‘ಶಾಂತಿ ಕ್ರಾಂತಿ’ ಮರುಬಿಡುಗಡೆ ಬಗ್ಗೆ ಬಾಲಾಜಿ ಮಹತ್ವದ ಸ್ಪಷ್ಟನೆ

ಬೆಂಗಳೂರು: ಚಂದನವನದಲ್ಲಿ ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಸಿನಿಮಾದ ಮರು ಬಿಡುಗಡೆ ಕುರಿತಂತೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಇದೀಗ ಈ ಬಗ್ಗೆ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸ್ಪಷ್ಟನೆ ನೀಡಿದ್ದಾರೆ.
1991ರಲ್ಲಿ ರವಿಚಂದ್ರನ್ ನಿರ್ದೇಶನದಲ್ಲಿ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾ ಬಿಡುಗಡೆಯಾಗಿತ್ತು. ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಬಾಕ್ಸ್ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ವಿಭಿನ್ನ ಪ್ರಯತ್ನವಾಗಿ ಇಂದಿಗೂ ಗುರುತಿಸಿಕೊಂಡಿದೆ.
‘ಶಾಂತಿ ಕ್ರಾಂತಿ’ಗಾಗಿ ಹಾಗೂ ನಮ್ಮಣ್ಣನಿಗಾಗಿ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ನಾವು ಚಿರಋಣಿಯಾಗಿದ್ದೇವೆ. ಮರು ಬಿಡುಗಡೆ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ಆರಂಭವಾಗುವುದಕ್ಕೂ ಕೆಲ ದಿನಗಳ ಮುನ್ನವೇ ನಾನು ನಮ್ಮಣ್ಣನೊಂದಿಗೆ ಈ ಕುರಿತು ಮಾತನಾಡಿದ್ದೆ. ಅಂದಿನಿಂದಲೇ ಪ್ರಯತ್ನಗಳು ನಡೆಯುತ್ತಿವೆ ಎಂದು ಬಾಲಾಜಿ ತಿಳಿಸಿದ್ದಾರೆ.
ಆದರೆ ಚಿತ್ರದ ಮೂಲ ನೆಗಟಿವ್ ಮೆಲ್ಟ್ ಆಗಿರುವುದರಿಂದ ಅದನ್ನು ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಸಿದ್ಧಪಡಿಸುವುದು ಸುಲಭವಲ್ಲ. ನಾವು ತುಂಬಾ ಸೋರ್ಸ್ (ಮೂಲಗಳನ್ನು) ಹುಡುಕುತ್ತಾ ಇದ್ದೇವೆ. ಅವು ಸಿಕ್ಕಿ ಪ್ರಯತ್ನ ಯಶಸ್ವಿಯಾದರೆ ಸಿನಿಮಾವನ್ನು ಅಭಿಮಾನಿಗಳ ಮುಂದೆ ತರುವ ಆಸೆ ಇದೆ ಎಂದಿದ್ದಾರೆ.
ಸಿನಿಮಾದ ಕೆಲಸ ಆರಂಭಿಸಿದರೂ ಸಂಪೂರ್ಣ ಪ್ರಕ್ರಿಯೆಗೆ ಕನಿಷ್ಠ ಆರು ತಿಂಗಳಿಂದ ಒಂದು ವರ್ಷದವರೆಗೆ ಸಮಯ ಬೇಕಾಗಬಹುದು. ಕಲರಿಂಗ್, ಮ್ಯೂಸಿಕ್, ರಿ-ರೆಕಾರ್ಡಿಂಗ್, ಎಫೆಕ್ಟ್ಸ್, ಡಿಐ ಹಾಗೂ ರೀ-ಸೆನ್ಸಾರ್ ಸೇರಿದಂತೆ ಹಲವು ಕೆಲಸಗಳು ಇವೆ ಎಂದು ಹೇಳಿದ್ದಾರೆ.
ರವಿಚಂದ್ರನ್ ಅವರು ಅಂದಿನ ಕಾಲದಲ್ಲೇ ಸಿನಿಮಾವನ್ನು ಅದ್ಭುತವಾದ ಕ್ವಾಲಿಟಿಯಲ್ಲಿ ನೀಡಿದ್ದರು. ಹೀಗಾಗಿ ಇಂದಿನ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಸೌಂಡ್, ಡಾಲ್ಬಿ ಹಾಗೂ ಡಿಟಿಎಸ್ ಸೇರಿದಂತೆ ತಾಂತ್ರಿಕ ಕೆಲಸಗಳನ್ನು ಮತ್ತೊಮ್ಮೆ ಮಾಡಬೇಕಿದೆ.
ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂಬುದು ಸುಳ್ಳು ಸುದ್ದಿ. ಸದ್ಯಕ್ಕಂತೂ ನಮ್ಮ ಕೈಯಲ್ಲಿ ಮಾಡೋಕೆ ಆಗಲ್ಲ. ಸೋರ್ಸ್ ಹುಡುಕುತ್ತಿದ್ದೇವೆ. ಅವು ಸಿಕ್ಕು ಮರು ಬಿಡುಗಡೆ ಸಾಧ್ಯವಾದರೆ ಅಭಿಮಾನಿಗಳಿಗೆ ಅಧಿಕೃತವಾಗಿ ತಿಳಿಸಲಾಗುವುದು ಎಂದು ಬಾಲಾಜಿ ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ‘ಶಾಂತಿ ಕ್ರಾಂತಿ’ ಮರು ಬಿಡುಗಡೆ ಕುರಿತು ಹರಿದಾಡುತ್ತಿದ್ದ ಗೊಂದಲಗಳಿಗೆ ಬಾಲಾಜಿ ತೆರೆ ಎಳೆದಿದ್ದಾರೆ.




























































