
ವಿಜಯವಾಡ: ತಿರುಪತಿ ಲಡ್ಡು ಕಲಬೆರಿಕೆ ವಿಚಾರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ದೇವರ ವಿಚಾರದಲ್ಲಿ ರಾಜಕೀಯ ಮಾಡಬೇಡಿ, ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಹಾಗಾಗಿ ನೀವೆ ರಚಿಸಿದ ಎಸ್ಐಟಿಯಿಂದ ತನಿಖೆ ನಡೆಸುವ ಬದಲು ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಲಿ ಎಂದು ಹೇಳಿದ ಬೆನ್ನಲ್ಲೇ ತಿರುಪತಿ ಲಡ್ಡುಗೆ ಕಲಬೆರಕೆ ತುಪ್ಪ ವಿವಾದ ಕುರಿತ ಎಸ್ಐಟಿ ತನಿಖೆಗೆ ತಡೆ ನೀಡಲಾಗಿದೆ. ಸುಪ್ರೀಂನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವುರಿಂದ ಆ.3ರವರೆಗೆ ತನಿಖೆಯನ್ನು ನಿಲ್ಲಿಸುತ್ತೇವೆ ಎಂದು ಆಂಧ್ರ ಡಿಜಿಪಿ ಮಾಹಿತಿ ನೀಡಿದ್ದಾರೆ.
ಡಿಜಿಪಿ ದ್ವಾರಕಾ ತಿರುಮಲ ರಾವ್ ಈ ಕುರಿತು ಮಾಹಿತಿ ನೀಡಿ, ‘ತಿರುಪತಿ ಲಡ್ಡು ಪ್ರಸಾದದಲ್ಲಿನ ಕಲಬೆರಕೆ ವಿವಾದದ ಬಗ್ಗೆ ತನಿಖೆಯನ್ನು ನಡೆಸಲು ಎಸ್ಐಟಿ ರಚಿಸಲಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಇದಕ್ಕೆ ಸಂಬಂಧಿಸಿದ ಪ್ರಕರಣ ನಡೆಯುತ್ತಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಎಸ್ಐಟಿ ತನಿಖೆಗೆ ಆ. 3ರ ತನಕ ತಡೆ ನೀಡಲಾಗಿದೆ’ ಎಂದು ಹೇಳಿದ್ದಾರೆ.
ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪ್ರಕರಣದ ತನಿಖೆಗಾಗಿ ಎಸ್ಐಟಿ ರಚಿಸಿದ ಬಳಿಕ ಕಳೆದ ಎರಡು ದಿನಗಳಲ್ಲಿ ತನಿಖೆ ಆರಂಭಿಸಿತ್ತು. ಈ ನಡುವೆ ಸೋಮವಾರ ಸುಪ್ರೀಂ ದೇವರ ವಿಚಾರದಲ್ಲಿ ರಾಜಕೀಯ ತರಬೇಡಿ ಎಂದು ಆಂಧ್ರ ಸರ್ಕಾರಕ್ಕೆ ಚಾಟಿ ಬೀಸಿ, ಎಸ್ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು.













