
ಬೆಂಗಳೂರು : ವೈದ್ಯ ಪತಿಯಿಂದಲೇ ಹತ್ಯೆಗೊಳಗಾದ ಚರ್ಮ ರೋಗ ತಜ್ಞ ವೈದ್ಯೆ ಡಾ.ಕೃತಿಕಾ ಕೊಲೆ ಪ್ರಕರಣದ ಸಂಬಂಧ ಮೃತಳ ಪತಿ ಡಾ.ಮಹೇಂದ್ರ ರೆಡ್ಡಿ ವಿರುದ್ಧ ಮಾರತ್ತಹಳ್ಳಿ ಪೊಲೀಸರು ನ್ಯಾಯಾಲಯಕ್ಕೆ 3,700 ಪುಟಗಳ ಆರೋಪ ಪಟ್ಟಿಯನ್ನು ಶುಕ್ರವಾರ ಸಲ್ಲಿಸಿದ್ದಾರೆ.
ಈ ಆರೋಪ ಪಟ್ಟಿಯಲ್ಲಿ ಹಲವು ವಿಚಾರಗಳು ಉಲ್ಲೇಖವಾಗಿದ್ದು ಪತ್ನಿ ಅನಾರೋಗ್ಯದ ಬಗ್ಗೆ ಬೇಸರ ಹಾಗೂ ಹಲವು ಮಹಿಳೆಯರ ಜತೆ ಆರೋಪಿಯ ‘ಆಪ್ತ’ ಸ್ನೇಹವು ಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
2024ರ ಮೇ 26ರಂದು ಮುನೇಕೊಳಲುವಿನ ಕೃತಿಕಾ ರೆಡ್ಡಿ ಹಾಗೂ ಮಹೇಂದ್ರ ರೆಡ್ಡಿ ವಿವಾಹವಾಗಿದ್ದು ಮದುವೆ ಬಳಿಕ ಆರಂಭದಲ್ಲಿ ಅನ್ಯೋನವಾಗಿದ್ದ ದಂಪತಿ ಬಾಲ್ಯದಿಂದಲೂ ಕೃತಿಕಾ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಳು ಎಂಬ ವಿಚಾರ ತಿಳಿದ ಮಹೇಂದ್ರ ರೆಡ್ಡಿ, ತನಗೆ ಅನಾರೋಗ್ಯ ಬಗ್ಗೆ ಹೇಳದಂತೆ ಮೋಸದಿಂದ ಮದುವೆ ಮಾಡಿದ್ದಾರೆ ಎಂದು ಮೃತಳ ಪೋಷಕರ ಮೇಲೆ ಬೇಸರಗೊಂಡಿದ್ದ. ಇದಾದ ಬಳಿಕ ದಂಪತಿ ಮಧ್ಯೆ ಮನಸ್ತಾಪ ಮೂಡಿದ್ದು ಬಳಿಕ 10ಕ್ಕೂ ಹೆಚ್ಚಿನ ವೈದ್ಯೆಯರು ಸೇರಿದಂತೆ ಕೆಲ ಮಹಿಳೆಯರ ಜತೆ ಮಹೇಂದ್ರ ರೆಡ್ಡಿಗೆ ಸಲುಗೆ ಇತ್ತು. ಈ ಸ್ನೇಹ ವಿಷಯ ತಿಳಿದು ಕೃತಿಕಾ ಆಕ್ಷೇಪ ವ್ಯಕ್ತಪಡಿಸಿದ್ದಳು. ಇದರಿಂದ ಕೆರಳಿದ ಆರೋಪಿ, ತನ್ನ ಬದುಕಿಗೆ ಅಡ್ಡಿಯಾಗಿದ್ದಾಳೆ ಎಂದು ಭಾವಿಸಿ ಪತ್ನಿ ಕೊಲೆಗೆ ನಿರ್ಧರಿಸಿದ್ದ. ಅಂತೆಯೇ ಅನಾರೋಗ್ಯಕ್ಕೀಡಾಗಿದ್ದ ಕೃತಿಕಾ ರೆಡ್ಡಿಗೆ ಕಾನೂನುಬಾಹಿರವಾಗಿ ನಿಗದಿತ ಪ್ರಮಾಣಕ್ಕಿಂತ ಅರವಳಿಕೆ ಮದ್ದು ನೀಡಿ ಹತ್ಯೆ ಮಾಡಿದ್ದ. ಈ ಹತ್ಯೆ ಬಳಿಕ ಸಭ್ಯಸ್ಥನಂತೆ ಆತ ನಟಿಸಿದ್ದ. ಆದರೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅರವಳಿಕೆ ಚುಚ್ಚು ಮದ್ದು ಸಾವಿಗೆ ಕಾರಣವಾದ ಅಂಶ ಉಲ್ಲೇಖವಾಗಿತ್ತು.
ಆರು ತಿಂಗಳ ಬಳಿಕ ಕೃತಿಕಾ ಸಾವಿನ ರಹಸ್ಯ ಬಯಲಾಗಿ ರಾಷ್ಟ್ರ ಮಟ್ಟದಲ್ಲಿ ಚರ್ಚೆ ನಡೆದು ತೀವ್ರ ಸಂಚಲನ ಸೃಷ್ಟಿಸಿತ್ತು. ಈ ಹತ್ಯೆ ಸಂಗತಿ ತಿಳಿದು ಆಘಾತಗೊಂಡ ಮೃತ ಕೃತಿಕಾ ತಂದೆ, ತಕ್ಷಣವೇ ಮಾರತ್ತಹಳ್ಳಿ ಠಾಣೆಗೆ ದೂರು ಸಲ್ಲಿಸಿದರು. ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು, ಉಡುಪಿಯಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದು ಬಳಿಕ ತನಿಖೆ ವೇಳೆ ಆತನ ಸ್ನೇಹಿತೆಯರ ಸಂಗವು ಬೆಳಕಿಗೆ ಬಂದಿದೆ. ಈ ಸಂಬಂಧ ಮಹೇಂದ್ರ ರೆಡ್ಡಿಯ ಆಪ್ತ ಗೆಳೆತಿಯರನ್ನು ಸಹ ಪೊಲೀಸರು ತನಿಖೆಗೊಳಪಡಿಸಿದ್ದರು. ತಾನು ವೈದ್ಯ ಎಂದು ಹೇಳಿಕೊಂಡು ಅಕ್ರಮವಾಗಿ ಅರವಳಿಕೆ ಚುಚ್ಚು ಮದ್ದು ಖರೀದಿಸಿ ತಂದು ಪತ್ನಿಗೆ ನೀಡಿ ಹತ್ಯೆ ಮಾಡಿದ ವಿಚಾರ ಬಯಲಾಗಿದೆ.



















