ಭಾಗ – 643
ಭರತೇಶ ಶೆಟ್ಟಿ, ಎಕ್ಕಾರು

ರಾಜಾ ಕೌಶಿಕನ ಸೇನೆಯೂ ಒಂದೊಮ್ಮೆಗೆ ಹೆದರಿ ಹಿಮ್ಮೆಟ್ಟಲ್ಪಟ್ಟಿದ್ದರೂ ಸ್ವಯಂ ತಮ್ಮ ದೊರೆಯೇ ಯುದ್ದ ಸನ್ನದ್ಧನಾದುದನ್ನು ಕಂಡು ಅವರ ರಣೋತ್ಸಾಹ ಇಮ್ಮಡಿಯಾಯಿತು.
ಇತ್ತ ಸುರಧೇನು ನಂದಿನಿ ಕೋಪೋದ್ರಿಕ್ತಳಾಗಿ ಪ್ರಜ್ವಲಿಸುತ್ತಾ ಮಧ್ಯಾಹ್ನದ ಸೂರ್ಯನಂತೆ ಪ್ರಕಾಶಿಸತೊಡಗಿದಳು. ತನ್ನ ಬಾಲವನ್ನು ಬೀಸಿ ಬೆಂಕಿಯ ಮಳೆಯನ್ನು ಸುರಿಸತೊಡಗಿದಳು. ಕೌಶಿಕನು ಅಗ್ನಿವರ್ಷವನ್ನು ಮಂತ್ರಾಸ್ತ್ರ ಮುಖೇನ ನಿವಾರಿಸುವ ಪ್ರಯತ್ನ ನಿರತನಾದ. ಈ ಸಮಯವನ್ನು ಬಳಸಿಕೊಂಡ ದೇವಧೇನು ನಂದಿನಿ ತನ್ನ ಬಾಲದಿಂದ ಪಹ್ಲವರನ್ನೂ, ಸೆಗಣಿಯಿಂದ ವೀರ ಶಬರರನ್ನೂ, ಶಕರನ್ನೂ, ಮೂತ್ರದಿಂದ ಯವನರನ್ನೂ ಸೃಷ್ಟಿಸಿ ನೀಚ ಬುದ್ಧಿ ತೋರಿದ ಕೌಶಿಕ ಮಹಾರಾಜನ ದರ್ಪವನ್ನಡಗಿಸಲು ಸೇನೆ ಸೃಜಿಸಿದಳು. ಇಷ್ಟು ಸಾಲದೆಂದು ತನ್ನ ಬಾಯಿಯಲ್ಲಿ ಮಡುಗಟ್ಟಿದ್ದ ನೊರೆಯಿಂದ ಪುಂಡ್ರರು, ಕಿರಾತರು, ಸಿಂಹಳರು, ಬರ್ಬರರು, ದರದರನ್ನೂ, ಮೈಯಲ್ಲಿರುವ ಉಣ್ಣಿಗಳನ್ನು ಕೊಡವಿ ಮ್ಲೇಚ್ಛರನ್ನೂ ಸೃಷ್ಟಿಸಿದಳು. ನಂದಿನಿಯ ಮಹಾಸೇನೆ ಹೇಗಿತ್ತೆಂದರೆ ಅವರು ನಾನಾ ವಿಧವಾದ ಕವಚಗಳನ್ನೂ, ಭೀಕರ ಆಯುಧಗಳನ್ನೂ ಧರಿಸಿದ್ದರು. ಮಹಾಬಲರಾದ ಅವರೆಲ್ಲರೂ ಕೌಶಿಕನ ಸಹಿತ ಆತನ ಸೇನೆಯ ಮುಗಿಬಿದ್ದು ಇನ್ನಿಲ್ಲದಂತೆ ದಂಡಿಸತೊಡಗಿದರು. ನಂದಿನಿಯ ಬೆನ್ನಿಗೆ ಬಿದ್ದ ಪೆಟ್ಟುಗಳು ನೂರ್ಮಡಿಯಾಗಿ ಕೌಶಿಕನ ಸೇನೆಯ ಪ್ರತಿಯೊಬ್ಬನಿಗೂ ಶಿಕ್ಷೆಯ ರೂಪದಲ್ಲಿ ಹುಡುಕಿ ಹುಡುಕಿ ಹೊಡೆದಂತೆ ಬೀಳತೊಡಗಿತು. ನಂದಿನಿಯ ಸೇನಾಸಂಖ್ಯೆಯ ಅನುಪಾತ ಅಂದಾಜಿಸುವುದಾದರೆ, ಕೌಶಿಕ ಒಬ್ಬ ಸೈನಿಕನಿಗೆ ಹತ್ತರಂತೆ ಇದ್ದು ಬೆನ್ನಿನ ಚರ್ಮ ಕಿತ್ತು ಬರುವಂತೆ ಏಟುಗಳು ಬೀಳತೊಡಗಿದವು. ಕೌಶಿಕನು ಎಷ್ಟು ಉಗ್ರನಾಗಿ ಹೋರಾಡಿದರೂ ಆತನ ಮಹಾಸ್ತ್ರಗಳು, ಮಂತ್ರಾಸ್ತ್ರಗಳು ಯಾವುದೂ ಪ್ರಯೋಜನಕ್ಕೆ ಬಾರದೆ ಸಾಗರಕ್ಕೆಸೆದ ಕಲ್ಲಿನಂತಾಗಿ ಹೋದವು. ಅನ್ಯ ಮಾರ್ಗ ಕಾಣದೆ ಓಡಿಹೋಗುತ್ತಿದ್ದ ಸೇನೆಯನ್ನು ಹಿಂಬಾಲಿಸಿ ತಾನೂ ಓಡಲೇ ಬೇಕಾಯಿತು. ಆದರೂ ಬೆಂಬಿಡದೆ ಮೂರು ಯೋಜನೆಗಳಷ್ಟು ದೂರ ಬೆಂಬತ್ತಿ ಮತ್ತೆ ಮತ್ತೆ ಹೊಡೆದುರುಳಿಸುತ್ತಾ ಪ್ರತಿಯೊಬ್ಬರೂ ಅಯ್ಯೋ, ದಮ್ಮಯ್ಯ, ದಕ್ಕಯ್ಯ ಹೊಡೆಯಬೇಡಿ ಸಹಿಸಲಾಗದು ಎಂದು ಅಂಗಲಾಚಿ ಬೇಡಿ ಪ್ರಾಣ ಒಂದುಳಿದರೆ ಸಾಕೆಂದು ಕಂಡ ಕಡೆ ಓಡಿ ಚೆಲ್ಲಾಪಿಲ್ಲಿಯಾಗಿ ಹೋದರು. ಯತಾರ್ಥವಾಗಿ ಹೇಳುವುದಾದರೆ ಕೌಶಿಕನ ಒಬ್ಬೊಬ್ಬ ಸೈನಿಕನೂ ಸುಧಾರಿಸಿಕೊಳ್ಳಲು ಒಂದೆರಡು ಮಾಸಗಳಷ್ಟು ಸಮಯ ಬೇಕಾದೀತು.
ನಂದಿನಿ ಇಷ್ಟೆಲ್ಲಾ ಪೌರುಷ ತೋರುವಾಗಲೂ ವಸಿಷ್ಟರು ಮೊದಲು ನಂದಿನಿಗೆ ಹಿಂಸೆ ನೀಡುವಾಗ ಹೇಗೆ ಕದಲದೆ ನಿಂತಿದ್ದರೋ ಹಾಗೆಯೇ ನಿಂತಿದ್ದಾರೆ. ಜ್ಞಾನಿಗಳ ಲಕ್ಷಣವೇ ಹಾಗೆ. ಆಪತ್ತು ಬಂದಾಗಲೂ ಅಂಜಿ ಅಳುಕಲಾರರು. ವಿಜಯ ಪ್ರಾಪ್ತವಾದರೂ ಸಂಭ್ರಮಿಸಿ ತೇಲಾಡಲಾರರು ಇಂತಹ ಸ್ಥಿತ ಪ್ರಜ್ಞೆ ವಸಿಷ್ಟರಿಗೆ ಇರುವುದು ವಿಶೇಷವೇನಲ್ಲ. ಯಾಕೆಂದರೆ ಅವರು ಮಹಾತ್ಮರಾಗಿ ಪ್ರಸಿದ್ದರಾಗಿರುವುದೇ ಅವರ ಶಾಂತಚಿತ್ತಕ್ಕೆ, ಸಂಯಮಕ್ಕೆ, ಕ್ಷಮಾ ಬುದ್ದಿಗೆ. ಅಂತಹ ವಿಶೇಷ ಗುಣ ಸಂಪನ್ನರಾದ ವಸಿಷ್ಟರು ಈಗಲೂ ನಿರಾಳರಾಗಿಯೇ ಇದ್ದಾರೆ.
