ಕಥೆ (ಭಾಗ- 18)
ಚೇತನ್ ವರ್ಕಾಡಿ

ಅವಳ ನೇರದೃಪ್ಟಿಯನ್ನು ನೋಡಲಾಗದೆ ಎದ್ದು ಹೊರಗಡೆ ಬಂದೇಬಿಟ್ಟ. ಮನದೊಳಗೆ ಕಟ್ಟಿದ್ದ ಪ್ರೀತಿಯ ಗೋಪುರ ಅಲುಗಾಡುತ್ತಿದೆ.ಪ್ರೀತಿ ಒಂದು ಕಡೆಯಾದರೆ ಸ್ನೇಹ ಇನ್ನೊಂದು ಕಡೆ…!ಮಧುವಿನ ಮನಸು ಚಂಚಲವಾಗಿದೆ.ಮೊದಲ ಬಾರಿ ಮಂಗಳಳನ್ನು ಕಂಡಾಗಿನಿಂದ ತನ್ನ ಹೃದಯಮಂದಿರದಲ್ಲಿ ಇಟ್ಟು ಕನಸಿನ ರಾಣಿಯಾಗಿ ಕನವರಿಸುತ್ತಾ ಬಂದವನು ಅವನು,ಈ ದಿನ ಆ ಎಲ್ಲಾ ಖುಷಿಗಳಿಗೆ ಅಂತ್ಯವಾಡುವ ಗಳಿಗೆ ಬಂದೊದಗಿದಂದಿತ್ತು..
ಮಂಗಳಳಿಗೆ ಕೊನೆಗೂ ಮಧುವನ್ನು ಕಂಡ ದಿನ ನೆನಪಾಯಿತು,ಅದನ್ನು ಅವನ ಬಳಿ ಕೇಳುವಷ್ಟರಲ್ಲೇ ಮಧು ಹೊರಗಡೆ ಬಂದಿದ್ದ. ಅಲ್ಲೆ ಪಕ್ಕದಲ್ಲಿದ್ದ ಮಿಥುನ್ನನ್ನು ಹಾಗೆ ತನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಮಂಗಳ ನಾಚಿನೀರಾಗಿ ಒಳಗಡೆ ಹೋದಳು.ಅವಳು ಹಿಂತಿರುಗಿ ಹೋಗಬೇಕಾದರೆ ಅವಳ ನೀಲಜಡೆಯನ್ನು ಕಂಡ ಮಿಥುನ್ನಿಗೆ ಮಂಗಳ ಒಪ್ಪಿಗೆ ಆಗಿಯೆ ಬಿಟ್ಟಳು.ತನ್ನ ಮನದಾಸೆಯನ್ನು ನೇರವಾಗಿ ರಾಘವ ಮತ್ತು ಯಶೋಧಳ ಬಳಿ ಹೇಳಿದ ಮಿಥುನ್ ,ನಿಶ್ಚಿತಾರ್ಥಕ್ಕೆ ಒಳ್ಳೆಯ ದಿನ ಹುಡುಕಲು ಹೇಳಿ ಮನೆಯಿಂದ ಹೊರ ನಡೆದವನೆ ಅತ್ತಿತ್ತ ನೋಡಬೇಕಾದರೆ ಮಧು ಎಲ್ಲಿಯೂ ಕಾಣುತ್ತಿಲ್ಲ.ಸುತ್ತಲೂ ಕಣ್ಣು ಹಾಯಿಸಿ ನೋಡಿದರೆ ಕಾರಿನೊಳಗೆ ಆಗಲೆ ಕೂತು ಮಿಥುನ್ಗಾಗಿ ಕಾಯುತ್ತಿದ್ದ ಮಧು.ಮಿಥುನ್ ಸೀದಾ ಕಾರಿನ ಕಡೆಗೆ ಬಂದವನೆ ಬಾಗಿಲು ತೆಗೆದು ಕುಳಿತುಕೊಳ್ಳುವಷ್ಟರಲ್ಲಿ ಮನೆಯ ಕಿಟಿಕಿಯಿಂದ ಮಂಗಳ ಳ ನಗು ಅವನಿಗೆ ಎದ್ದು ಕಾಣುತ್ತಿತ್ತು. ಮೊದಲ ಬೇಟಿಯಲ್ಲೆ ಅದೆಷ್ಟೋ ದಿನಗಳ ಪ್ರೀತಿಯಂತೆ ಆದ ಅನುಭವ ಮಿಥುನ್ಗೆ. ತಾನು ನಗು ಬೀರುತ್ತಾ ಬಾಯ್ ಎಂದು ಕೈ ಸನ್ನೆ ತೋರಿಸಿದಾಗ ಮಂಗಳ ಕೂಡ ಒಳಗಿನಿಂದ ಪ್ರತ್ಯುತ್ತರ ನೀಡಿದಳು.ಎಲ್ಲವನ್ನೂ ನೋಡುತ್ತಿದ್ದ ಮಧುವಿಗೆ ಅದೇನು ಆಯ್ತೋ…..ಸಡನ್ನಾಗಿ..?
(ಮುಂದುವರಿಯುವುದು)













