ಶ್ರೇಷ್ಠ ಸಂಪ್ರದಾಯ, ಸಂಸ್ಕೃತಿಯಿಂದ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರ ನಮ್ಮದು : ಸಿಎ, ಎಸ್.ಎಸ್.ನಾಯಕ್

ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ 80 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ನಮ್ಮ ಕುಡ್ಲ ಬಿಸಿನೆಸ್ ಟಾನಿಕ್ ನ ಮುಖ್ಯ ಸಂಪಾದಕರು ಹಾಗೂ ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಇದರ ಮಾಸ್ಟರ್ ಟ್ರೈನರ್ ಆಗಿರುವ ಸಿಎ ಎಸ್. ಎಸ್. ನಾಯಕ್ ನವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ದೇಶವು ಹಲವಾರು ಜಾತಿ, ಭಾಷೆ, ಆಚಾರ ವಿಚಾರ, ಕಟ್ಟುಪಾಡುಗಳನ್ನು ಹೊಂದಿರುವ ದೇಶವಾಗಿದ್ದರೂ, ಪ್ರತಿಯೊಬ್ಬರಲ್ಲೂ ಪ್ರಪ್ರಥಮವಾಗಿ ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಹೊಂದಿರಬೇಕು ಎಂದು ಹೇಳಿದರು.
ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಈ ನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ನಾವುಗಳು ನಮ್ಮ ದೇಶಕ್ಕೆ ಋಣಿಯಾಗಿರಬೇಕು. ಶ್ರೇಷ್ಠ ಸಂಪ್ರದಾಯ ಮತ್ತು ಸಂಸ್ಕೃತಿಯಿಂದ ಪ್ರಪಂಚದ ಇತರ ದೇಶಗಳ ಎದುರು ಭಾರತವು ಶ್ರೀಮಂತ ರಾಷ್ಟ್ರವಾಗಿದೆ. “ವಸುದೈವ ಕುಟುಂಬಕಂ”ಇಡಿ ಪ್ರಪಂಚವನ್ನೇ ನಮ್ಮ ಕುಟುಂಬ ಎಂದು ಭಾವಿಸುವ ದೇಶ ನಮ್ಮದು ಇದು ನಮ್ಮ ಹೆಮ್ಮೆ ಎಂದು ಹೇಳಿದರು .
ಯುವಜನತೆ ನಮ್ಮ ರಾಷ್ಟ್ರದ ಶಕ್ತಿ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಮುಂದೆ ಉದ್ಯೋಗ ನಿಮಿತ್ತ ಬೇರೆ ಬೇರೆ ದೇಶಗಳಿಗೆ ತೆರಳಿ ತಮ್ಮ ಸೇವೆಯನ್ನು ಮಾಡುವ ಬದಲು ನಮ್ಮಲ್ಲೇ ಇರುವ ವಿಫುಲ ಅವಕಾಶಗಳನ್ನು ಬಳಸಿ ತಮ್ಮ ಅಮೂಲ್ಯ ಸೇವೆಯನ್ನು ಈ ದೇಶಕ್ಕೆ ನೀಡಿ ತಮ್ಮಲ್ಲಿರುವ ದೇಶಪ್ರೇಮವನ್ನು ಪ್ರದರ್ಶಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಮೂಡುಬಿದಿರೆಯ ಧನಲಕ್ಷಿ ಕ್ಯಾಶೂಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಪತಿ ಭಟ್, ಕಾಲೇಜಿನ ಟ್ರಸ್ಟಿಗಳಾದ ಸುಭಾಷ್ ಝಾ, ಡಾ. ಶರತ್ ಗೋರೆ, ಚಂದ್ರಶೇಖರ ರಾಜೇ ಅರಸ್, ಮೆಹಬೂಬ್ ಬಾಷಾ , ಯೋಗೇಶ್ ಬೆಡೆಕರ್, ಆಡಳಿತಾಧಿಕಾರಿ ಅರುಣ್ ಡಿಸಿಲ್ವ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ಸತೀಶ್ ಬಂಗೇರ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಕು. ಬ್ರಿತಿ ಅರಸ್ ಸ್ವಾಗತಿಸಿದರು. ತಿಶಾನ್ ಪಣಿಯಾಲ್ ವಂದಿಸಿದರು . ದೇವಾಂಶ್ ಬಗರಿಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿ ಮತ್ತು ಕಾಲೇಜಿನ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.













































































































