
ಬೆಂಗಳೂರು: ರಾಜ್ಯದ ದೇವಸ್ಥಾನಗಳ ಹಣ, ಕಾಣಿಕೆ ಹಾಗೂ ಆಸ್ತಿಪಾಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಹೈಕೋರ್ಟ್ ಮಹತ್ವದ ನಿರ್ದೇಶನಗಳನ್ನು ನೀಡಿದೆ. ಕಳ್ಳತನ, ದುರ್ಬಳಕೆ ಹಾಗೂ ಹಣದ ಅವ್ಯವಹಾರವನ್ನು ತಡೆಯುವ ಉದ್ದೇಶದಿಂದ ಈ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಸೂಚಿಸಲಾಗಿದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿಗಳ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡಿರುವ ನ್ಯಾಯಾಲಯ, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಸಹಕಾರದೊಂದಿಗೆ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದೆ.
ದೇವಸ್ಥಾನಗಳಲ್ಲಿ ಸಾಧ್ಯವಾದಷ್ಟು ಎಲ್ಲ ಪಾವತಿಗಳನ್ನು ಡಿಜಿಟಲ್ ಮೂಲಕ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಬೇಕು. ಹುಂಡಿ ಕಾಣಿಕೆ, ಅರ್ಚನೆ, ಸೇವಾ ಟಿಕೆಟ್, ವಸತಿ, ಪಾರ್ಕಿಂಗ್, ದೇಣಿಗೆ, ಪ್ರಸಾದ ಹಾಗೂ ಇತರ ಮಾರಾಟಗಳಿಗೂ ಡಿಜಿಟಲ್ ಪಾವತಿ ವ್ಯವಸ್ಥೆ ಇರಬೇಕು. ಅಗತ್ಯವಿರುವ ಕಡೆ ಡಿಜಿಟಲ್ ಕಿಯೋಸ್ಕ್ ಮತ್ತು ಸ್ವಯಂ ಸೇವಾ ಪಾವತಿ ಯಂತ್ರಗಳನ್ನು ಅಳವಡಿಸಬಹುದು.
ಪ್ರತಿಯೊಂದು ರಸೀದಿಯಲ್ಲೂ ವಿಶಿಷ್ಟ ಕ್ಯೂಆರ್ ಕೋಡ್ ಮತ್ತು ಮರುಕಳಿಸದ ಯಂತ್ರ-ರಚಿತ ಕ್ರಮಸಂಖ್ಯೆ ಇರಬೇಕು. ಭಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ರಸೀದಿ ನೈಜವೇ ಎಂಬುದನ್ನು ಕೇಂದ್ರ ಸರ್ವರ್ನಲ್ಲಿ ಪರಿಶೀಲಿಸಲು ಸಾಧ್ಯವಾಗಬೇಕು.
ದೇವಸ್ಥಾನಕ್ಕೆ ಸ್ವೀಕರಿಸುವ ಪ್ರತಿಯೊಂದು ಮೊತ್ತವನ್ನು ಪಾವತಿ ವಿಧಾನ ಯಾವುದೇ ಆಗಿದ್ದರೂ ತಕ್ಷಣವೇ ಡಿಜಿಟಲ್ ಲೆಕ್ಕಪತ್ರ ವ್ಯವಸ್ಥೆಯಲ್ಲಿ ದಾಖಲಿಸಬೇಕು. ಪ್ರತಿಯೊಂದು ವಹಿವಾಟಿನ ಮಾಹಿತಿಯೂ ಸೃಷ್ಟಿಯಾದ ಕೂಡಲೇ ಕೇಂದ್ರ ಸರ್ವರ್ಗೆ ರವಾನೆಯಾಗಬೇಕು.
ಹುಂಡಿ ಹಾಗೂ ಇತರ ಕಾಣಿಕೆ ಪೆಟ್ಟಿಗೆಗಳ ಹಣವನ್ನು ಸುರಕ್ಷಿತ ಮತ್ತು ಪಾರದರ್ಶಕ ವ್ಯವಸ್ಥೆಯಲ್ಲಿ ಎಣಿಕೆ ಮಾಡಬೇಕು. ಲಡ್ಡು, ತೆಂಗಿನಕಾಯಿ, ಕುಂಕುಮ, ಹೂವು, ಧಾರ್ಮಿಕ ಪುಸ್ತಕಗಳು, ವಿಗ್ರಹಗಳು ಹಾಗೂ ಇತರ ಪ್ರಸಾದ ಮತ್ತು ಪೂಜಾ ಸಾಮಗ್ರಿಗಳ ಮಾರಾಟವನ್ನು ಡಿಜಿಟಲ್ ದಾಸ್ತಾನು ವ್ಯವಸ್ಥೆಗೆ ಒಳಪಡಿಸಬೇಕು.
ಪ್ರತಿಯೊಬ್ಬ ಸಿಬ್ಬಂದಿಗೂ ಪ್ರತ್ಯೇಕ ಬಳಕೆದಾರ ಹೆಸರು ಮತ್ತು ಪ್ರವೇಶ ವಿವರ ನೀಡಬೇಕು. ಹಂಚಿಕೆಯ ಬಳಕೆದಾರ ಖಾತೆಗಳಿಗೆ ಅವಕಾಶ ನೀಡಬಾರದು. ಬಹುಹಂತದ ಅಥವಾ ಜೈವಿಕ ದೃಢೀಕರಣದ ಮೂಲಕ ವ್ಯವಸ್ಥೆಯ ಭದ್ರತೆ ಖಚಿತಪಡಿಸಬೇಕು.
