
ಶಬರಿಮಲೆ: ತಿರು ವಿದಾಂಕೂರು ಮುಜರಾಯಿ ಮಂಡಳಿಯು ಶಬರಿಮಲೆಗೆ ಹರಿದು ಬರುತ್ತಿರುವ ಭಕ್ತರಿಗೆ ಉಚಿತ ಅನ್ನದಾನಕ್ಕಾಗಿ ಮೂರು ಅನ್ನದಾನ ಮಂಟಪಗಳನ್ನು ಆರಂಭಿಸುತ್ತಿದೆ.
ಭಕ್ತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಡಿ.1ರ ತನಕದ ಲೆಕ್ಕಾಚಾರದಂತೆ ಮಂಡಲ ಕಾಲದ ತೀರ್ಥಾಟನೆ ಆರಂಭಗೊಂಡ ಬಳಿಕ 3.52 ಲಕ್ಷ ಭಕ್ತರು ಅನ್ನದಾನ ಸ್ವೀಕರಿಸಿದ್ದಾರೆ.
ಸನ್ನಿಧಾನ, ಪಂಪಾ ಮತ್ತು ನೀಲಕ್ಕಲ್ನಲ್ಲಿ ಅನ್ನದಾನ ಮಂಟಪ ಆರಂಭಿಸಲಾಗಿದ್ದು ಈ ಪೈಕಿ ಸನ್ನಿಧಾನದಲ್ಲಿ ಡಿ.1ರ ತನಕ 2.60 ಲಕ್ಷ, ಪಂಪಾದಲ್ಲಿ 62 ಸಾವಿರ ಹಾಗೂ ನೀಲಕ್ಕಲ್ನಲ್ಲಿ 30 ಸಾವಿರ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.
ಈ ಅನ್ನದಾನ ಮಂಟಪದಲ್ಲಿ ಪ್ರತಿದಿನ ಮೂರು ಹೊತ್ತು ಆಹಾರ ನೀಡಲಾಗುತ್ತಿದ್ದು ಬೆಳಗ್ಗೆ 6.30ರಿಂದ 11ರ ವರೆಗೆ ಸಜ್ಜಿಗೆ, ಕಡಲೆ ಪದಾರ್ಥ ಹಾಗೂ ಶುಂಠಿ ಕಾಫಿ ಹಾಗೂ 11.45ರ ಬಳಿಕ ಊಟ ಆರಂಭಗೊಂಡು ಸಂಜೆ 4 ಗಂಟೆಯ ವರೆಗೆ ನೀಡಲಾಗುತ್ತಿದೆ. ಇನ್ನು ಸಂಜೆ 6.30ರಿಂದ ಮಧ್ಯರಾತ್ರಿ ತನಕ ಗಂಜಿಯೂಟ ವಿತರಿಸಲಾಗುತ್ತಿದೆ. ಪಂಪಾದಲ್ಲಿ 130 ಮಂದಿ,ಸನ್ನಿಧಾನದಲ್ಲಿ 1,000 ಮಂದಿ ಮತ್ತು ನೀಲಕ್ಕಲ್ನಲ್ಲಿ 100 ಮಂದಿ ಒಂದೇ ಬಾರಿ ಕುಳಿತು ಆಹಾರ ಸೇವಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.



















