
ಶ್ರೀ ಬೆರ್ಮೆರ್ ಬೈದೇರುಗಳ ಆರಾಧಕರ ಪ್ರತಿಷ್ಠಾನ, ಕಾರ್ಕಳ – ಹೆಬ್ರಿ ಇದರ ಸಂಚಾಲನಾಪೂರ್ವ ಸಭೆಯು ದಿನಾಂಕ 19.07.2026ರಂದು ಕುಕ್ಕುಂದೂರಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಭಾಭವನದಲ್ಲಿ ನಡೆಯಿತು.
ಈ ಸಮಾಲೋಚನ ಸಭೆಯಲ್ಲಿ ಕೇಂಜ ಗರಡಿಯ ಗಡಿ ಪ್ರಧಾನರಾದ ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್, ಬೈಲಡ್ಕ ಗರಡಿಯ ಆಡಳಿತ ಮೊಕ್ತೇಸರರಾದ ಧೀರಜ್ ಚಂದರ್, ಹಿರಿಯ ಗರಡಿ ಪೂಜಾರಿಯಾದ ಇರ್ವತ್ತೂರು ಚೆಲುವಯ್ಯ ಪೂಜಾರಿ ಸೇರಿದಂತೆ ಕಾರ್ಕಳ ಹೆಬ್ರಿ ಭಾಗದ ಗರಡಿ ಆರಾಧಕರು ಹಾಜರಿದ್ದು ಪ್ರಸ್ತುತ ಗರಡಿ ಆರಾಧನೆ ಎದುರಿಸುತ್ತಿರುವ ಕೆಲವೊಂದು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಮುಂದಕ್ಕೆ ಗರಡಿ ಆರಾಧಕರನ್ನು ಒಗ್ಗೂಡಿಸಲು ಮತ್ತು ಗರಡಿ ಆರಾಧಕರ ಸಮಸ್ಯೆಗಳನ್ನು ಸರಕಾರಕ್ಕೆ ಮುಟ್ಟಿಸಿ ಸರಕಾರದಿಂದ ಸವಲತ್ತನ್ನು ಪಡೆಯಲು ಇಂತಹ ಒಂದು ಸಂಘಟನೆಯ ಅಗತ್ಯವಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಾರಾಯಣ ಗುರು ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀ ಮಂಜುನಾಥ ಪೂಜಾರಿಯವರು ಈ ಸಭೆಗೆ ಆಗಮಿಸಿ ನೂತನ ಸಂಘಟನೆಗೆ ಶುಭ ಕೋರಿದ್ದು ಮಾತ್ರವಲ್ಲದೆ ಮುಂದಕ್ಕೆ ಗರಡಿ ಆರಾಧಕರ ಮಾಸಾಶನದ ಕುರಿತಾಗಿ ಅಭಿವೃದ್ದಿ ನಿಗಮದ ಮೂಲಕ ಸ್ಪಂದಿಸಲು ಪ್ರಯತ್ನಿಸುವುದಾಗಿ ಭರವಸೆಯನ್ನು ನೀಡಿದರು. ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದರೂ ಸಂಘಟನೆಗೆ ತಮ್ಮ ಶುಭಾಶಯವನ್ನು ಕಳಿಸಿರುವುದು ಮಾತ್ರವಲ್ಲದೆ ಗರಡಿ ಆರಾಧಕರಿಗೆ ಬೇಕಾದ ವಿಮೆಯನ್ನು ಒದಗಿಸುವ ನಿಟ್ಟಿನಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿರುತ್ತಾರೆ.
ಆದಷ್ಟು ಬೇಗ ಈ ಪ್ರತಿಷ್ಠಾನವನ್ನು ನೋಂದಣಿ ಮಾಡಿಸಿ ಆಡಳಿತ ಮಂಡಳಿಯನ್ನು ರಚಿಸಿ ಶ್ರಾವಣ ಮಾಸದಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು. ಆ ಮೂಲಕ ಮುಂದಕ್ಕೆ ಆದಷ್ಟು ಬೇಗ ಗರಡಿ ಪೂಜಾರಿಗಳಿಗೆ ಮತ್ತು ದರ್ಶನ ಪೂಜಾರಿಗಳಿಗೆ ಮಾಸಾಶನ, ಜೀವವಿಮೆ, ಪಿಂಚಣಿ ಇನ್ನಿತರ ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸಬೇಕೆಂದು ತೀರ್ಮಾನಿಸಲಾಯಿತು. ಶೀಘ್ರದಲ್ಲೇ ಈ ಸಂಘಟನೆಯನ್ನು ಉಡುಪಿ ಮತ್ತು ಕಾಪು ತಾಲೂಕುಗಳಿಗೆ ವಿಸ್ತರಿಸುವ ಜವಾಬ್ದಾರಿಯನ್ನು ಬಗ್ಗ ಪೂಜಾರಿಯವರು ವಹಿಸಿಕೊಂಡರು.
ಇನ್ನು ಮುಂದಕ್ಕೆ ಟಿವಿ ಕಾರ್ಯಕ್ರಮಗಳಲ್ಲಾಗಲಿ, ಸಮಾಜದ ಬೇರೆ ಎಲ್ಲೇ ಆಗಲಿ, ಬ್ರಹ್ಮಬೈದ್ಯರುಗಳ ಬಗ್ಗೆ ಮತ್ತು ಬೈದರ್ಕಳ ಆರಾಧನೆಯ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವಂತಹ ಎಲ್ಲರನ್ನು ಸಂಘಟಿತವಾಗಿ ವಿರೋಧಿಸುವ ಕೆಲಸಕ್ಕೆ ಈ ಸಂಘಟನೆ ಮುಂದಾಗಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಜೊತೆಗೆ ಈ ಸಂಘಟನೆಯು ರಾಜಕೀಯಾತೀತವಾಗಿ ಗರಡಿ ಆರಾಧಕರ ಪ್ರತಿ ಸಮಸ್ಯೆಗೆ ಸ್ಪಂದನೆ ನೀಡುವ ಮತ್ತು ಗರಡಿ ಆರಾಧನೆಯ ವಿಷಯಗಳಲ್ಲಿ ಗರಡಿ ಆರಾಧಕರಿಗೆ ಬೇಕಾಗುವ ಮಾಹಿತಿಗಳನ್ನು ಒದಗಿಸುವ ಒಂದು ಒಳ್ಳೆಯ ವೇದಿಕೆಯಾಗಲಿ ಎಂದು ಕೂಡಿದ್ದ ಗರಡಿ ಆರಾಧಕರೆಲ್ಲ ಅಭಿಪ್ರಾಯಪಟ್ಟರು.

















































