ಭಾಗ – 611
ಭರತೇಶ ಶೆಟ್ಟಿ, ಎಕ್ಕಾರು

ಬ್ರಹ್ಮ ಶಾರದ ದೇವಿಯ ಜೊತೆಯಾಗಿ ನನ್ನ ಬಳಿಗೆ ಬಂದಿದ್ದನ್ನು ಕಂಡು ಗೌರವಪೂರ್ವಕವಾಗಿ ನಮಸ್ಕರಿಸಿ ಉಪಚರಿಸಿದೆ. ನನ್ನ ಸತ್ಕಾರದಿಂದ ಬ್ರಹ್ಮನಿಗೆ ಸಂಪ್ರೀತಿಯಾಯಿತೊ, ತಪಸ್ಸಿಗೆ ಒಲಿದನೊ ಏನೋ! ಮೆಚ್ಚಿದ ಬ್ರಹ್ಮ ನನ್ನನ್ನು ಕುರಿತಾಗಿ “ನೀನು ಯಾರು? ಯಾಕೆ ಈ ರೀತಿ ತರಗೆಲೆಯನ್ನು ತಲೆಯ ಮೇಲಿರಿಸಿ ತಪೋನಿರತನಾಗಿರುವೆ? ನಿನ್ನ ನಿರಂತರ ತಪಸ್ಶಕ್ತಿಯನ್ನು, ಸಾಧನೆಯನ್ನು ಸುದೀರ್ಘಕಾಲ ಗಮನಿಸಿದ ನಾನು ಮೆಚ್ಚಿದ್ದೇನೆ. ನಿನ್ನ ಅಭೀಷ್ಟ ಏನೆಂದು ಹೇಳು, ಸೃಷ್ಟಿಕರ್ತ ಬ್ರಹ್ಮನಾದ ನಾನು ಪೂರೈಸಿಕೊಡುತ್ತೇನೆ. ಬೇಕಾದುದನ್ನು ನಿಸ್ಸಂಕೋಚವಾಗಿ ಕೇಳಿಕೋ” ಎಂದು ಹೇಳಿದನು. ಬ್ರಹ್ಮದೇವನ ಈ ಮಾತು ಕೇಳಿ ನನಗೇಕೋ ತಾತ್ಸಾರ ಭಾವ ಮೂಡಿತು. ಅಂತಹ ಭಾವನೆಗೆ ಕಾರಣವೂ ಇತ್ತು. ಅದೇನೆಂದರೆ ಇವನಿಗಿಂತ ಮೊದಲು ನಾನು ಇಪ್ಪತ್ತಮೂರು ಸೃಷ್ಟಿಕರ್ತ ಬ್ರಹ್ಮರನ್ನು ನೋಡಿಯಾಗಿತ್ತು. ಅವರೆಲ್ಲರೂ ಕಲ್ಪಾಂತ್ಯ ಕಾಲದ ಮಹಾಪ್ರಳಯದಲ್ಲಿ ಅಂತ್ಯ ಕಂಡಿದ್ದರು. ಇಪ್ಪತ್ತನಾಲ್ಕನೆಯ ಸೃಷ್ಟಿಕರ್ತ ಬ್ರಹ್ಮನಾದ ಈತನೂ ಶಾಶ್ವತನಲ್ಲ ಎಂದು ನಾನು ತಿಳಿದಿದ್ದೆ. ಹಾಗಿರುವಾಗ ಈತನೂ ಶಾಶ್ವತವಾದ ವರ ಕೊಡುವಲ್ಲಿ ಅಶಕ್ತನಾಗಿದ್ದಾನೆ. ನನ್ನ ಗಣನೆಯಂತೆ ಈ ಬ್ರಹ್ಮನೂ ಆತನ ಪರಾರ್ಧವನ್ನು ಕಳೆದಾಗಿದೆ. (ಪರ ಅಂದರೆ ಬ್ರಹ್ಮನ ಪೂರ್ಣಾಯಸ್ಸು) ಇನ್ನುಳಿದ ಪರಾರ್ಧ ಕಳೆದಲ್ಲಿಗೆ ಕಲ್ಪ ಪೂರ್ಣಗೊಳ್ಳಲಿದ್ದು ಈತನೂ ಅಂತ್ಯ ಕಾಣಲಿರುವ ಭವಿಷ್ಯವಿದೆ. ಹೀಗೆ ಸತ್ಯವನ್ನು ಅರಿತಿದ್ದ ನಾನು ಆತನಿತ್ತ ವರದ ಅನುಗ್ರಹಕ್ಕೆ ಉತ್ತರವಾಗಿ “ಅಯ್ಯಾ ಬ್ರಹ್ಮದೇವಾ! ನೀನಾಗಿ ದರುಶನವಿತ್ತುದು ಸಂತೋಷವಾಯಿತು. ಆದರದಿಂದ ಸತ್ಕರಿಸಿ ನಮಸ್ಕರಿಸಿ ಉಪಚರಿಸಿದ್ದೇನೆ. ಹಾಗೆಂದು ನೀನು ದರುಶನ ಕೊಡು ಎಂದು ತಪಸ್ಸು ಮಾಡುತ್ತಲೂ ಇಲ್ಲ, ದರುಶನ ನೀಡೆಂದು ಕೇಳಿಯೂ ಇಲ್ಲ. ನನ್ನ ಬೇಡಿಕೆ ಈಡೇರಿಸು ಎಂದು ಏನನ್ನೂ ನಿವೇದಿಸಿ ಕೊಂಡಿದ್ದೂ ಇಲ್ಲ. ಸತ್ಯ ಹೀಗಿರುವಾಗ ನೀನಾಗಿ ಬಂದು ಸಂತುಷ್ಟನಾಗಿದ್ದೇನೆ, ನಿನಗೇನು ಬೇಕು ಎಂದು ಕೇಳುವುದು