ಭಾಗ – 630
ಭರತೇಶ್ ಶೆಟ್ಟಿ ,ಎಕ್ಕಾರು

ಪಾಂಡವ ಸೇನೆ ಅಶ್ವಮೇಧದ ಎರಡೂ ಕುದುರೆಗಳನ್ನು ಹಿಂಬಾಲಿಸಿ ಸಾಗುತ್ತಿದೆ. ರಮ್ಯ ರಮಣೀಯ ನಯನ ಮನೋಹರ ದೃಶ್ಯಗಳು ಪ್ರಕೃತಿಯ ಸಿರಿ ಸೊಬಗನ್ನು ಆಸ್ವಾದಿಸಿದಷ್ಟು ಅಮಿತವಾಗಿದೆ. ಪ್ರಯಾಣ ಕಿಂಚಿತ್ ಪ್ರಯಾಸವೂ ಆಗದೆ ಸಿಂಧೂ ದೇಶದತ್ತ ಬಂದು ಸೇರಿದರು.
ಸಿಂಧೂ ದೇಶಕ್ಕೂ ಹಸ್ತಿನಾವತಿಗೂ ನಿಕಟ ಸಂಬಂಧ. ಹಸ್ತಿನೆಯ ಪ್ರಸಕ್ತ ಚಂದ್ರವಂಶೀಯರ ಒಬ್ಬಳು ಸೋದರಿ ದುಶ್ಯಲೆ. ಆಕೆಯನ್ನು ವಿವಾಹ ಮಾಡಿ ಕೊಟ್ಟದ್ದು ಸಿಂಧೂ ದೇಶಕ್ಕೆ. ಸೈಂಧವ ಜಯದ್ರಥ ದುಶ್ಯಲೆಯ ಪತಿ. ಮಹಾಭಾರತ ಯುದ್ದದಲ್ಲಿ ದ್ರೋಣ ಸೇನಾಧಿಪತ್ಯ ಸಮಯ ಅರ್ಜುನನಿಂದ ಹತನಾಗಿದ್ದಾನೆ. ಈಗ ಪಾಂಡವಾಶ್ವಮೇಧದ ಕುದುರೆ ಬಂದ ವಾರ್ತೆ ಕೇಳಿ ಸಿಂಧೂ ದೇಶದ ಅರಮನೆಯೊಳಗೆ ಭಯ, ನಡುಕ ಆರಂಭವಾಯಿತು. ದುಶ್ಯಲೆಯ ಮಗ ಪಟ್ಟಾಭಿಷಿಕ್ತನಾಗಿದ್ದರೂ ಆತನಿನ್ನೂ ಎಳೆಯ ಹುಡುಗ. ಅಪ್ಪ ಜಯದ್ರಥನನ್ನು ಕೊಂದ ಕೃಷ್ಣಾರ್ಜುನರು ಅಮಿತ ಸೇನೆಯೊಂದಿಗೆ ಬಂದಿದ್ದಾರೆ ಎಂಬ ಸುದ್ದಿ ಆತನನ್ನು ಹಿಡಿದು ನೆಲಕ್ಕಪ್ಪಳಿಸಿ ಗುದ್ದಿದ ಅನುಭವ ನೀಡಿತ್ತು. ಪರಿಣಾಮ ಮೂರ್ಛೆಗೊಳಾಗಿ ಬಿದ್ದವ ಬಹಳ ಹೊತ್ತು ಎಚ್ಚೆತ್ತುಕೊಳ್ಳಲಿಲ್ಲ. ಮಗನ ಸ್ಥಿತಿಯನ್ನು ಪಾಂಡವ ಸೇನೆಯ ಮಾಹಿತಿಯನ್ನು ಕೇಳಿ ತಿಳಿದ ದುಶ್ಯಲೆಯ ಜಂಘಾಬಲವೂ ಉಡುಗಿ ಹೋಗಿತ್ತು. ತಮ್ಮ ಸೇನೆಗಾಗಲಿ, ಸೇನಾಧಿಪತಿಗಾಗಲಿ ಧೈರ್ಯ ತುಂಬಲು