
ಬೆಂಗಳೂರು: ಆರ್ಎಸ್ಎಸ್ ನೋಂದಣಿ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿರುಗೇಟು ನೀಡಿದ್ದಾರೆ. “ಆರ್ಎಸ್ಎಸ್ ಆಗಲೂ ನೋಂದಣಿಯಾಗಿರಲಿಲ್ಲ, ಈಗಲೂ ನೋಂದಣಿಯಾಗುವುದಿಲ್ಲ. ನಿಮ್ಮ ನೋಂದಣಿಯಿಂದ ಜಗತ್ತು ನಡೆಯುವುದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ರಜಾಕಾರರ ದಾಳಿ ವೇಳೆ ಖರ್ಗೆ ಕುಟುಂಬವನ್ನು ಆರ್ಎಸ್ಎಸ್ ರಕ್ಷಿಸಿತ್ತು ಎಂದೂ ಹೇಳಿದ್ದಾರೆ.
ಹಿಂದು ಜಾಗರಣ ವೇದಿಕೆಯ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸಂತೋಷ್ ಸರ್ಕಾರದಲ್ಲಿ ನೋಂದಣಿಯಾಗಿದ್ದ ಹಲವು ಸಂಸ್ಥೆಗಳು ಆರ್ಥಿಕ ಅವ್ಯವಹಾರ ನಡೆಸಿ ಮುಚ್ಚಿ ಹೋಗಿವೆ. ಆದರೆ, 100 ವರ್ಷಗಳಿಂದ ನೋಂದಣಿಯಾಗದಿದ್ದರೂ ಆರ್ಎಸ್ಎಸ್ ಕೋಟ್ಯಂತರ ಜನರ ವಿಶ್ವಾಸ ಗಳಿಸಿದೆ. ದೇಶ ವಿಭಜನೆಯ ಸಂದರ್ಭದಲ್ಲೂ ಹಿಂದೂಗಳ ನೆರವಿಗೆ ಸಂಘ ಧಾವಿಸಿತ್ತು. ಹೀಗಾಗಿ ನೋಂದಣಿ ಮಾನದಂಡವಲ್ಲ ಎಂದು ಸಂತೋಷ್ ಹೇಳಿದರು.
ಭಾರತ ವಿರೋಧಿಗಳಿಗಷ್ಟೇ ಅಸುರಕ್ಷಿತ ಭಾವನೆ:
ವಂದೇ ಮಾತರಂ ಕುರಿತು ಮಾತನಾಡಿದ ಸಂತೋಷ್, ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವಂದೇ ಮಾತರಂ ಹಾಡಲಾಗಿದೆ ಎಂದರು. ಬಸ್ತಾರ್ನ 93 ಗ್ರಾಮ ಪಂಚಾಯಿತಿಗಳಲ್ಲಿ 53 ವರ್ಷಗಳ ಬಳಿಕ ರಾಷ್ಟ್ರಧ್ವಜ ಹಾರಿಸಲಾಗಿದೆ ಎಂದು ಹೇಳಿದರು.
ಹಿಂದೂ ಶ್ರದ್ಧಾಕೇಂದ್ರಗಳು, ಮಹಿಳೆಯರು, ಗೋಮಾತೆ ರಕ್ಷಣೆ ಹಾಗೂ ಅಕ್ರಮ ವಲಸಿಗರ ವಿರುದ್ಧ ಹಿಂದು ಜಾಗರಣ ವೇದಿಕೆ ಕೆಲಸ ಮಾಡುತ್ತಿದೆ. ಕಾರ್ಯಕರ್ತರು ಧೈರ್ಯದಿಂದ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಂತೋಷ್ ಮೆಚ್ಚುಗೆ ವ್ಯಕ್ತಪಡಿಸಿದರು.
ರಜಾಕಾರರ ದಾಳಿ ವೇಳೆ ಖರ್ಗೆ ಕುಟುಂಬದ ರಕ್ಷಣೆ:
ರಜಾಕಾರರ ದಾಳಿಯಿಂದ ಖರ್ಗೆ ಕುಟುಂಬ ಕಲಬುರಗಿಗೆ ಓಡಿ ಬಂದಿತ್ತು. ಆ ಸಂದರ್ಭದಲ್ಲಿ ಹಿಂದೂಗಳ ರಕ್ಷಣೆಗೆ ಪೊಲೀಸರು ಅಥವಾ ರಾಜಕಾರಣಿಗಳು ಇರಲಿಲ್ಲ. ಆರ್ಎಸ್ಎಸ್ನ ಮುಖಂಡರು ಹಾಗೂ ಕಾರ್ಯಕರ್ತರು ನೆರವಿಗೆ ಧಾವಿಸಿದ್ದರು ಎಂದು ಹೇಳಿದರು.
‘ಸ್ವಾತಂತ್ರ್ಯ ಸಿಕ್ಕಿದ್ದು ಕ್ರಾಂತಿಕಾರಿಗಳ ರಕ್ತದಿಂದ’:
ಸ್ವಾತಂತ್ರ್ಯವು ಉಪ್ಪು, ಚರಕ ಅಥವಾ ನೂಲಿನಿಂದ ಬಂದಿಲ್ಲ. ಮದನ್ ಲಾಲ್ ದಿಂಗ್ರಾ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖದೇವ್ ಸೇರಿದಂತೆ ಸಾವಿರಾರು ಕ್ರಾಂತಿಕಾರಿಗಳ ತ್ಯಾಗದಿಂದ ಸ್ವಾತಂತ್ರ್ಯ ದೊರೆಯಿತು ಎಂದು ಸಂತೋಷ್ ಹೇಳಿದರು. ಇತಿಹಾಸದ ಈ ವಿಚಾರಗಳು ಈಗ ಪಠ್ಯಪುಸ್ತಕಗಳಲ್ಲಿ ಸೇರಬೇಕು ಎಂದರು.
ಹಿಂದೂ ಅಲ್ಪಸಂಖ್ಯಾತ ಕ್ಷೇತ್ರದಲ್ಲಿ ಹಿಂದೂ ಅಭ್ಯರ್ಥಿಗೆ ಟಿಕೆಟ್ ನೀಡಿ:
ಇನ್ನೊಂದು ವರ್ಷದಲ್ಲಿ ಚುನಾವಣೆ ಬರುತ್ತದೆ. ನಾನು ಆಳುವ ಸರ್ಕಾರಕ್ಕೆ ಸವಾಲು ಹಾಕುತ್ತೇನೆ. ಹಿಂದೂ ಅಲ್ಪಸಂಖ್ಯಾತನಾಗಿರುವ ಶಿವಾಜಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮದೇ ಪಕ್ಷದ ಒಬ್ಬ ಹಿಂದೂ ಅಭ್ಯರ್ಥಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿ ನೋಡಿ ಎಂದು ಸಂತೋಷ್ ಸವಾಲು ಹಾಕಿದರು. ಹಿಂದೂಗಳು ಬಹುಸಂಖ್ಯಾತರಾಗಿದ್ದಾಗ ಮಾತ್ರ ಜಾತ್ಯತೀತತೆ, ಲಿಬರಲ್ವಾದ ಹಾಗೂ ಸಮಾಜವಾದದ ಮಾತುಗಳು ಕೇಳಿಬರುತ್ತವೆ ಎಂದು ಅವರು ಹೇಳಿದರು.













































































































