
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರು ಮತ್ತು ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕುದುರೆಮುಖ ವನ್ಯಜೀವಿ ವಿಭಾಗದ ಬೆಳ್ತಂಗಡಿ ವನ್ಯಜೀವಿ ವಲಯ ವ್ಯಾಪ್ತಿಯ ಪ್ರಮುಖ ಪ್ರವಾಸಿ ತಾಣಗಳಾದ ನೇತ್ರಾವತಿ ಪೀಕ್ ಹಾಗೂ ಕಡಮಗುಂಡಿ ಜಲಪಾತಕ್ಕೆ ತಾತ್ಕಾಲಿಕವಾಗಿ ಪ್ರವೇಶ ನಿರ್ಬಂಧಿಸಲಾಗಿದೆ.
ಈಗಾಗಲೇ ನೇತ್ರಾವತಿ ಪೀಕ್ ಚಾರಣಕ್ಕೆ ಅವಕಾಶವನ್ನು ಸ್ಥಗಿತಗೊಳಿಸಿರುವ ಅರಣ್ಯ ಇಲಾಖೆ, ಜುಲೈ 10ರ ಬಳಿಕ ಮಳೆಯ ತೀವ್ರತೆ ಹಾಗೂ ಹವಾಮಾನ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ. ಪರಿಸ್ಥಿತಿ ಅನುಕೂಲಕರವಾಗಿದ್ದರೆ ಮಾತ್ರ ಚಾರಣಕ್ಕೆ ಮರುಅನುಮತಿ ನೀಡಲಾಗುವುದು.
ಇದೇ ವೇಳೆ, ದಿಡುಪೆ ಸಮೀಪದ ಕಡಮಗುಂಡಿ ಜಲಪಾತಕ್ಕೂ ಜುಲೈ 9ರಿಂದ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮುಂದಿನ ಆದೇಶ ಹೊರಬೀಳುವವರೆಗೆ ಯಾರೂ ಜಲಪಾತದ ಪ್ರದೇಶಕ್ಕೆ ತೆರಳಬಾರದು ಎಂದು ಬೆಳ್ತಂಗಡಿ ವನ್ಯಜೀವಿ ವಲಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.











