ಆಕೆ ಸ್ವತಃ ಸ್ಥೈರ್ಯಹೀನ ಸ್ಥಿತಿಯಲ್ಲಿದ್ದಾಳೆ. ಆದದ್ದು ಆಗಲಿ ಯುದ್ದವಂತೂ ಸಾಧ್ಯವಿಲ್ಲ. ಶರಣಾಗತಿ ಏಕೈಕ ಮಾರ್ಗ ಎಂದು ಮಗನನ್ನು ಕೂಡಿಕೊಂಡು ಕಾಲ್ನಡಿಗೆಯಲ್ಲಿ ಓಡೋಡಿ ಕೃಷ್ಣಾರ್ಜುನರತ್ತ ಬಂದಳು. ದುಶ್ಯಲೆ ಅರ್ಜುನನಿಗೂ ತಂಗಿಯಲ್ಲವೆ? ದೊಡ್ಡಪ್ಪನ ಮಗಳು. ದುಶ್ಯಲೆಯನ್ನು ಬಾಲ್ಯದಲ್ಲಿ ತಂಗಿಯೆಂದು ಪ್ರೀತಿಯಿಂದ ಮುದ್ದಿಸಿದ ನೂರೈದು ಮಂದಿಯಲ್ಲಿ ತಾನೂ ಓರ್ವ ಅಣ್ಣನಾಗಿ ಆಕೆಯನ್ನು ಕಂಡೊಡನೆ ರಥದಿಂದ ಇಳಿದು ತಾನೂ ಕೆಲಹೆಜ್ಜೆ ನಡೆದು ಮುಂದೆ ಬಂದನು. ಪ್ರೀತ್ಯಾದರಗಳಿಂದ ದುಶ್ಯಲೆಯ ಕ್ಷೇಮ ಸಮಾಚಾರ ವಿಚಾರಿಸಿ ಧೈರ್ಯ ತುಂಬಿದನು. ದುಶ್ಯಲೆಯೂ “ಅಣ್ಣಾ! ನನ್ನ ಪತಿ ದೇವರು ನಿಮಗೆ ವಿರೋಧಿಯಾಗಿ ಭಾರತ ಯುದ್ಧದಲ್ಲಿ ಹೋರಾಡಿದ್ದು ಹೌದಾದರೂ ಈಗ ಆ ವೈಷಮ್ಯ ಮುಂದುವರಿಸಬಾರದು. ನಿನ್ನ ತಂಗಿಯಾದ ನನ್ನ ಹಾಗು ನನ್ನ ಮಗನ ಮೇಲೆ ಕರುಣೆ ತೋರ ಬೇಕು” ಎಂದು ಬೇಡಿಕೊಂಡಳು. ಶ್ರೀಕೃಷ್ಣನ ಬಳಿ ಸಾಗಿ “ಹೇ ಸರ್ವರಕ್ಷಕ ಭಗವಂತಾ, ನೀನು ಒಲಿದರೆ ಅಂತಹವರಿಗೆ ಬೇರೆ ರಕ್ಷಣೆ ಬೇಡ. ಹಾಗೆಂದು ಸೆಟೆದು ನಿಂತು ನಿನ್ನನ್ನು ತುಡುಕಿದರೆ ಅವರಿಗೆ ಉಳಿಗಾಲವೂ ಇಲ್ಲ. ಸ್ವಾಮೀ, ನೀನು ಆಪ್ತ ರಕ್ಷಕನೂ ಹೌದು ದೀನನಾಥ, ದೀನಬಂಧುವೂ ಹೌದು. ಈಗ ನಾನು ಆ ಎಲ್ಲ ಸ್ಥಿತಿಯಲ್ಲಿ ನಾವು ಇದ್ದು ನಿನ್ನ ಶರಣು ಬಂದಿದ್ದೇವೆ. ನೀನೇ ಕಾಪಾಡಬೇಕು” ಎಂದು ಪ್ರಾರ್ಥಿಸತೊಡಗಿದಳು.
