
ಬೆಂಗಳೂರು: ರಾಜ್ಯದ ವೈದ್ಯಕೀಯ ಸೀಟು ಆಕಾಂಕ್ಷಿಗಳು ನೀಟ್ ಫಲಿತಾಂಶದ ಬಗ್ಗೆ ಉನ್ನತ ತನಿಖೆಯಾಗಬೇಕು ಹಾಗೂ ಈಗ ನಡೆದಿರುವ ಪರೀಕ್ಷೆ ರದ್ದುಪಡಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ದೇಶಾದ್ಯಂತ ವಿದ್ಯಾರ್ಥಿಗಳು ತಪ್ಪು ಪ್ರಶ್ನೆಗಳನ್ನು ಕೇಳಿರುವುದು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿವಾದಾತ್ಮಕ ಫಲಿತಾಂಶದಿಂದ ಲಕ್ಷಾಂತರ ವೈದ್ಯಕೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ನೀಟ್ ಅಕ್ರಮದ ಸಮಗ್ರ ತನಿಖೆಗೆ ವಹಿಸಿ ಮರು ಪರೀಕ್ಷೆಗೆ ಆದೇಶಿಸಬೇಕು ಎಂದು ಹೋರಾಟ ಆರಂಭಿಸಿದ್ದಾರೆ.
ಮೊದಲು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು ಬಳಿಕ ಇತ್ತೀಚೆಗೆ ಪ್ರಕಟವಾದ ನೀಟ್ ಫಲಿತಾಂಶದಲ್ಲಿ ಬರೋಬ್ಬರಿ 67 ಮಂದಿ ಮೊದಲ ರ್ಯಾಂಕ್ ಹಂಚಿಕೊಂಡಿರುವುದಲ್ಲದೆ, ಈ ಪೈಕಿ 8 ಮಂದಿ ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ. ಅಷ್ಟೇ ಅಲ್ಲ, ಆ ಆರೂ ಜನ ಒಂದೇ ನೀಟ್ ತರಬೇತಿ ಕೇಂದ್ರದವರಾಗಿರುವ ಜೊತೆಗೆ ಅವರ ರೋಲ್ ನಂಬರ್ಗಳು ಕೂಡ ಒಂದೇ ಅನುಕ್ರಮದಲ್ಲಿರುವುದು ವಿಪರೀತ ಅನುಮಾನಗಳ ಸೃಷ್ಟಿಗೆ ಕಾರಣವಾಗಿದೆ.
ಈ ವಿದ್ಯಾರ್ಥಿಗಳ ರೋಲ್ ನಂಬರ್ 2307010168 ರೀತಿ ಆರಂಭವಾಗಿ ಕೊನೆಯ ಮೂರು ನಂಬರ್ ಮಾತ್ರ 333, 403, 460, 178, 037, 186, 198 ಆಗಿದೆ. ಇವರೆಲ್ಲರೂ 720 ಅಂಕಗಳನ್ನು ಪಡೆದವರಾಗಿದ್ದಾರೆ. ಇದು ಹೇಗೆ ಸಾಧ್ಯ ಎನ್ನುವ ಬಗ್ಗೆ ದೇಶಾದ್ಯಂತ ವಿದ್ಯಾರ್ಥಿಗಳು, ಸಾರ್ವಜನಿಕರು, ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ಜನರಿಂದ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಭಾರೀ ಅಸಮಾಧಾನ, ಆಕ್ರೋಶ, ಪ್ರಶ್ನೆಗಳ ಸುರಿಮಳೆಯಾಗುತ್ತಿದೆ. ಇದರ ನಡುವೆ, ಇಬ್ಬರು ವಿದ್ಯಾರ್ಥಿಗಳಿಗೆ ಫಲಿತಾಂಶದಲ್ಲಿ 718 ಮತ್ತು 719 ಅಂಕಗಳನ್ನು ನೀಡಿರುವುದು, ಟಾಪರ್ಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿರುವುದು ಕೂಡ ವೈದ್ಯಸೀಟು ಆಕಾಂಕ್ಷಿಗಳು ಮತ್ತು ಪೋಷಕರ ವಲಯದಲ್ಲಿ ಸಂಶಗಳಿಗೆ ಎಡೆಮಾಡಿಕೊಟ್ಟಿದೆ.
ಉದಾಹರಣೆಗೆ 700 ಅಂಕ ಪಡೆದವರ ಸಂಖ್ಯೆ ಕಳೆದ ವರ್ಷ 172 ಇದ್ದರೆ ಈ ಬಾರಿ 1770ಕ್ಕೇರಿದೆ. ಕಳೆದ ಬಾರಿ 7288 ಮಂದಿ 650 ಅಂಕ ಪಡೆದಿದ್ದರೆ ಈ ಬಾರಿ ಈ ಸಂಖ್ಯೆ 29012ಕ್ಕೇರಿದೆ. ಇದೇ ರೀತಿ 602, 550, 500 ಅಂಕಗಳನ್ನು ಪಡೆದವರ ಸಂಖ್ಯೆಗಳೂ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಕಳೆದ ವರ್ಷ ಉತ್ತಮ ಫಲಿತಾಂಶ ಎಂದು ಭಾವಿಸಿದ್ದ ಕಟ್ಆಫ್ ಅಂಕಗಳ ಬೆಲೆ ಕಡಿಮೆಯಾದಂತಾಗಿದೆ. ಹೀಗಾಗಿ ಉತ್ತಮ ಫಲಿತಾಂಶ ಬಂದರೂ ಸಾಕಷ್ಟು ಮಂದಿ ವೈದ್ಯಸೀಟು ಪಡೆಯುವುದು ಕಷ್ಟವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.