
ಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ ಅವರ ಮೊದಲ ಪತ್ನಿ ನಾಗರತ್ನ ನಡುವಿನ ದಾಂಪತ್ಯ ಕಲಹಕ್ಕೆ ಅಂತಿಮ ತೆರೆ ಬಿದ್ದಿದೆ. ಇಬ್ಬರ ವಿಚ್ಛೇದನಕ್ಕೆ ಹೈಕೋರ್ಟ್ ಅನುಮತಿ ನೀಡಿದ್ದು, ಈ ಕುರಿತು ವಿಜಯ್ ಮತ್ತು ನಾಗರತ್ನ ಪ್ರತಿಕ್ರಿಯಿಸಿದ್ದಾರೆ.
ವಿಚ್ಛೇದನದ ಆದೇಶದ ಬಳಿಕ ನಾಗರತ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಮಕ್ಕಳ ಹಾಗೂ ಅವರ ಭವಿಷ್ಯಕ್ಕಾಗಿ ಇಷ್ಟು ವರ್ಷಗಳ ಕಾಲ ಮದುವೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೆ. ಆದರೆ ಇದೀಗ ನ್ಯಾಯಾಲಯ ವಿಚ್ಛೇದನವನ್ನು ಮಂಜೂರು ಮಾಡಿದೆ ಎಂದು ತಿಳಿಸಿದ್ದಾರೆ.
‘ಈ ದೀರ್ಘ ಹೋರಾಟದ ಉದ್ದೇಶ ನಮ್ಮ ಮದುವೆಯ ಹೊರಗೆ ಆಯ್ಕೆ ಮಾಡಿಕೊಂಡ ಅನೈತಿಕ ಸಂಬಂಧವನ್ನು ಕಾನೂನುಬದ್ಧವಾಗಿ ಅಧಿಕೃತಗೊಳಿಸುವುದೇ ಆಗಿದ್ದರೆ, ಕೊನೆಗೂ ಆ ಉದ್ದೇಶ ಈಡೇರಿದೆ. ನಾನು ಅನುಭವಿಸಿದ NARCISSISTIC ABUSE ಹಾಗೂ ಅದರಿಂದಾದ ನೋವು ಮತ್ತು ಪರಿಣಾಮಗಳನ್ನು ಸಹಿಸಿಕೊಂಡಿದ್ದೇನೆ’ ಎಂದು ನಾಗರತ್ನ ಬರೆದಿದ್ದಾರೆ.
ಹೊರಗಿನಿಂದ ಯಾರಿಗೂ ಕಾಣದ ಮಾನಸಿಕ ಮತ್ತು ಭಾವನಾತ್ಮಕ ನೋವನ್ನು ಒಳಗೆ ಇಟ್ಟುಕೊಂಡು ಬದುಕುವುದು ಹೇಗಿರುತ್ತದೆ ಎಂಬುದು ತನಗೆ ಮಾತ್ರ ತಿಳಿದಿದೆ. ಒಂದು ದಿನ ತಮ್ಮ ಅನುಭವವನ್ನು ಹಂಚಿಕೊಳ್ಳುವೆ ಎಂದಿರುವ ನಾಗರತ್ನ, ಇಂತಹ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ತಾವು ಒಂಟಿಯಲ್ಲ ಎಂಬ ಅರಿವು ಮೂಡಿಸುವುದು ತಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.
ತಮ್ಮ ಮಕ್ಕಳ ಭವಿಷ್ಯವೇ ಯಾವಾಗಲೂ ಮೊದಲ ಆದ್ಯತೆಯಾಗಿದ್ದು, ಈಗ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವುದರಿಂದ ತಮ್ಮ ವೈಯಕ್ತಿಕ ನೋವು ಮಕ್ಕಳ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಸದ್ಯ ಮೌನವಾಗಿರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
‘ನನ್ನ ಮೂವರು ಮಕ್ಕಳು ಯಾವಾಗಲೂ ನನ್ನ ಶಕ್ತಿಯಾಗಿ ನನ್ನೊಂದಿಗೆ ನಿಂತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಅವರ ಮೇಲಿದ್ದರೆ ನನಗೆ ಅದೇ ಸಾಕು. ವಿಜಯ್ ಕುಮಾರ್ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ ಎಂದು ಹಾರೈಸುತ್ತೇನೆ. ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಡುತ್ತೇನೆ’ ಎಂದು ನಾಗರತ್ನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ದುನಿಯಾ ವಿಜಯ್ ಮತ್ತು ನಾಗರತ್ನ 1999ರಲ್ಲಿ ವಿವಾಹವಾಗಿದ್ದು ಇಬ್ಬರ ನಡುವಿನ ವೈಮನಸ್ಯದ ಹಿನ್ನೆಲೆಯಲ್ಲಿ 2013ರಲ್ಲಿ ವಿಜಯ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ 2014ರಲ್ಲಿ ಇಬ್ಬರೂ ಮತ್ತೆ ಒಂದಾಗಿದ್ದರು. ಆದರೆ 2018ರಲ್ಲಿ ವಿಜಯ್ ಅವರು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)(ಐ-ಎ), 13(1)(ಐ-ಬಿ) ಅಡಿಯಲ್ಲಿ ಮತ್ತೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿಭೂಷಣ್ ಅವರ ವಿಭಾಗೀಯ ನ್ಯಾಯಪೀಠ ವಿಚ್ಛೇದನ ಮಂಜೂರು ಮಾಡಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್, ಕ್ರೌರ್ಯದ ಆಧಾರದ ಮೇಲೆ ವಿಜಯ್ ಮತ್ತು ನಾಗರತ್ನ ಅವರಿಗೆ ವಿಚ್ಛೇದನ ನೀಡಿದೆ. ಜೊತೆಗೆ ನಾಗರತ್ನ ಅವರಿಗೆ 2 ಕೋಟಿ ರೂ. ಶಾಶ್ವತ ಜೀವನಾಂಶವನ್ನು ಮೂರು ತಿಂಗಳೊಳಗೆ ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ವಿಜಯ್ ಅವರಿಗೆ ಆದೇಶಿಸಿದೆ.




































