
ಬೆಂಗಳೂರು: ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರಿಗೆ ಇಂಧನದ ಅಳತೆಯಲ್ಲಿ ವಂಚನೆಯಾಗದಂತೆ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅನುಮಾನ ಬಂದಲ್ಲಿ ಸ್ಥಳದಲ್ಲೇ ಅಳತೆ ಪರಿಶೀಲಿಸಲು ಅವಕಾಶ ನೀಡಬೇಕು ಹಾಗೂ ದೂರುಗಳಿಗಾಗಿ ಉಚಿತ ಸಹಾಯವಾಣಿ ಬಳಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಸೂಚಿಸಿದ್ದಾರೆ.
ರಾಜ್ಯದ 5,946 ಪೆಟ್ರೋಲ್ ಬಂಕ್ಗಳ ಪೈಕಿ ಮೊದಲ ಹಂತದಲ್ಲಿ 805 ಬಂಕ್ಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ 768 ಬಂಕ್ಗಳಲ್ಲಿ ಇಂಧನದ ಅಳತೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, 101 ಬಂಕ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪರಿಶೀಲಿಸಿದ 3,071 ಪೆಟ್ರೋಲ್ ಪೂರೈಕೆ ಗನ್ಗಳ ಪೈಕಿ 2,618 ಗನ್ಗಳಲ್ಲಿ ಅಳತೆ ದೋಷ ಪತ್ತೆಯಾಗಿದೆ. ಅಂದರೆ, ತಪಾಸಣೆಗೊಳಪಟ್ಟ ಸುಮಾರು ಶೇ.85ರಷ್ಟು ಗನ್ಗಳಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಂಟಿ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತಿದೆ.
ವಂಚನೆ ತಡೆಯಲು ಪೆಟ್ರೋಲ್ ಗನ್ಗಳ ನಿರಂತರ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಗ್ರಾಹಕರಿಗೆ ಹಣಕ್ಕೆ ತಕ್ಕಷ್ಟು ಇಂಧನ ದೊರೆಯುವಂತೆ ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿ ಎಂದ ಅವರು, ಅಕ್ರಮ ಎಸಗುವ ಬಂಕ್ಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ವಂಚನೆ ಸಾಬೀತಾದಲ್ಲಿ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ರಾಜ್ಯಾದ್ಯಂತ ಪೆಟ್ರೋಲ್ ಬಂಕ್ಗಳ ಮೇಲೆ ಹಠಾತ್ ದಾಳಿ ಹಾಗೂ ಪರಿಶೀಲನೆ ಮುಂದುವರಿಯಲಿದೆ.
ಇದೇ ವೇಳೆ ಕೇಂದ್ರ ಸರ್ಕಾರದ ಕ್ಯಾಲಿಬರೇಷನ್ ನಿಯಮಗಳ ಬದಲಾವಣೆಗೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ವರ್ಷಕ್ಕೊಮ್ಮೆ ಮಾಡಬೇಕಿದ್ದ ಕ್ಯಾಲಿಬರೇಷನ್ ಅನ್ನು ಎರಡು ವರ್ಷಕ್ಕೊಮ್ಮೆ ಮಾಡುವ ಹಾಗೂ ಖಾಸಗಿಯವರಿಗೂ ಪೆಟ್ರೋಲ್ ಗನ್ಗಳ ಕ್ಯಾಲಿಬರೇಷನ್ಗೆ ಅವಕಾಶ ನೀಡುವ ಅಧಿಸೂಚನೆಗಳ ಬಗ್ಗೆ ರಿಜ್ವಾನ್ ಅರ್ಷದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.






























































































