ಸಮಂಜಸವಲ್ಲ. ಹಾಗೂ ನೀಡುವುದಿದ್ದರೆ, ಭಕ್ತರು ನಿನ್ನ ಕುರಿತಾಗಿ ತಪಸ್ಸು ಮಾಡಿ, ಪ್ರಸನ್ನೀಕರಿಸಿದರೆ ಅಂತಹವರಿಗೆ ನೀಡಬಹುದು. ನನಗೆ ನಿನ್ನ ಅನುಗ್ರಹದಿಂದ ಸಾಧಿಸಬಹುದಾದದ್ದು ಏನೂ ಇಲ್ಲ. ನಿನ್ನಂತಹ ಸೃಷ್ಟಿಕರ್ತರನ್ನು ನಾನು ಈ ಹಿಂದೆಯೂ ನೋಡಿದ್ದೇನೆ. ಅವರಂತೆಯೆ ಈ ಕಲ್ಪದಲ್ಲಿ ನೀನೂ ಒಬ್ಬನಾಗಿರುವೆ. ನನ್ನ ಗುರಿ ನಿನ್ನ ವ್ಯಾಪ್ತಿಯನ್ನೂ ಮೀರಿದ್ದಾಗಿರುವ ಕಾರಣ ನಿನ್ನಲ್ಲಿ ಏನನ್ನೂ ಕೇಳಲಾಗದು. ಕೇಳಿದರೂ ನಿನಗೆ ನೀಡುವಷ್ಟು ಶಕ್ತಿಯಿಲ್ಲ. ಯಾಕೆಂದರೆ ನಿನ್ನ ಸಮಯ ಪೂರ್ಣವಾದ ಕಾಲದಲ್ಲಿ ನೀನು ಇಲ್ಲವಾಗುವೆ” ಎಂದು ನನಗೆ ತಿಳಿದ ಸತ್ಯವನ್ನು ನುಡಿದೆ.
ಸತ್ಯ ಯಾವಾಗಲೂ ಕಹಿ. ನನ್ನ ಮಾತು ಕೇಳಿ ಸೃಷ್ಟಿಕರ್ತನಾದ ಬ್ರಹ್ಮನಿಗೆ ಕೋಪ ಉತ್ಪನ್ನವಾಯಿತು. ಓರ್ವ ಕೇವಲ ತಪಸ್ವಿಯಾದ ಈತನಿಗೆ ಎಷ್ಟು ಅಹಂಕಾರ ಎಂದು ಆತನಿಗೆ ಎನಿಸಿರಬಹುದು. ಆತನಿಗೂ ಸ್ವಪ್ರತಿಷ್ಟೆ ಇರುವುದು ಸಹಜ ತಾನೆ! ತಾನು ಕಡಿಮೆಯವನಲ್ಲ ಎಂದು ತೋರಿಸಬೇಕಾದ ಅನಿವಾರ್ಯತೆ ಬ್ರಹ್ಮನಿಗೆದುರಾಯಿತು. “ಎಲಾ! ನಿನಗೆಷ್ಟು ಸೊಕ್ಕು? ನೀನು ನೋಡಿದವರು ನನ್ನಂತೆಯೆ ಇದ್ದರೆ? ಏನು ಕಥೆ ಹೇಳುವೆಯಾ? ಅದೂ ಸೃಷ್ಟಿಕರ್ತನಾದ ಬ್ರಹ್ಮನಿಗೆ? ಒಂದು ವಿಚಾರ ತಿಳಿದುಕೊ, ಸಮಸ್ತ ಸೃಷ್ಟಿಯನ್ನು ಸೃಜಿಸಿರುವುದು ನಾನು. ನನ್ನಂತಹ ಸೃಷ್ಟಿಕರ್ತರನ್ನು ನಾನು ಈ ತನಕ ನೋಡಿದವನಲ್ಲ. ನೀನು ಹೇಗೆ ನೋಡಿರಲು ಸಾಧ್ಯ? ಯಾರ ಬಳಿ ಸುಳ್ಳು ಹೇಳುತ್ತಿರುವೆ ಎಂಬ ಕನಿಷ್ಠ ಯೋಚನೆಯಾದರೂ ನಿನಗಿದೆಯೆ? ಈ ಸೃಷ್ಟಿಯ ಅವಧಿಯನ್ನು ನಿರೂಪಿಸುವ ವಿಧಾತನಾದ ನನ್ನ ಕ್ರೋಧಕ್ಕೆ ಗುರಿಯಾದರೆ ಪರಿಣಾಮ ಏನಾದೀತು ಎಂದು ಅರಿತಿರುವೆಯಾ” ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದನು.
ಅದೇ ಸಮಯಕ್ಕೆ ಮಹಾಬಿರುಗಾಳಿಯೊಂದು ಎದ್ದಿತು. ಸುಳಿ ಸುಳಿಯಾಗಿ ಸುತ್ತುತ್ತಾ ಬಂದ ಆ ಅತಿವೇಗದ ಸುಳಿಗಾಳಿ ನನ್ನನ್ನೂ ಚತುರ್ಮುಖ ಬ್ರಹ್ಮನನ್ನೂ ಹಾರಿಸಿ ಆಕಾಶಕ್ಕೆ ಹಾರಿಸಿತು.
ಮುಂದುವರಿಯುವುದು…




























































