
ಬೆಂಗಳೂರು: ‘ಕಾಂತಾರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಇದೀಗ ‘ಕಾಂತಾರ 3’ ನಿರ್ಮಾಣವಾಗಲಿದೆ ಎಂಬುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಇತ್ತೀಚೆಗೆ ಪತ್ನಿ ಪ್ರಗತಿ ಶೆಟ್ಟಿ ಜೊತೆ ಮಲಯಾಳಂ ನಟಿ ಅಹಾನಾ ಕೃಷ್ಣ ಅವರ ವಿವಾಹದಲ್ಲಿ ಭಾಗವಹಿಸಲು ತಿರುವನಂತಪುರಕ್ಕೆ ತೆರಳಿದ್ದ ರಿಷಬ್, ಶ್ರೀ ಪದ್ಮನಾಭಸ್ವಾಮಿ ಹಾಗೂ ಅಟ್ಟುಕಲ್ ಭಗವತಿ ದೇವಾಲಯಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಕಾಂತಾರ 3’ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
‘ಕಾಂತಾರ 3’ ಖಂಡಿತವಾಗಿಯೂ ಬರಲಿದೆ. ‘ಕಾಂತಾರ: ಅಧ್ಯಾಯ 1’ನಲ್ಲಿ ಉಳಿದಿರುವ ಪ್ರಶ್ನೆಗಳಿಗೆ ಮುಂದಿನ ಭಾಗದಲ್ಲಿ ಉತ್ತರ ಸಿಗಲಿದೆ. ಆದರೆ ಚಿತ್ರದ ಬಿಡುಗಡೆಯ ದಿನಾಂಕ ಹಾಗೂ ಕಥೆಯ ಸ್ವರೂಪವನ್ನು ಸದ್ಯ ಬಹಿರಂಗಪಡಿಸಲು ಸಾಧ್ಯವಿಲ್ಲ. ಸೂಕ್ತ ಸಮಯದಲ್ಲಿ ಎಲ್ಲವನ್ನೂ ತಿಳಿಸಲಾಗುವುದು ಎಂದು ರಿಷಬ್ ಹೇಳಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಅವರ ಸಂಪೂರ್ಣ ಗಮನ ಪ್ರಶಾಂತ್ ವರ್ಮಾ ನಿರ್ದೇಶನದ ಪ್ಯಾನ್-ಇಂಡಿಯಾ ಚಿತ್ರ ‘ಜೈ ಹನುಮಾನ್’ ಮೇಲಿದೆ. ಚಿತ್ರದ ಎರಡು ಪ್ರಮುಖ ಶೂಟಿಂಗ್ ವೇಳಾಪಟ್ಟಿಗಳು ಪೂರ್ಣಗೊಂಡಿದ್ದು, ಚಿತ್ರೀಕರಣ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಕೇರಳದ ಪ್ರೇಕ್ಷಕರು ‘ಕಾಂತಾರ’ ಹಾಗೂ ‘ಕಾಂತಾರ: ಅಧ್ಯಾಯ 1’ಗೆ ನೀಡಿದ ಪ್ರೀತಿಗೆ ರಿಷಬ್ ಕೃತಜ್ಞತೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಮಲಯಾಳಂ ಚಿತ್ರರಂಗಗಳ ನಡುವೆ ಉತ್ತಮ ಸೃಜನಶೀಲ ಬಾಂಧವ್ಯವಿದ್ದು, ‘ಕಾಂತಾರ’ ತಂಡದ ಹಲವು ತಾಂತ್ರಿಕ ಸಿಬ್ಬಂದಿ ಕೇರಳದವರು ಎಂದಿದ್ದಾರೆ.
‘ಕಾಂತಾರ: ಅಧ್ಯಾಯ 1’ ಚಿತ್ರದಲ್ಲಿ ಕೇರಳದ ಸಾಂಪ್ರದಾಯಿಕ ಕಲರಿಪಯಟ್ಟು ಸಮರ ಕಲೆಯನ್ನು ಬಳಸಲಾಗಿದ್ದು, ಇದಕ್ಕಾಗಿ ತಂಡವು ಅಲ್ಲಿನ ಮಾಸ್ಟರ್ಗಳಿಂದ ತರಬೇತಿ ಪಡೆದಿತ್ತು. ಮಲಯಾಳಂ ನಟ ಜಯರಾಮ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
‘ಕಾಂತಾರ 3’ಗಾಗಿ ಅಭಿಮಾನಿಗಳು ಇನ್ನಷ್ಟು ಸಮಯ ಕಾಯಬೇಕಿದೆ. ಸದ್ಯಕ್ಕೆ ರಿಷಬ್ ಈ ಯೋಜನೆಗೆ ಕೈಹಾಕದಿದ್ದರೂ, ‘ಕಾಂತಾರ’ ಕಥೆ ಇಲ್ಲಿಗೆ ಮುಗಿದಿಲ್ಲ ಎಂಬುದು ಮಾತ್ರ ಖಚಿತವಾಗಿದೆ.






























































































































