
ನವದೆಹಲಿ: ಅಯೋಧ್ಯ ಬಾಲರಾಮನ ದರ್ಶನ ಪಡೆಯಲು ಪಾಕಿಸ್ತಾನದಿಂದ ಅಲ್ಪಸಂಖ್ಯಾತ ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದ 200 ಮಂದಿ ಜನರು ಭೇಟಿ ನೀಡಲಿದ್ದಾರೆ.
ಈಗಾಗಲೇ ಈ 200 ಜನರು ಪಾಕಿಸ್ತಾನದಿಂದ ಪ್ರಯಾಣ ಬೆಳೆಸಿದ್ದು ವರದಿಗಳ ಪ್ರಕಾರ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಹೊರಟಿರುವ ಈ ಗುಂಪು ಪ್ರಯಾಗ್ರಾಜ್ ನಗರದಿಂದ (ಔರಂಗಾಬಾದ್) ಅಯೋಧ್ಯೆಗೆ ಬಸ್ ಮೂಲಕ ತೆರಳಲಿದೆಯಂತೆ. ಪಾಕಿಸ್ತಾನದ ಈ 200 ಮಂದಿ ಸಿಂಧಿ ಜನರ ಪ್ರಯಾಣದಲ್ಲಿ ಭಾರತೀಯ ಸಿಂಧಿ ಸಮುದಾಯದ 150 ಮಂದಿಯೂ ಜೊತೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ರಾಮಮಂದಿರ ಟ್ರಸ್ಟ್ ಅಧಿಕಾರಿಗಳು ನೀಡಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸೇರಿದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಸಿಂಧಿ ವಿಕಾಸ್ ಪರಿಷದ್ನ ಸದಸ್ಯ ವಿಶ್ವಪ್ರಕಾಶ್ ರೂಪನ್ ಪ್ರಕಾರ ಪಾಕಿಸ್ತಾನದಿಂದ ಬರುತ್ತಿರುವ ಸಿಂಧಿಗಳ ನಿಯೋಗವು ಮೊದಲಿಗೆ ಭರತ್ ಕುಂಡ್ನಲ್ಲಿ ಸೇರಲಿದ್ದು ಬಳಿಕ ಗುಪ್ತರ್ ಘಾಟ್ಗೆ ಬರಲಿದ್ದಾರೆ. ಉದಾಸಿನ್ ಋಷಿ ಆಶ್ರಮ್ ಮತ್ತು ಶಬರಿ ರಸೋಯ್ನಲ್ಲಿ ಈ ನಿಯೋಗಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಇಂದು ಸಂಜೆ ರಾಮ್ ಕೀ ಪೈಡಿಯಲ್ಲಿ ನಡೆಯಲಿರುವ ಸರಯೂ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಯೋಧ್ಯೆಯ ಸಿಂಧಿ ಧಾಮ್ ಆಶ್ರಮ್ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಭಾರತದ ವಿವಿಧ ಸಿಂಧಿ ಸಂಘಟನೆಗಳು ಪಾಕಿಸ್ತಾನದಿಂದ ಬಂದಿರುವ ತಮ್ಮ ಬಾಂಧವರನ್ನು ಸ್ವಾಗತಿಸಲಿದ್ದಾರೆ. ಸಂತ್ ಸಾದಾ ರಾಮ್ ದರ್ಬಾರ್ ಪೀಠದ ಮುಖ್ಯಸ್ಥ ಯುದಿಷ್ಠಿರ್ ಲಾಲ್ ಕೂಡ ಈ ವೇಳೆ ಇರಲಿದ್ದಾರೆ ಎಂದು ತಿಳಿದುಬಂದಿದೆ.