
ಎಸ್.ವಿ.ಟಿ ಪದವಿಪೂರ್ವ ಕಾಲೇಜು, ಕಾರ್ಕಳ ಇಲ್ಲಿ ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ತುಳುನಾಡಿನ ಕೆಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಅಂತೆಯೇ ಪೂರ್ವಾಹ್ನ ಆಟಿ ತಿಂಗಳಲ್ಲಿ ವಿಶೇಷವಾಗಿ ತಯಾರಿಸುವ ಬಗೆ ಬಗೆಯ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಸಹಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿಗಳು ತಂಡ ತಂಡವಾಗಿ ತಿಂಡಿ ತಿನಿಸುಗಳನ್ನು ತಯಾರಿಸಿ ಪ್ರದರ್ಶನ ನೀಡಿ ತಿಂಡಿಗಳನ್ನು ತಯಾರಿಸಿದ ಬಗ್ಗೆ ಮಾಹಿತಿ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾವೂರು ಇಲ್ಲಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಜ್ಯೋತಿ ಶೆಟ್ಟಿ ಕುತ್ತೆತ್ತೂರು ಆಟಿ ತಿಂಗಳ ಆಚರಣೆಗಳು ಮತ್ತು ಸಾಂಪ್ರದಾಯಿಕ ಆಟಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀ ನೇಮಿರಾಜ ಶೆಟ್ಟಿ ಕೆ. ವಹಿಸಿದ್ದರು. ಹಿರಿಯ ಸಹಶಿಕ್ಷಕರಾದ ಶ್ರೀ ಯೋಗೇಂದ್ರ ನಾಯಕ್ ಆಟಿ ತಿಂಗಳ ಸಂಪ್ರದಾಯಗಳನ್ನು ನೆನಪು ಮಾಡಿಕೊಂಡು ಆಟಿ ತಿಂಗಳ ಖಾದ್ಯಗಳು ಮತ್ತು ನುಡಿಗಟ್ಟನ್ನು ಹೇಳುವುದರೊಂದಿಗೆ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ನೀಡಿದರು.
ಕಾರ್ಯಕ್ರಮದಲ್ಲಿ ಆಟಿ ತಿಂಗಳ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಬಹುಮಾನ ವಿಜೇತರ ಪಟ್ಟಿಯನ್ನು ಪ್ರೌಢಶಾಲಾ ವಿಭಾಗದ ಕುಮಾರಿ ವೀಕ್ಷಾ ವಾಚಿಸಿ, ಕುಮಾರಿ ಸಾನಿಧ್ಯ ಮುಖ್ಯ ಅಭ್ಯಾಗತರನ್ನು ಪರಿಚಯಿಸಿದರು.
ಆಂಗ್ಲಭಾಷಾ ಶಿಕ್ಷಕ ಸುನಿಲ್ ಎಸ್. ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪದವಿಪೂರ್ವ ವಿಭಾಗದ ವಿದ್ಯಾರ್ಥಿನಿ ಕುಮಾರಿ ಶಾರದ ಸ್ವಾಗತಿಸಿ, ಕುಮಾರಿ ಆತ್ಮೀಯ ವಂದಿಸಿದರು. ಪ್ರೌಢಶಾಲಾ ವಿಭಾಗದ ಮಾಸ್ಟರ್ ಸುದೀಪ್ ಕಾರ್ಯಕ್ರಮ ನಿರೂಪಿಸಿದರು.




























