ಶ್ರೀಕೃಷ್ಣ ಪರಮಾತ್ಮ ನಮಿಸಿ ನಿಂತಿರುವ ದುಶ್ಯಲೆಯನ್ನೂ ಆಕೆಯ ಮಗನನ್ನೂ ಪ್ರೀತಿಯಿಂದ ಕಂಡು “ಹೇ ದುಶ್ಯಲಾ! ನಿನ್ನಲ್ಲಿ ವೈರವೇಕೆ? ನಾನು ಯಾರೊಂದಿಗೂ ವೈರ ಕಟ್ಟಿಕೊಂಡವನಲ್ಲ. ಕೇವಲ ಅಧರ್ಮ ಪಥದಲ್ಲಿ ಸಾಗುತ್ತಿರುವವರನ್ನು ದಂಡಿಸಿ, ಸುಜನರ ರಕ್ಷಣೆ ಮಾಡುವ ನನ್ನ ಕರ್ತವ್ಯ ಮಾಡುತ್ತಿದ್ದೇನಷ್ಟೆ. ನಾವು ನಿಮ್ಮ ರಾಜ್ಯದ ಮೇಲೆ ಯುದ್ದ ಸಾರುತ್ತಿಲ್ಲ. ಅಶ್ವಮೇಧ ಯಾಗ ವಿರಚಿಸುತ್ತಿರುವ ಧರ್ಮರಾಯನಿಗೆ ಸಹಕಾರಿಯಾಗಿ ದಿಗ್ವಿಜಯದ ಹೊಣೆ ಹೊತ್ತ ಪಾರ್ಥನ ಸಾರಥಿಯಾಗಿ ಬಂದಿದ್ದೇನೆ. ಸತ್ಕರ್ಮ ನಡೆಯುವಾಗ ನಮ್ಮದೂ ಕಾಣಿಕೆ ಇರಲಿ ಎಂದು ಸಮರ್ಪಣಾ ಬುದ್ದಿಯಿಂದ ಅರ್ಪಿಸುವುದು ಪುಣ್ಯಪ್ರದ ಕೆಲಸ. ಈಗ ನೀವು ಕೂಡ ಹಾಗೇನಾದರೂ ಕಾಣಿಕೆಯಿತ್ತರೆ ಬಂಧುತ್ವ ಮತ್ತು ಸ್ನೇಹ ಸೂಚಕವಾಗಿ ಸ್ವೀಕರಿಸುವುದು ಕ್ರಮ. ಆದರೆ ನಿಮ್ಮಿಂದ ಅಂತಹ ಅಪೇಕ್ಷೆಯೂ ನಮಗಿಲ್ಲ. ಅಶ್ವಮೇಧ ಯಾಗ ನಡೆಯುವಾಗ ಮನೆಮಗಳಾದ ನೀನು ಬಂದು ಉಪಸ್ಥಿತಳಾದರೆ ಅದುವೆ ಪರಮ ಸಂತೋಷ” ಎಂದು ನುಡಿದು ಆತ್ಮೀಯ ಭಾವ ಪ್ರಕಟಿಸಿದನು.
