
ಮಂಗಳೂರು: ತುಳುನಾಡಿನ ರಾಜಧಾನಿ ಮಂಗಳೂರಿನಲ್ಲಿ ಇದೇ ಡಿಸೆಂಬರ್ 21 ರಿಂದ ಜನವರಿ 19 ರವರೆಗೆ ಮತ್ತೊಮ್ಮೆ ‘ಕರಾವಳಿ ಉತ್ಸವʼ ವಿಜೃಂಭಣೆಯಿಂದ ನಡೆಯಲಿದೆ.
ಡಿಸೆಂಬರ್ 21 ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಸಂಜೆ 4 ಗಂಟೆಗೆ ಕೊಡಿಯಾಲ್ ಬೈಲ್ ನ ಕೆನರಾ ಕಾಲೇಜಿನಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಸಂಸ್ಕೃತಿ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಕಲಾವಿದರ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು ಸಂಜೆ 5.30 ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಈ ಬಾರಿಯ ಕರಾವಳಿ ಉತ್ಸವಕ್ಕೆ ಚಾಲನೆ ದೊರೆಯಲಿದೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಡಿಸೆಂಬರ್ 21 ಮತ್ತು 22 ರಂದು ವಿದ್ಯುದ್ದೀಪಗಳಿಂದ ಅಲಂಕೃತವಾದ ವೇದಿಕೆಯಲ್ಲಿ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.
ವಸ್ತು ಪ್ರದರ್ಶನ ‘ಜಾಗತಿಕ ಹಳ್ಳಿ” ಎಂಬ ಧೈಯದೊಂದಿಗೆ ಕರಾವಳಿಯ ನೈಜ ಸಂಸ್ಕೃತಿ, ಸಂಪ್ರದಾಯ, ಸಾಹಿತ್ಯ, ಉಡುಗೆ ತೊಡುಗೆ ಮತ್ತು ಖಾದ್ಯಗಳನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಇಲ್ಲಿ ಕೈಮಗ್ಗ, ನೇಕಾರ, ಕುಂಬಾರ, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಇನ್ನಿತರ ಕೌಶಲ್ಯಗಳ ಅನಾವರಣವಾಗಲಿದ್ದು ಆದಿವಾಸಿ ಮತ್ತು ಗುಡ್ಡಗಾಡು ಜನಾಂಗದ ಸಾಂಪ್ರದಾಯಿಕ ಉತ್ಪನ್ನಗಳು ಸಹ ದೊರೆಯಲಿದೆ.
ತಣ್ಣೀರು ಬಾವಿ ಬೀಚ್ ನಲ್ಲಿ ಡಿಸೆಂಬರ್ 28 ಮತ್ತು 29ರಂದು ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು ಶನಿವಾರ ಸಂಜೆ 6 ಗಂಟೆಗೆ ಬೀಚ್ ಉತ್ಸವ ಉದ್ಘಾಟನೆಗೊಳ್ಳಲಿದೆ. ಸಂಜೆ 6.30 ರಿಂದ ವಿವಿಧ ತಂಡಗಳ ನೃತ್ಯ ಪ್ರದರ್ಶನಗಳು, ಹೊಸ ತಲೆಮಾರಿನ ವಿಶಿಷ್ಟ ಸಂಗೀತ ಸಂಯೋಜಕರು ಮತ್ತು ಗಾಯಕ ರಘು ದೀಕ್ಷಿತ್ ಅವರ ತಂಡದ ಕಾರ್ಯಕ್ರಮ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದ್ದು, ಸಾರ್ವಜನಿಕರನ್ನು ರಂಜಿಸಲಿದೆ.
ಭಾನುವಾರ ಡಿ.29 ರಂದು ಬೆಳಿಗ್ಗೆ 5.30ಕ್ಕೆ ಯೋಗ, 6.30ಕ್ಕೆ ಜುಂಬ (ಏರೋನಾಟಿಕ್ಸ್) ಮತ್ತು 9 ಗಂಟೆಯಿಂದ ಬೀಚ್ ಸ್ಪೋರ್ಟ್ಸ್ ಮುಂತಾದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 5.30ಕ್ಕೆ ಆನ್ಸೆನ್ ಸ್ಪರ್ಧೆ ಮೂಲಕ ನೃತ್ಯ ಪ್ರದರ್ಶನ ನಡೆಯಲಿದೆ ಮತ್ತು ರಾತ್ರಿ 8 ಗಂಟೆಗೆ ಶೋರ್ ಬ್ಯಾಂಡ್ ಪ್ರದರ್ಶನಗಳು ನಡೆಯಲಿವೆ.
ಕರ್ನಾಟಕ, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ ಅಕಾಡೆಮಿಗಳ ಸಹಕಾರದೊಂದಿಗೆ ನಡೆಯಲಿರುವ ಈ ಉತ್ಸವದಲ್ಲಿ ಕರಾವಳಿಯ ವೈವಿಧ್ಯತೆಗಳು ಸಾರ್ವಜನಿಕರನ್ನು ರಂಜಿಸಲಿವೆ.