಸಲು ದೇವಾಲಯಕ್ಕೆ ಹೋಗಬೇಕೆಂಬ ಅನಿವಾರ್ಯತೆ ಇಲ್ಲ ಎಂದು ಹೇಳಿದ ಪೀಠವು “ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ದೀಪ ಹಚ್ಚಿದರೂ ಅವನ ಧರ್ಮ ಹಾಗೂ ನಂಬಿಕೆಯನ್ನು ತೋರಿಸಲು ಅದು ಸಾಕು” ಎಂದು ತಿಳಿಸಿದೆ.























