
ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಎಲ್ಪಿಜಿ ಸಿಲಿಂಡರ್ ಕೊರತೆಯನ್ನು ತಕ್ಷಣ ನಿವಾರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ತುರ್ತು ಕ್ರಮ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ದಿನಕ್ಕೆ ಸುಮಾರು 50,000 ಸಿಲಿಂಡರ್ ಬೇಡಿಕೆ ಇದ್ದರೂ, ಕೇವಲ 1,000 ಸಿಲಿಂಡರ್ಗಳ ಪೂರೈಕೆ ನಡೆಯುತ್ತಿರುವುದು ಸಂಕಷ್ಟವನ್ನು ಹೆಚ್ಚಿಸಿದೆ. ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಹಲವಾರು ಹೋಟೆಲ್ಗಳು ಮುಚ್ಚುವ ಪರಿಸ್ಥಿತಿ ಉಂಟಾಗಿದ್ದು, ಇದರ ಪರಿಣಾಮವಾಗಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಗೃಹ ಬಳಕೆಯ ಎಲ್ಪಿಜಿ ಮೇಲ್ವಿಚಾರಣೆಗೆ ಐಟಿ ವ್ಯವಸ್ಥೆ ಇದ್ದರೂ, ವಾಣಿಜ್ಯ ಹಾಗೂ ಆಟೋ ಎಲ್ಪಿಜಿ ವಿತರಣೆಗೆ ಸಮಗ್ರ ವ್ಯವಸ್ಥೆಯ ಕೊರತೆಯಿದೆ. ಇದರಿಂದ ಪಾರದರ್ಶಕತೆ ಮತ್ತು ನಿಯಂತ್ರಣದ ಅಭಾವ ಉಂಟಾಗಿದೆ ಎಂದು ಸಿಎಂ ಹೇಳಿದ್ದಾರೆ.
ಶೀಘ್ರದಲ್ಲೇ ಭಾರತಕ್ಕೆ ಎರಡು ಟ್ಯಾಂಕರ್ಗಳು ಬರಲಿರುವ ಮಾಹಿತಿ ಲಭ್ಯವಿದ್ದು, ಇದರಿಂದ ಸಮಸ್ಯೆ ಭಾಗಶಃ ಕಡಿಮೆಯಾಗುವ ನಿರೀಕ್ಷೆಯಿದೆ. ಆದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಅಗತ್ಯತೆಗಳನ್ನು ಗಮನಿಸಿ ಸಮರ್ಪಕ ಪ್ರಮಾಣದಲ್ಲಿ ಎಲ್ಪಿಜಿ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಸಿದ್ದರಾಮಯ್ಯ ಅವರು ವಿನಂತಿಸಿದ್ದಾರೆ.






















