ಆದರೂ ದುಶ್ಯಲೆ ಕೃಷ್ಣಾರ್ಜುನರನ್ನು ಅತಿಪ್ರೀತಿಯಿಂದ ಅರಮನೆಗೆ ಆಮಂತ್ರಿಸಿ ಸತ್ಕರಿಸಿ ಬೊಕ್ಕಸ ಭಂಡಾರವನ್ನು ಬರಿದುಗೊಳಿಸಿ ಬಹಳಷ್ಟು ಕಪ್ಪ ಕಾಣಿಕೆಗಳನ್ನು ಅಶ್ವಮೇಧಕ್ಕಾಗಿ ನೀಡಲು ಸಿದ್ಧತೆ ಮಾಡಿಸಿದಳು. ತನ್ನ ಮಗನ ಕೈಯಿಂದ ಅವುಗಳನ್ನು ಕೃಷ್ಣಾರ್ಜುನರಿಗೆ ಒಪ್ಪಿಸಿದಾಗ ಅರ್ಜುನ “ಹೇ ದುಶ್ಯಲಾ! ನೀನು ಯಾರು? ನನಗೆ ಸೋದರಿಯಲ್ಲವೆ? ನಿನ್ನಿಂದಲೂ ಕಪ್ಪ ಸ್ವೀಕರಿಸುವುದೆ? ಬೇಡ ತಂಗಿ, ಈ ಅಮೂಲ್ಯ ಕಾಣಿಕೆ ರಾಜ್ಯದ ಸಮೃದ್ಧಿಗಾಗಿ ಇರಲಿ. ನಿನ್ನಲ್ಲಿದ್ದರೂ ಅಥವಾ ನನ್ನಲ್ಲಿದ್ದರೂ ಎರಡೂ ಸಮಯ ಅದು ನಮ್ಮದ್ದು ಆಗಿರುತ್ತದೆ. ಕಪ್ಪ ಸಂಗ್ರಹ ಅಥವಾ ಯುದ್ಧಕ್ಕಾಗಿ ನಿನ್ನ ರಾಜ್ಯಕ್ಕೆ ಬಂದವರಲ್ಲ. ಕುದುರೆಗಳು ಈ ಮಾರ್ಗವಾಗಿ ಮುಂದೊತ್ತಿ ಬಂದಾಗ ಅನುಸರಿಸಿ ಬರಬೇಕಾಯಿತು” ಎಂದು ವಿವರಿಸಿ ಹೇಳಿ ಸಂತೈಸಿದನು. ನೀಡಿದ ಕಪ್ಪವನ್ನು ಒಮ್ಮೆ ಸ್ವೀಕರಿಸಿ ಯಥಾವತ್ತಾಗಿ ದುಶ್ಯಲೆಯ ಮಗನಿಗೆ ಮರಳಿ ನೀಡಿದನು. ಒಂದು ದಿನ ಸಿಂಧೂ ದೇಶದಲ್ಲಿ ಉಳಿದು ವಿಶ್ರಾಂತರಾದರು. ಮರುದಿನ ಅಲ್ಲಿಂದ ಹೊರಟರು.
ಕಾಲ ಓಡುತ್ತಲಿತ್ತು ಮಾಸಗಳು ಒಂದಾದ ನಂತರ ಒಂದರಂತೆ ತಿರುಗುತ್ತಾ ಒಂದು ಸಂವತ್ಸರ ಕಾಲ ಪೂರ್ಣಗೊಂಡಿತು. ಸುದೀರ್ಘ ಪ್ರಯಾಣ, ಯುದ್ಧ ವಿಜಯದೊಂದಿಗೆ ಹೇರಳವಾದ ಕಪ್ಪ ಸಂಗ್ರಹವೂ ಆಗಿದೆ. ಒಂದು ಸಂವತ್ಸರ ಕಾಲ ಯಾಗದ ದಿಗ್ವಿಜಯ ಸಾಗಿ ಮುಗಿಸಿರುವ ಈ ಕಾಲದಲ್ಲಿ ಇನ್ನು ಜೈತ್ಯಯಾತ್ರೆ ನಿಲ್ಲಿಸುವ ಸಮಯ ಬಂದಿದೆಯೆಂದು ಕೃಷ್ಣ ಸೂಚನೆ ನೀಡಿದಾಗ ಅರ್ಜುನನೂ ಹೌದೆಂದು ಸಮ್ಮತಿಸಿ ಹಸ್ತಿನಾವತಿಯತ್ತ ಪ್ರಯಾಣ ಮುಂದುವರಿಸಿದರು.
ಮುಂದುವರಿಯುವುದು…






















































































