
ವಾಷಿಂಗ್ಟನ್: ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಷ್ಠಿತ ಜಾರ್ಜ್ಟೌನ್ ವಿವಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದು ಈ ವೇಳೆ ಭಾರತದಲ್ಲಿ ಸಂಪೂರ್ಣ ಸಮಾನತೆ ಬಂದಾಗ ಮೀಸಲಾತಿಯನ್ನು ರದ್ದುಗೊಳಿಸಲು ಕಾಂಗ್ರೆಸ್ ಪಕ್ಷವು ಯೋಚಿಸುತ್ತದೆ. ಆದರೆ ಸದ್ಯಕ್ಕೆ ಇದು ಸಾಧ್ಯವಿಲ್ಲ ಎಂದು ಹೇಳಿದರು.
ಸೋಮವಾರ ವಾಷಿಂಗ್ಟನ್ ಡಿ.ಸಿಯ ಜಾರ್ಜ್ಟೌನ್ ವಿವಿಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ‘ನಿಮಗೆ ಅಚ್ಚರಿ ಆಗಬಹುದು. ನಾನು ವಾಸ್ತವವಾಗಿ ಮಿ.ಮೋದಿ ಅವರನ್ನು ದ್ವೇಷಿಸುವುದಿಲ್ಲ. ಅವರನ್ನು ನಾನು ನನ್ನ ವೈರಿ ಎಂದು ಪರಿಗಣಿಸಿಲ್ಲ. ಅವರು ಬೇರೆಯದ್ದೇ ಆದ ದೃಷ್ಟಿಕೋನ ಹಾಗೂ ಚಿಂತನೆ ಹೊಂದಿದ್ದಾರೆ. ನಾನು ಬೇರೆಯದ್ದೇ ದೃಷ್ಟಿಕೋನ ಹೊಂದಿದ್ದೇನೆ. ಇನ್ನೂ ಹೇಳಬೇಕೆಂದರೆ ಬಹಳಷ್ಟು ಸಮಯದಲ್ಲಿ ನಾನು ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತೇನೆ ಮತ್ತು ಅವರ ಬಗ್ಗೆ ಅನುಕಂಪ ಹೊಂದಿದ್ದೇನೆ. ಏಕೆಂದರೆ ದ್ವೇಷಿಸುವುದಕ್ಕಿಂತ ಸಹಾನುಭೂತಿ ಉತ್ತಮ’ ಎಂದು ಹೇಳಿದ್ದಾರೆ.













