
ಸುಗಮ ಹಾಗೂ ಸುರಕ್ಷಿತ ಸಂಚಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ (ರಿ.) ನಿಟ್ಟೆ ಹಾಗೂ ಎಸ್. ಕೆ. ಗೋಲ್ಡ್ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಸ್ತೆ ಸುರಕ್ಷತಾ ಅಭಿಯಾನ’ವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

“ಸುರಕ್ಷಿತ ರಸ್ತೆ – ಸುರಕ್ಷಿತ ಜೀವನ” ಹಾಗೂ “ನಮ್ಮ ರಸ್ತೆ, ನಮ್ಮ ಜವಾಬ್ದಾರಿ” ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಈ ಅಭಿಯಾನದಲ್ಲಿ, ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ ಮಾರ್ಗದ ದೂಪದಕಟ್ಟೆಯಿಂದ ಹಾಳೆಕಟ್ಟೆವರೆಗಿನ ಸುಮಾರು 5 ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಹಾಗೂ ಸುರಕ್ಷತಾ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಅಭಿಯಾನದಲ್ಲಿ ಕೈಗೊಂಡ ಪ್ರಮುಖ ಕಾರ್ಯಗಳು:
ಮಣ್ಣು ತೆರವು: ಮಳೆ ಹಾಗೂ ಇತರ ಕಾರಣಗಳಿಂದ ರಸ್ತೆ ಮೇಲ್ಭಾಗದಲ್ಲಿ ಸಂಗ್ರಹವಾಗಿದ್ದ ಮಣ್ಣನ್ನು ಸಂಪೂರ್ಣವಾಗಿ ತೆಗೆದು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಗಿಡಗಂಟಿಗಳ ತೆರವು: ವಾಹನ ಸವಾರರ ದೃಷ್ಟಿಗೆ ಅಡ್ಡಿಯಾಗುತ್ತಿದ್ದ ಮತ್ತು ತಿರುವುಗಳಲ್ಲಿ ಅಪಘಾತಕ್ಕೆ ಕಾರಣವಾಗುತ್ತಿದ್ದ ರಸ್ತೆ ಬದಿಯ ಗಿಡಗಂಟಿಗಳನ್ನು ಹಾಗೂ ಮರದ ಕೊಂಬೆಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಫಲಕಗಳ ಸ್ವಚ್ಛತೆ: ದೂಳು, ಪಾಚಿ ಮತ್ತು ಮಣ್ಣಿನಿಂದ ಮಬ್ಬಾಗಿದ್ದ ರಸ್ತೆ ಸುರಕ್ಷತಾ ಮತ್ತು ಸೂಚನಾ ಫಲಕಗಳನ್ನು (Sign boards) ತೊಳೆದು ಸ್ವಚ್ಛಗೊಳಿಸಲಾಯಿತು.
ಸೂಚನಾ ಫಲಕಗಳ ಮರುಸ್ಥಾಪನೆ: ಗಿಡಗಂಟಿಗಳಿಂದ ಮುಚ್ಚಿಹೋಗಿ ಪ್ರಯಾಣಿಕರಿಗೆ ಗೋಚರಿಸದಂತಿದ್ದ ಸೂಚನಾ ಫಲಕಗಳ ಮೇಲಿದ್ದ ಬೀಳು, ಗಿಡಮರದ ಗೆಲ್ಲುಗಳನ್ನು ತೆರವುಗೊಳಿಸಿ, ವಾಹನ ಸವಾರರಿಗೆ ಸ್ಪಷ್ಟವಾಗಿ ಕಾಣುವಂತೆ ಮಾಡಲಾಯಿತು.
ಗಣ್ಯರ ಭೇಟಿ ಹಾಗೂ ಶ್ಲಾಘನೆ:
ಕಾರ್ಕಳ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಅವರು ಈ ಅಭಿಯಾನಕ್ಕೆ ಭೇಟಿ ನೀಡಿ, ಕಾರ್ಯಕರ್ತರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು. ಅಲ್ಲದೆ, ಎಸ್. ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಅಧ್ಯಕ್ಷರಾದ ಉಪೇಂದ್ರ ಆಚಾರ್ಯ, ಪ್ರಧಾನ ವ್ಯವಸ್ಥಾಪಕರಾದ ಯಜನೇಶ್ವರ ಆಚಾರ್ಯರು ಈ ಸಮಾಜಮುಖಿ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು, ಬ್ಯಾಂಕಿನ ಶಿರ್ವ ಶಾಖೆಯ ಪ್ರಬಂಧಕರಾದ ಶ್ರೀ ದಿನೇಶ್ ಆಚಾರ್ಯರು ಶ್ಲಾಘಿಸಿದರು.
ಈ ಅಭಿಯಾನದಲ್ಲಿ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ (ರಿ.) ನಿಟ್ಟೆ, ಇದರ ಅಧ್ಯಕ್ಷರಾದ ಶ್ರೀ ಹರ್ಷವರ್ಧನ್ ನಿಟ್ಟೆ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳಾದ ಲಕ್ಷ್ಮಣ ಆಚಾರ್ಯ, ಜಯಾನಂದ ಆಚಾರ್ಯ, ಮುರಳೀಧರ ಆಚಾರ್ಯ, ಶ್ರೀಧರ ಆಚಾರ್ಯ ಕೆಮ್ಮಣ್ಣು ಮತ್ತಿತರ ಸದಸ್ಯರು, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ಪದಾಧಿಕಾರಿಗಳು ಸದಸ್ಯರು, ನಿಟ್ಟೆ ವಿಶ್ವಕರ್ಮ ಯುವವೇದಿಕೆಯ ಅಧ್ಯಕ್ಷರಾದ ಪ್ರದೀಪ್ ಆಚಾರ್ಯ ಪರಪ್ಪಾಡಿ, ಉಪಾಧ್ಯಕ್ಷ ಸುಧೀರ್ ಕಲ್ಯಾ, ಕಾರ್ಯದರ್ಶಿ ಪ್ರದೀಪ್ ಆಚಾರ್ಯ ಕೆಮ್ಮಣ್ಣು ಹಾಗೂ ಸ್ವಯಂಸೇವಕರು ಅತ್ಯುತ್ಸಾಹದಿಂದ ಪಾಲ್ಗೊಂಡು ಶ್ರಮದಾನ ಮಾಡಿದರು. ಅಪಘಾತ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಹಾಗೂ ತಮ್ಮ ಸುತ್ತಮುತ್ತಲಿನ ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳಲಾಯಿತು.











































