
ಬೆಂಗಳೂರು: ರಾಜ್ಯದ ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ನಿರ್ವಹಣಾ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಪ್ರದೇಶಗಳಲ್ಲಿ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆ ಹೊಸ ಕರ್ನಾಟಕ ಆನೆ ಶಿಬಿರ ಸುರಕ್ಷತಾ ನಿಯಮಾವಳಿ ಜಾರಿಗೆ ತಂದಿದೆ. ಇನ್ನು ಮುಂದೆ ಪ್ರವಾಸಿಗರು ಆನೆಗಳಿಂದ ಕನಿಷ್ಠ 30 ಅಡಿ ದೂರದಲ್ಲಿರಬೇಕು. ಆನೆಗಳಿಗೆ ಆಹಾರ ನೀಡುವುದು, ಮುಟ್ಟುವುದು ಹಾಗೂ ಸ್ನಾನ ಮಾಡಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
ಪ್ರವಾಸಿಗರು ನಿಗದಿತ ಗ್ರೀನ್ ಝೋನ್ನಲ್ಲಿಯೇ ಆನೆಗಳನ್ನು ವೀಕ್ಷಿಸಬೇಕಿದ್ದು, ಸಂಪೂರ್ಣ ಚಟುವಟಿಕೆಗಳ ಮೇಲೆ ಸಿಸಿಟಿವಿ ನಿಗಾ ಇರಲಿದೆ. ಸಾರ್ವಜನಿಕ ವೀಕ್ಷಣೆಗೆ ಒಂದೇ ಶಿಬಿರದಲ್ಲಿ 10ಕ್ಕಿಂತ ಹೆಚ್ಚು ಆನೆಗಳನ್ನು ಪ್ರದರ್ಶಿಸಲು ಅವಕಾಶ ಇರುವುದಿಲ್ಲ.
ದುಬಾರೆ ಆನೆ ಶಿಬಿರದಲ್ಲಿ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ನಿಯಮ ಪಾಲನೆಗೆ ಶಿಬಿರಗಳಿಗೆ 15 ದಿನಗಳ ಗಡುವು ನೀಡಲಾಗಿದ್ದು, ಬಳಿಕ ಪರಿಶೀಲನೆ ನಡೆಸಿ ಅನುಮತಿ ನೀಡಲಾಗುತ್ತದೆ.
ಹೊಸ ಮಾರ್ಗಸೂಚಿಯಂತೆ ಶಿಬಿರದ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಸಂಖ್ಯೆ ಮತ್ತು ಸಮಯ ನಿಗದಿಯಾಗಲಿದೆ. ಒಂದೇ ಸಮಯದಲ್ಲಿ 50–75 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ವೀಕ್ಷಣಾ ಅವಧಿ 20–30 ನಿಮಿಷಗಳಿಗೆ ಸೀಮಿತವಾಗಿರಲಿದೆ.

































