
ಕಾರ್ಕಳ: ಜ 15: ಯಕ್ಷಗಾನ ಎಂದರೆ ಒಂದು ಧಾರ್ಮಿಕ ಪರಂಪರೆಯನ್ನು ಹೊಂದಿರುವ ಧಾರ್ಮಿಕ ನೆಲೆಕಟ್ಟಿನ ಮೇಲೆ ನಡೆದು ಬಂದಿರುವ ಗಂಡುಕಲೆ. ಇದು ಅನಾದಿಕಾಲದಿಂದಲೂ ಯಾವುದೇ ಆತಂಕ-ಅಡ್ಡಿಗಳಿಲ್ಲದೇ ಯಾವುದೇ ಜಾತಿ-ಮತ, ಧರ್ಮ, ಪಕ್ಷಗಳೆನ್ನದೇ ನಿರಂತರವಾಗಿ ಆರಾಧಿಸಿಕೊಂಡು, ನಡೆಸಿಕೊಂಡು ಬಂದಿರುವ ಕರಾವಳಿ ಕರ್ನಾಟಕದ ವಿಶಿಷ್ಟ ಕಲೆ. ಇಂತಹ ಇತಿಹಾಸವನ್ನು ಹೊಂದಿರುವ ಯಕ್ಷಗಾನ ಪ್ರದರ್ಶನ ಆಯೋಜನೆ ಮಾಡಿರುವ ಆಯೋಜಕರ ಮೇಲೆ ಕೇಸು ದಾಖಲು ಮಾಡಿರುವುದನ್ನು ಯಕ್ಷ ಕಲಾ ರಂಗ ರಿ. ಕಾರ್ಕಳ ತೀವ್ರವಾಗಿ ಖಂಡಿಸುತ್ತದೆ.
ನಿನ್ನೆ ದಿನಾಂಕ 14.01.2025ರಂದು ಕಾರ್ಕಳ ತಾಲೂಕಿನ ಮುಂಡ್ಲಿ ಎಂಬಲ್ಲಿ ಪ್ರದರ್ಶನವಾಗುತ್ತಿದ್ದ ಯಕ್ಷಗಾನದ ಪ್ರದರ್ಶನಕ್ಕೆ ತಡೆ ಒಡ್ಡಿದ್ದು, ಅಲ್ಲದೇ ಆಯೋಜಕರ ಮೇಲೆ ಪ್ರಕರಣ ದಾಖಲಿಸಿದ್ದು ಸರಿಯಲ್ಲ. ಹಾಗೂ ಇಡೀ ಊರಿನ ಗ್ರಾಮಸ್ಥರು ಹಾಗೂ ಯಕ್ಷಗಾನ ಅಭಿಮಾನಿಗಳು ಒಟ್ಟಾಗಿ ಸೇರಿ ನಡೆಸುತ್ತಿದ್ದ ಈ ಕಾರ್ಯಕ್ರಮಕ್ಕೆ ಯಾರೋ ಒಬ್ಬರು ದೂರವಾಣಿ ಮೂಲಕ ದೂರು ಸಲ್ಲಿಸಿದರು ಎಂಬ ಕಾರಣಕ್ಕೆ ಪೊಲೀಸು ಇಲಾಖೆ ಈ ರೀತಿ ವರ್ತಿಸಿರುವುದು ಖೇದಕರ. ಇದು ಯಕ್ಷಗಾನ ಕಲೆಗೆ ಮಾಡಿದ ಅವಮಾನ. ದೂರು ನೀಡಿದ ಯಾವುದೇ ವ್ಯಕ್ತಿಯಾಗಲಿ, ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರಾಗಲಿ, ಅಥವಾ ನಾಯಕರಾಗಲಿ ಇಂತಹ ನೀಚ ಕೆಲಸಕ್ಕೆ ಕೈ ಹಾಕಬಾರದು. ಇವರ ಇಂತಹ ವರ್ತನೆಯಿಂದ ಇಡೀ ಕರಾವಳಿ ಭಾಗದ ಸಮಸ್ತ ಜನತೆಯು, ಕಲೆ ಹಾಗೂ ಧಾರ್ಮಿಕತೆ ಮೇಲೆ ಇಟ್ಟಿರುವ ನಂಬಿಕೆಯ ಮೇಲೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ.
