
ನವದೆಹಲಿ: ಎರಡೂ ಸದನಗಳು ಅಂಗೀಕರಿಸಿದ ವಕ್ಫ್ ತಿದ್ದುಪಡಿ ಕಾಯ್ದೆಗೆ ಏಪ್ರಿಲ್ 5, 2025 ರಂದು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಬಿಸಿ ವಾಗ್ವಾದ ನಡೆದ ಸುದೀರ್ಘ ಚರ್ಚೆಯ ನಂತರ ಶುಕ್ರವಾರ ಬೆಳಗ್ಗೆ ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು.
ಸುಮಾರು 14 ಗಂಟೆಗಳ ಕಾಲ ರಾಜ್ಯಸಭೆಯಲ್ಲಿ ಈ ಮಸೂದೆಯ ಬಗ್ಗೆ ಚರ್ಚೆ ನಡೆದು, ಪರವಾಗಿ 128 ಮತಗಳು ಮತ್ತು ವಿರುದ್ಧವಾಗಿ 95 ಮತಗಳು ಚಲಾವಣೆಯಾಗಿ, ನಂತರ ಅದನ್ನು ಅಂಗೀಕರಿಸಲಾಯಿತು. ಇದಕ್ಕೂ ಮೊದಲು, ಲೋಕಸಭೆಯು ಸುಮಾರು 12 ಗಂಟೆಗಳ ಚರ್ಚೆಯ ನಂತರ ಅದನ್ನು ಅಂಗೀಕರಿಸಿತ್ತು, ಇದರಲ್ಲಿ 288 ಮತಗಳು ಪರವಾಗಿ ಮತ್ತು 232 ಮತಗಳು ವಿರುದ್ಧವಾಗಿ ಚಲಾವಣೆಯಾಗಿದ್ದವು.
ಈ ಕಾನೂನಿನ ನಿಬಂಧನೆಗಳ ಅನುಷ್ಠಾನ ಅಥವಾ ಜಾರಿಗೊಳಿಸುವಿಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್ನಲ್ಲಿ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದು ಈ ಪೈಕಿ ಒಂದು ಅರ್ಜಿಯನ್ನು ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಸಲ್ಲಿಸಿದ್ದಾರೆ ಮತ್ತು ವಕ್ಫ್ನಲ್ಲಿ ಹಗರಣ ಮತ್ತು ದುರುಪಯೋಗದ ಆರೋಪ ಹೊತ್ತಿದ್ದಾರೆ, ಆದರೆ ಇನ್ನೊಂದು ಅರ್ಜಿಯನ್ನು ಅಸೋಸಿಯೇಷನ್ ಫಾರ್ ದಿ ಪ್ರೊಟೆಕ್ಷನ್ ಇನ್ ದಿ ಮ್ಯಾಟರ್ಸ್ ಆಫ್ ಸಿವಿಲ್ ರೈಟ್ಸ್ ಎಂಬ ಸಂಘಟನೆ ಸಲ್ಲಿಸಿದೆ.
ಹೊಸ ಕಾನೂನಿನಡಿಯಲ್ಲಿ, ಲಿಖಿತ ದಾಖಲೆ ಇಲ್ಲದೆ ಯಾವುದೇ ವಕ್ಫ್ ಆಸ್ತಿಯನ್ನು ನೊಂದಾಯಿಸಲಾಗುವುದಿಲ್ಲ, ಅಲ್ಲದೆ ಸರ್ಕಾರಿ, ಭೂಮಿಯನ್ನು ವಕ್ಫ್ ಆಸ್ತಿ ಎಂದು ಹೇಳಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಯಾವುದೇ ಭೂಮಿ ವಿವಾದಿತ ಅಥವಾ ಸರ್ಕಾರಿ ಭೂಮಿ ಕಂಡುಬಂದರೆ ಅದನ್ನು ವಕ್ಫ್ನಲ್ಲಿ ನೋಂದಾಯಿಸಿಕೊಳ್ಳಲಾಗುವುದಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗೆ ತನಿಖೆ ನಡೆಸುವ ಹಕ್ಕನ್ನು ನೀಡಲಾಗಿದೆ. ವಕ್ಫ್ ಆಸ್ತಿಗಳ ಸಂಪೂರ್ಣ ವಿವರಗಳನ್ನು ಆನ್ಲೈನ್ ಪೋರ್ಟಲ್ನಲ್ಲಿ ನೋಂದಾಯಿಸುವುದು ಈಗ ಕಡ್ಡಾಯವಾಗಿದ್ದು, ಇದನ್ನು 6 ತಿಂಗಳೊಳಗೆ ಜಾರಿಗೆ ತರಲಾಗುತ್ತದೆ.
ಬೊಹ್ರಾ ಮತ್ತು ಅಘಾಖಾನಿ ಸಮುದಾಯಗಳಿಗೆ ಪ್ರತ್ಯೇಕ ವಕ್ಫ್ ಮಂಡಳಿಗಳನ್ನು ರಚಿಸಲು ಕಾನೂನು ಅವಕಾಶ ನೀಡುತ್ತದೆ. ಅಲ್ಲದೆ, ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರು ಮತ್ತು ಮಹಿಳೆಯರ ನೇಮಕಾತಿಯನ್ನು ಖಚಿತಪಡಿಸಲಾಗಿದೆ. ವಕ್ಫ್ ಆಸ್ತಿಗಳ ಸಮೀಕ್ಷೆಯ ಜವಾಬ್ದಾರಿಯನ್ನು ಈಗ ಸರ್ವೇ ಆಯುಕ್ತರ ಬದಲಿಗೆ ಜಿಲ್ಲಾಧಿಕಾರಿಗೆ ವಹಿಸಲಾಗಿದೆ.





















