ಕ್ಷೇತ್ರದಲ್ಲಿ,ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಆತಂಕಕಾರಿ ಬೆಳವಣಿಗೆ: ರವೀಂದ್ರ ಮೊಯ್ಲಿ

ಕಾರ್ಕಳ ಆ 09: ನಾನಾ ರೀತಿಯ ಅಪಪ್ರಚಾರದ ನಾಟಕವಾಡಿದರೂ ಯಶಸ್ಸು ಕಾಣದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟ ಕಾರ್ಕಳ ಕಾಂಗ್ರೆಸ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಂಡು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಾ ನಾನಾ
ರೀತಿಯ ಕಿರುಕುಳ ನೀಡಿ ದ್ವೇಷ ರಾಜಕಾರಣವನ್ನು ಮಾಡುತ್ತಾ ಕಾರ್ಕಳದಲ್ಲಿದ್ದ ಸೌಹಾರ್ದ ರಾಜಕೀಯ ವಾತಾವರಣವನ್ನು ಹಾಳುಗೆಡವಿರುತ್ತಾರೆ.ಇದೀಗ ಕಾಂಗ್ರೆಸಿಗರು ಬಿಜೆಪಿಯ ಕಾರ್ಯಕರ್ತರ ಮೇಲೆ ಮಾರಣಾಂತಿಗೆ ಹಲ್ಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ತೀರ ಆತಂಕಕಾರಿ ಬೆಳವಣಿಗೆ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ಬೆಂಬಲದಿಂದ ಗೆಲ್ಲಲಾಗದ ಹತಾಶೆಯಿಂದ
ಕಾರ್ಕಳ ಕಾಂಗ್ರೆಸ್ಸಿನ ನಾಯಕರುಗಳು ಇದೀಗ ಬಿಜೆಪಿಯ ಕಾರ್ಯಕರ್ತರನ್ನು ಹೆದರಿಸಿ ಬೆದರಿಸಿ ವೈಯಕ್ತಿಕವಾಗಿ ಮಟ್ಟಹಾಕುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅಂದು ಕಾಂಗ್ರೆಸ್ಸಿನಿಂದ ವಿಧಾನಸಭಾ ಟಿಕೆಟ್ ಸಿಗದ ಕಾರಣಕ್ಕೆ ಅವರದೇ ಸ್ವಪಕ್ಷದ ನಾಯಕರುಗಳಿಗೆ ಸಾರ್ವಜನಿಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಈ ವ್ಯಕ್ತಿಗಳು ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲಾಗದೆ, ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ ಎಂಬ ಭಂಡ ಧೈರ್ಯದಿಂದ ಸರಕಾರಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರಿಗೆ ವೈಯಕ್ತಿಕವಾಗಿ ಹಾಗೂ ಅವರ ಉದ್ಯಮಗಳಿಗೆ ತೊಂದರೆ ನೀಡುವ ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ.
ಇಂತಹ ಅಸಹ್ಯ, ನೀಚ ರಾಜಕಾರಣವನ್ನು ಇಡೀ ರಾಜ್ಯವೇ ಕಂಡಿರಲಿಕ್ಕಿಲ್ಲ, ಒಂದು ಪಕ್ಷದ ಪರಾಜಿತ ಅಭ್ಯರ್ಥಿ ಮತ್ತು ಆತನ ಪಕ್ಷ ಮತ್ತೊಮ್ಮೆ ಜನ ವಿಶ್ವಾಸ ಗಳಿಸುವ ಪ್ರಯತ್ನ ಮಾಡಬೇಕೇ ವಿನಹ ಈ ರೀತಿಯ ನಡೆ ರಾಜ್ಯ ರಾಜಕಾರಣಕ್ಕೇ ಒಂದು ಕಪ್ಪು ಚುಕ್ಕೆ. ಇದು ಕಾಂಗ್ರೆಸ್ ಪಕ್ಷವನ್ನೇ ವಿನಾಶದ ಹಾದಿಗೆ ಕೊಂಡೊಯ್ಯಲಿದೆ.ಕಾರ್ಕಳ ಕಾಂಗ್ರೆಸ್ಸಿನ ಈ ದ್ವೇಷ ರಾಜಕಾರಣ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂದು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಮಟ್ಟಕ್ಕೆ ಮುಂದುವರೆದಿರುವುದು ಬಹಳ ಆತಂಕಕಾರಿ, ಹಾಗೂ ಇದು ಕೇವಲ ಬಿಜೆಪಿ ಕಾರ್ಯಕರ್ತನ ಮೇಲೆ ನಡೆಸಿರುವ ಹಲ್ಲೆ ಅಲ್ಲ ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದನ್ನು ಕಾರ್ಕಳ ಬಿಜೆಪಿ ಬಹಳ ಕಟುವಾಗಿ ಖಂಡಿಸುತ್ತದೆ. ಇಂತಹ ದ್ವೇಷ ರಾಜಕಾರಣದ ವಿರುದ್ಧ ಬಿಜೆಪಿಯ ಹೋರಾಟ ಇನ್ನಷ್ಟು ತೀವ್ರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













