
ಹೊಸದಿಲ್ಲಿ: ಪಂಚರಾಷ್ಟ್ರಗಳ ಪ್ರವಾಸದ ಅಂಗವಾಗಿ ನೆದರ್ಲ್ಯಾಂಡ್ನ ಹೇಗ್ ನಗರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಸವಾಲುಗಳು ಹಲವು ದಶಕಗಳಿಂದ ವಿಶ್ವ ಸಾಧಿಸಿರುವ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕದ ಬಳಿಕ ಜಗತ್ತು ಇನ್ನೂ ಸಂಪೂರ್ಣ ಚೇತರಿಸಿಕೊಳ್ಳುವ ಮುನ್ನವೇ ಅನೇಕ ದೇಶಗಳ ನಡುವೆ ಯುದ್ಧ ಪರಿಸ್ಥಿತಿಗಳು ಉಂಟಾಗಿವೆ. ಇದರೊಂದಿಗೆ ಜಾಗತಿಕ ಇಂಧನ ಬಿಕ್ಕಟ್ಟು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಈ ಬೆಳವಣಿಗೆಗಳು ವಿಶ್ವದ ಆರ್ಥಿಕ ಸ್ಥಿತಿಗತಿಗಳನ್ನು ಅಸ್ಥಿರಗೊಳಿಸುತ್ತಿದ್ದು, ಸಾಮಾನ್ಯ ಜನರ ಬದುಕಿನ ಮೇಲೂ ನೇರ ಪರಿಣಾಮ ಬೀರುತ್ತಿವೆ. ಈ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಲು ವಿಫಲವಾದರೆ ವಿಶ್ವದ ಅನೇಕ ರಾಷ್ಟ್ರಗಳು ಮತ್ತೆ ಬಡತನದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಮೋದಿ ಎಚ್ಚರಿಸಿದರು.
ಕೋವಿಡ್ ನಂತರ ಪುನಶ್ಚೇತನದ ಹಾದಿಯಲ್ಲಿದ್ದ ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳು ಈಗ ಹೊಸ ಆರ್ಥಿಕ ಒತ್ತಡಗಳನ್ನು ಎದುರಿಸುತ್ತಿವೆ. ಇದರಿಂದ ಉದ್ಯೋಗ, ಉತ್ಪಾದನೆ ಮತ್ತು ವ್ಯಾಪಾರ ಕ್ಷೇತ್ರಗಳ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆ ಕೇವಲ ಆರ್ಥಿಕ ಸಮಸ್ಯೆಯಲ್ಲ, ಅದು ಮಾನವೀಯ ಕಳಕಳಿಯ ವಿಷಯವೂ ಆಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ತೈಲ ಮತ್ತು ಅನಿಲದ ಬೆಲೆ ಏರಿಕೆಯಿಂದ ಸಾರಿಗೆ ವೆಚ್ಚ, ಆಹಾರ ಪೂರೈಕೆ ಹಾಗೂ ಗೃಹ ಖರ್ಚುಗಳ ಭಾರ ಹೆಚ್ಚುತ್ತಿದ್ದು ಇದರ ಹೊರೆ ಸಾಮಾನ್ಯ ಜನರ ಮೇಲೆ ಹೆಚ್ಚಾಗಿ ಬೀಳುತ್ತಿದೆ. ಇಂಧನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಕೆಲವೇ ರಾಷ್ಟ್ರಗಳ ಮೇಲೆ ಅವಲಂಬಿತವಾಗಿರುವ ಪರಿಸ್ಥಿತಿ ಬದಲಾಗಬೇಕು. ಪರ್ಯಾಯ ಇಂಧನ ಮೂಲಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದ್ದು, ಜಾಗತಿಕ ಸಹಕಾರದ ಮೂಲಕವೇ ಈ ಸಂಕಷ್ಟಗಳನ್ನು ಎದುರಿಸಲು ಸಾಧ್ಯ ಎಂದು ಹೇಳಿದರು.
“ಮೊದಲು ಕೊರೋನಾ ಬಂತು, ನಂತರ ಯುದ್ಧಗಳು ಪ್ರಾರಂಭವಾದವು ಮತ್ತು ಈಗ ಇಂಧನ ಬಿಕ್ಕಟ್ಟು ಎದುರಾಗಿದೆ. ಈ ದಶಕವೇ ಜಗತ್ತಿನ ಪಾಲಿಗೆ ಸವಾಲುಗಳ ದಶಕವಾಗಿ ಪರಿಣಮಿಸಿದೆ” ಎಂದು ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ.























