
ಹೆಬ್ರಿ :ನೇತಾಜಿಯವರ ಆದರ್ಶಗಳು ನಮಗೆಲ್ಲರಿಗೂ ದಾರಿದೀಪ. ಅವರ ವಿಚಾರಧಾರೆಗಳನ್ನು ನಾವೆಂದೂ ಮರೆಯದೆ ದೇಶಪ್ರೇಮವನ್ನು ಬೆಳೆಸಿಕೊಂಡು ಜೀವನವನ್ನು ಸಾಗಿಸಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನೇತಾಜಿಯವರ ರಾಷ್ಟ್ರಪ್ರೇಮ ನಮಗೆಲ್ಲ ಅನುಕರಣೀಯವಾದುದು ಎಂದು ಮುದ್ರಾಡಿ ಪಂಚಾಯತ್ ಹಿರಿಯ ಸದಸ್ಯರಾದ ಗಣಪತಿ ಎಂ. ಹೇಳಿದರು.
ಅವರು ನೇತಾಜಿ ಸುಭಾಷ್ ಚಂದ್ರಭೋಸ್ ಜನ್ಮ ದಿನಾಚರಣೆಯ ಪ್ರಯುಕ್ತ ಮುದ್ರಾಡಿ ಪೇಟೆಯ ಹೃದಯಭಾಗದಲ್ಲಿರುವ ನೇತಾಜಿ ಪ್ರತಿಮೆಗೆ ನಡೆದ ಹಾರಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿಯವರು ನೇತಾಜಿ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ಗ್ರಾಮಪಂಚಾಯತ್ ಸದಸ್ಯರಾದ ಸನತ್ ಕುಮಾರ್, ಶಾಂತಾ ದಿನೇಶ್ ಪೂಜಾರಿ, ಶುಭಧರ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೃತ ಕುಲಾಲ್, ಮುದ್ರಾಡಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್,ಸಂತೋಷ್ ಕುಮಾರ್ ಶೆಟ್ಟಿ, ರಾಘವ ನಾಯ್ಕ್, ಗುರುಪ್ರಸಾದ್ ಹೆಗ್ಡೆ ಕೊಳಂಬೆ,ಪ್ರಕಾಶ್ ರಾವ್,ಮುದ್ರಾಡಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರು, ರಿಕ್ಷಾ ಚಾಲಕ ಮಾಲಕರು, ಪ್ರೌಢಶಾಲೆಯ ವಿದ್ಯಾರ್ಥಿ ವೃಂದ, ಊರಿನವರು ಉಪಸ್ಥಿತರಿದ್ದರು. ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪಿ. ವಿ. ಆನಂದ ವಂದಿಸಿದರು.





















