
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತಕ್ಕೀಡಾಗಿ ಕಳೆದ 13 ದಿನಗಳಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಇದೊಂದು ಆಗಬಾರದ ದುರ್ಘಟನೆ. ಇವತ್ತು ಬದುಕಿನ ಕೊನೆಯ ಹಂತವನ್ನ ನೋಡಿ ಹೋರಾಟ ಮಾಡಿ ಬದುಕಿ ಬಂದಿದ್ದೇನೆ. ಇದಕ್ಕೆಲ್ಲ ಹಿರಿಯರ ಆಶೀರ್ವಾದ, ತಂದೆ ತಾಯಿ ಆಶೀರ್ವಾದ ಕಾರಣ. ಬಹಳಷ್ಟು ಜನರಿಗೆ ಧನ್ಯವಾದ ಹೇಳ್ತೀನಿ. ಏಕೆಂದರೆ ರಾಜ್ಯದ ಮಠಾಧೀಶರು, ಪೂಜ್ಯರು ಶೀಘ್ರ ಗುಣಮುಖರಾಗಿ ಅಂತಾ ಆಶೀರ್ವಾದ ಮಾಡಿದರು. ಇದು ನನಗೆ ಬಹಳಷ್ಟು ಶಕ್ತಿ, ಧೈರ್ಯ ತಂದುಕೊಟ್ಟಿತು. ಅಲ್ಲದೇ ರಾಜ್ಯದ ಸಿಎಂ, ಡಿಸಿಎಂ, ಹಾಲಿ ಮತ್ತು ಮಾಜಿ ಶಾಸಕರು, ಸಚಿವರು ಬಂದು ನನ್ನ ಅರೋಗ್ಯ ವಿಚಾರಿಸಿದ್ರು, ಶೀಘ್ರ ಚೇತರಿಕೆಯಾಗುವಂತೆ ಹಾರೈಸಿದ್ರು. ಸುರ್ಜೇವಾಲಾ ಅವರು ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ರು. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಮುಖ್ಯವಾಗಿ ಡಾ.ರವಿ ಪಾಟೀಲ್ ಅವರ ವೈದ್ಯರ ತಂಡಕ್ಕೆ ಧನ್ಯವಾದ ಹೇಳ್ತೀನಿ. ಇದರೊಂದಿಗೆ ಕ್ಷೇತ್ರದ ಎಲ್ಲ ಮತದಾರರು, ನನಗಾಗಿ ಪೂಜೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಭಾವುಕರಾದರು.
ನನಗೆ ಜವಾಬ್ದಾರಿ ಬಹಳ ಇದೆ, ಮಾರ್ಚ್ ನಲ್ಲಿ ಬಜೆಟ್ ಮಂಡನೆ ಮಾಡಬೇಕು. ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲಸ ಮಾಡ್ತಿದ್ದೇನೆ. ವೈದ್ಯರು ಇನ್ನೂ ಮೂರು ವಾರಗಳ ಕಾಲ ರೆಸ್ಟ್ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.





















