
ರಾಜ್ಯದಲ್ಲಿರುವ ಆಸ್ಪತ್ರೆ ಹಾಗೂ ಶಾಲೆಗಳ ಆವರಣದಲ್ಲಿ ಇರುವ ಕ್ಯಾಂಟೀನ್ ಗಳಲ್ಲಿ ಜಂಕ್ ಫುಡ್ ಗಳ ಮಾರಾಟ ನಿಷೇಧಿಸಲು ನಿಯಮ ಜಾರಿಗೆ ತರುವ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.
ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಕುಂದು ಕೊರತೆ ಹಾಗೂ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡುತ್ತಾ, ಇಂದಿನ ಯುವಜನತೆ ಜಂಕ್ ಫುಡ್ ಗೆ ಅವಲಂಬಿತರಾಗಿದ್ದು ಇದು ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ, ಇದನ್ನು ನಿಷೇಧಿಸಿ ದೇಹದ ಆರೋಗ್ಯ ಕಾಪಾಡಲು ಸಾಧ್ಯವಿದೆ. ಅದಕ್ಕಾಗಿ, ಆಸ್ಪತ್ರೆ ಮಾತ್ರವಲ್ಲದೆ ಎಸ್ಎಸ್ಎಲ್ ಸಿ ವರೆಗೆ ಇರುವ ಶಾಲೆಗಳ ಸುತ್ತಮುತ್ತಲು ಜಂಕ್ ಫುಡ್ ಮಾರಾಟಕ್ಕೆ ಅವಕಾಶ ನೀಡದಂತೆ ನಿಯಮ ಜಾರಿಗೊಳಿಸುವ ಚಿಂತನೆ ನಡೆಸಲಾಗಿದೆ ಎಂದರು.
ಇದಲ್ಲದೇ, ಮಾಲ್ ಸೇರಿದಂತೆ, ವಿವಿಧ ಕಡೆಗಳಲ್ಲಿ ಮಾರಾಟವಾಗುವ ಆಹಾರ ವಸ್ತುಗಳ ಗುಣಮಟ್ಟ ಪರೀಕ್ಷೆ ಕಡ್ಡಾಯಗೊಳಿಸಲಾಗುತ್ತದೆ. ಗುಣಮಟ್ಟ ರಹಿತ ಆಹಾರ ವಸ್ತುಗಳ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಲ್ಲಿಯವರೆಗೆ ಅಂತಹ ಆಹಾರ ವಸ್ತುಗಳ ತಯಾರಕರ ವಿರುದ್ಧ ಕೇಸು ದಾಖಲಿಸಿದರೆ, ಗುಣಮಟ್ಟ ತಪಾಸಣೆ ಮೊದಲಾದ ಕೆಲವು ನ್ಯೂನ್ಯತೆಗಳಿಂದ ಕೋರ್ಟ್ಗಳಲ್ಲಿ ಶಿಕ್ಷೆಯಾಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದರು. ಈ ಕಾರಣದಿಂದ ಬೆಂಗಳೂರಿನಲ್ಲಿ ಇರುವ ಆಹಾರ ಗುಣಮಟ್ಟ ತಪಾಸಣಾ ಲ್ಯಾಬ್ ಉನ್ನತ ಮಟ್ಟದಲ್ಲಿ, ಮೇಲ್ದರ್ಜೆಗೆ ಪಿಪಿಪಿ ಮಾದರಿಯಲ್ಲಿ ಏರಿಸಲು ನಿರ್ಧರಿಸಲಾಗಿದೆ. ಆಹಾರ ವಸ್ತುಗಳ ತಪಾಸಣೆ ನಡೆಸಿ ನೀಡುವ ವರದಿಯನ್ನು ಸುಪ್ರೀಂ ಕೋರ್ಟ್ ಕೂಡ ಸಮ್ಮತಿಸುವಂತೆ ಇರಬೇಕು. ಆಗ ಮಾತ್ರ ರಾಜ್ಯದಲ್ಲಿ ಕಲಬರಕೆಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟಿದ್ದಾರೆ.

















