ಇತ್ತ “ಬದುಕಿದರೆ ಬೇಡಿ ತಿನ್ನುತ್ತೇನೆ” ಎಂಬಷ್ಟು ತೀರಾ ಕೆಳಗೆ ಬಿದ್ದಿದ್ದ ಕೌಶಿಕನಿಗೆ ಅಪಮಾನವನ್ನು ಸಹಿಸಲಾಗಲಿಲ್ಲ. ತನಗೆ ಅನ್ನವಿತ್ತವನಿಗೆ ಹಿಂಸೆ ನೀಡಿದೆ ಎಂಬ ಅಪರಾಧ ಪ್ರಜ್ಞೆ ಮೂಡಲೇ ಇಲ್ಲ. ಅದರ ಬದಲಾಗಿ ತಾನೊಬ್ಬ ಮಹಾರಾಜ, ಬಲಾನ್ವಿತ, ಪರಾಕ್ರಮಿ, ಶಕ್ತಿಶಾಲಿಯಾಗಿದ್ದರೂ ಒಬ್ಬ ಋಷಿಯ ಆಶ್ರಮಕ್ಕೆ ಹೋಗಿ ತುಂಬಾ ಹೀನಾಯವಾಗಿ ಅಪಮಾನಕ್ಕೊಳಗಾಗಿದ್ದೇನೆ. ಇದಕ್ಕೆ ಪ್ರತಿಕಾರ ತೀರಿಸಲೇ ಬೇಕು ಎಂದು ಹಗೆಯ ಭಾವ ಮನತುಂಬಿಕೊಂಡನು. ತನಗೆ ಸೋಲಾಗುವಲ್ಲಿ ಏನು ದೌರ್ಬಲ್ಯವಿತ್ತು? ವಸಿಷ್ಟ ಗೆಲ್ಲುವಲ್ಲಿ ಯಾವ ಬಲ ಕಾರಣವಾಯಿತು ಎಂಬ ತರ್ಕ ಯೋಚನೆಯ ವಸ್ತುವಾಯಿತು. ಹೀಗೆ ಇದರ ಕುರಿತಾಗಿಯೇ ಯೋಚನೆ ಮಾಡುತ್ತಾ, ಮಾಡುತ್ತಾ.. ಒಂದು ವಿಚಾರ ಸ್ಪಷ್ಟವಾಯಿತು. ಏನೆಂದರೆ,
ಧಿಗ್ಬಲಂ ಕ್ಷತ್ರಿಯಬಲಂ ಬ್ರಹ್ಮ ತೇಜೋ ಬಲಂ ಬಲಮ್|
ಬಲಾಬಲಂ ವಿನಿಶ್ಚಿತ್ಯ ತಪ ಏವ ಪರಂ ಬಲಮ್||
ಅಂದರೆ ಕ್ಷತ್ರಿಯ ಬಲಕ್ಕೆ ಧಿಕ್ಕಾರ, ಅದು ಬಲವಲ್ಲ ಬಲಹೀನತೆ. ಬ್ರಹ್ಮ ತೇಜಸ್ಸಿನ ಬಲವೇ ಮಹಾಬಲ. ಅಂತಹ ಮಹಾಬಲವನ್ನು ಸಾಧಿಸಬೇಕಾದರೆ ಅದಕ್ಕೆ ಆ ಋಷಿಯಂತೆ ತಪಸ್ಸನ್ನಾಚರಿಸಿಯೇ ಸಂಪಾದಿಸಬೇಕು. ಆ ಶಕ್ತಿಯಿಂದ ತನಗೆ ಅಪಮಾನ ಎಸಗಿದವನನ್ನು ಮಣಿಸಬೇಕು. ಹೀಗೆಂದು ತೀರ್ಮಾನಿಸಿದ. ಸಮೃದ್ಧವಾದ ರಾಜ್ಯವಾಗಲೀ, ವಿರಾಜಮಾನಳಾಗಿರುವ ರಾಜಲಕ್ಷ್ಮಿಯಾಗಲೀ, ಸಾರ್ವಭೌಮತ್ವದ ಅಧಿಕಾರವಾಗಲೀ, ಕೋಶ, ಭಂಡಾರ, ಕೊಪ್ಪರಿಗೆ, ಉಪ್ಪರಿಗೆಯುಳ್ಳ ಅರಮನೆಯಾಗಲೀ, ಸುಖ ನೀಡುವ ರಾಣಿಯರಾಗಲೀ, ಹೊಗಳಿ ಹಾಡುವ ಹೊಗಳು ಭಟರಾಗಲೀ, ಕವಿ – ಕೋವಿದರಾಗಲೀ ಯಾವುದೂ – ಯಾರೂ ಮನಸ್ಸಿಗೆ ಹಿತ ನೀಡಲಾಗದೇ ಹೋಯಿತು. ಇದ್ಯಾವುದರ ಮೇಲೂ ಆಸಕ್ತಿ ಕಳೆಗುಂದಿ ನಿಶ್ಯೇಷವಾಯಿತು. ವಿರಕ್ತ ಭಾವವೇ ಬಲವಾಗಿ ಸಕಲ ಸೌಭಾಗ್ಯಗಳನ್ನೂ ಪರಿತ್ಯಾಗ ಮಾಡಿ, ಸುಖ ಭೋಗಗಳನ್ನು ತ್ಯಜಿಸಿ ಪುರ ತೊರೆದು ಕಾಡು ಸೇರಿದನು. ತಪಸ್ಸೇ ಶ್ರೇಷ್ಟ ಕರ್ಮ, ತಪಸ್ಶಕ್ತಿಯೇ ಉತ್ಕೃಷ್ಟ ಎಂಬ ಸ್ಪಷ್ಟ ಗುರಿಯನ್ನು ಅರಿತವನಾಗಿ ತಪಸ್ಸನ್ನಾಚರಿಸತೊಡಗಿದನು.
ಮುಂದುವರಿಯುವುದು…






























































































