ಯಕ್ಷಗಾನ ನಡೆಯದಂತೆ ದೂರು ನೀಡಿದ ಯಾರೇ ಆಗಲಿ, ಕರಾವಳಿ ಜನತೆಗೆ ಕ್ಷಮೆ ಕೇಳಬೇಕು. ಹಾಗೆಯೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ದಾಖಲಾಗಿರುವ ಪ್ರಕರಣವನ್ನು ಈ ಕೂಡಲೇ ಕೈಬಿಡಬೇಕು ಎಂದು ಯಕ್ಷಕಲಾರಂಗ ಕಾರ್ಕಳ ಸಮಸ್ತ ಯಕ್ಷಗಾನ ಕಲಾಭಿಮಾನಿಗಳ ಪರವಾಗಿ ಆಗ್ರಹಿಸುತ್ತದೆ.
ನಿನ್ನೆ ರಾತ್ರಿ ಒಂದು ಹಂತದಲ್ಲಿ ಯಕ್ಷಗಾನ ಪ್ರದರ್ಶನ ನಿಂತೇ ಹೊಗುತ್ತದೆ ಎಂಬ ಸಂದರ್ಭದಲ್ಲಿ ಪ್ರದರ್ಶನ ನಿಲ್ಲದಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಪ್ರದರ್ಶನ ಮುಂದುವರಿಯಲು ಸಹಕಾರ ನೀಡಿದ ಶಾಸಕ ಶ್ರೀ ವಿ ಸುನಿಲ್ ಕುಮಾರ್ ಅವರಿಗೆ ಸಮಸ್ತ ಕಲಾಭಿಮಾನಿಗಳ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಯಾವುದೇ ರಾಜಕೀಯ ಪಕ್ಷದವರಾಗಲಿ, ಇಂತಹ ಕಲೆಗೆ ಸಹಕಾರ ನೀಡಬೇಕೆ ಹೊರತು ಅಡ್ಡಿ ಪಡಿಸಬಾರದಾಗಿ ವಿನಂತಿಸುತ್ತಾ, ಜನರ ಭಾವನೆಗಳಿಗೆ ಯಾವುದೇ ಅಡ್ಡಿ-ಆತಂಕವಾಗದಂತೆ, ಎಲ್ಲಾ ಜನಪ್ರತಿನಿಧಿಗಳು, ಸರ್ಕಾರಗಳು ಸಹಕರಿಸಬೇಕು.
ಯಕ್ಷಗಾನವನ್ನು ನಂಬಿ ಬದುಕುವ ಸಾವಿರಾರು ಕುಟುಂಬಗಳು ಕರಾವಳಿಯಲ್ಲಿ ಇವೆ. ದಿನಕ್ಕೆ ಕೋಟಿಗಿಂತಲೂ ಅಧಿಕ ಯಕ್ಷಗಾನ ಪ್ರದರ್ಶನಗಳಿಂದ ಆರ್ಥಿಕ ವ್ಯವಹಾರ ನಡೆಯುತ್ತದೆ. ಇಂತಹ ಒಂದು ಪ್ರಕರಣಗಳು ಮುಂದುವರೆದರೆ ಕರಾವಳಿಯ ಆರ್ಥಿಕತೆಗೂ ಪೆಟ್ಟು ಬೀಳಲಿದೆ.
ಯಕ್ಷಕಲಾರಂಗ ರಿ. ಕಾರ್ಕಳ ಕಲೆಯನ್ನು ಬೆಳೆಸಿ-ಪ್ರೋತ್ಸಾಹಿಸುವ ನಿರಂತರ ಕಾರ್ಯ ಮಾಡುತ್ತಾ ಬಂದಿದೆ. ಒಂದು ವೇಳೆ ಯಕ್ಷಗಾನ ಆಗಲೀ, ಇತರ ಯಾವುದೇ ಕಲೆ ಆಗಲಿ, ಇಂತಹ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡರೆ ಯಕ್ಷಕಲಾರಂಗವು ಯಾವ ಹೋರಾಟಕ್ಕೂ ತಯಾರಿದೆ ಎಂದು ಕಾರ್ಕಳ ಯಕ್ಷಕಲಾ ರಂಗ ರಿ. ಅಧ್ಯಕ್ಷರಾದ ವಿಜಯ ಶೆಟ್ಟಿ ತಿಳಿಸಿದ್ದಾರೆ.





