ಹಣ ಸಂಗ್ರಹ ಕೌಂಟರ್, ಹುಂಡಿ, ದಾಸ್ತಾನು ಹಾಗೂ ಭದ್ರತಾ ವಿಭಾಗದಂತಹ ಸೂಕ್ಷ್ಮ ಹುದ್ದೆಗಳಲ್ಲಿ ಸಿಬ್ಬಂದಿಯನ್ನು ಅನಿರ್ದಿಷ್ಟ ಅವಧಿಗೆ ನಿಯೋಜಿಸಬಾರದು. ದಿನಗೂಲಿ ಮತ್ತು ಗುತ್ತಿಗೆ ನೌಕರರು ಸೇರಿದಂತೆ ಎಲ್ಲ ಸಿಬ್ಬಂದಿಯ ಹಾಜರಾತಿಯನ್ನು ಜೈವಿಕ ವ್ಯವಸ್ಥೆಯ ಮೂಲಕ ದಾಖಲಿಸಬೇಕು.
ಕಾನೂನು ಅನುಮತಿಸುವ ಮಿತಿಯಲ್ಲಿ ಪ್ರತಿಯೊಂದು ದೇವಸ್ಥಾನದ ವಾರ್ಷಿಕ ಲೆಕ್ಕಪತ್ರ ಹಾಗೂ ಆದಾಯ-ವೆಚ್ಚದ ವಿವರವನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ನಗದು, ಯುಪಿಐ, ಕಾರ್ಡ್, ನೆಟ್ ಬ್ಯಾಂಕಿಂಗ್, ಡಿಜಿಟಲ್ ವ್ಯಾಲೆಟ್, ಎನ್ಎಫ್ಸಿ ಸೇರಿದಂತೆ ಎಲ್ಲ ಅನುಮೋದಿತ ಪಾವತಿಗಳನ್ನು ನೈಜ ಸಮಯದಲ್ಲಿ ಲೆಕ್ಕಪತ್ರ ವ್ಯವಸ್ಥೆಯಲ್ಲಿ ದಾಖಲಿಸಬೇಕು.
ಇದಲ್ಲದೆ, ನಗದು, ಚಿನ್ನ, ಬೆಳ್ಳಿ, ಆಭರಣ, ರತ್ನಗಳು ಸೇರಿದಂತೆ ಬೆಲೆಬಾಳುವ ವಸ್ತುಗಳ ಸ್ವೀಕೃತಿ ಕೌಂಟರ್ಗಳನ್ನು ಯಾವುದೇ ಒಬ್ಬ ಅಧಿಕಾರಿ ಅಥವಾ ಸಿಬ್ಬಂದಿಯ ವೈಯಕ್ತಿಕ ವಶದಲ್ಲಿರುವ ಸ್ಥಳದಲ್ಲಿ ಇರಿಸಬಾರದು. ಹುಂಡಿ, ಎಣಿಕೆ ಪ್ರದೇಶ, ಭದ್ರತಾ ಕೊಠಡಿ, ಆಭರಣ ಕೊಠಡಿ ಮತ್ತು ದಾಸ್ತಾನು ಕೊಠಡಿಗಳಂತಹ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸೂಚಿಸಲಾಗಿದೆ.
ಉಡುಪಿ ಜಿಲ್ಲೆಯ ದೇವಸ್ಥಾನ ಪ್ರಕರಣ: ಇದೇ ವೇಳೆ 2020ರಲ್ಲಿ ಉಡುಪಿ ಜಿಲ್ಲೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ರಾಜೇಶ್ ನಾಯಕ್ ಅವರನ್ನು ವಜಾಗೊಳಿಸಿದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಮಾಹಿತಿ ತಂತ್ರಜ್ಞಾನ ನಿರ್ವಾಹಕರ ಬಳಕೆದಾರ ಹೆಸರು ಮತ್ತು ಗುಪ್ತಪದವನ್ನು ದುರುಪಯೋಗಪಡಿಸಿಕೊಂಡು ಭಕ್ತರಿಗೆ ನಕಲಿ ರಸೀದಿಗಳನ್ನು ನೀಡಿದ ಆರೋಪ ಅವರ ಮೇಲಿತ್ತು. ಈ ಕೃತ್ಯ ನಂಬಿಕೆ ದ್ರೋಹ ಹಾಗೂ ಹಣದ ದುರುಪಯೋಗಕ್ಕೆ ಸಮಾನವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ತೀರ್ಪು ನೀಡಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಧಾರ್ಮಿಕ ದತ್ತಿಗಳ ಸಮರ್ಪಕ ಆಡಳಿತಕ್ಕಾಗಿ ಸಾಮಾನ್ಯ ನಿರ್ದೇಶನಗಳನ್ನು ನೀಡುವುದು ಅಗತ್ಯ ಎಂದು ಹೇಳಿದ್ದಾರೆ.




































