
ಬೆಂಗಳೂರು: ಅಂಗವಿಕಲರು ಸ್ವಾವಲಂಬಿಯಾಗಿ ಬದುಕಲು ನೆರವಾಗುವ ಸಹಾಯಕ ಸಾಧನಗಳು ಮತ್ತು ಉಪಕರಣಗಳ ಮೇಲೆ ವಿಧಿಸಲಾಗುತ್ತಿರುವ ಜಿಎಸ್ಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಅಥವಾ ಕನಿಷ್ಠ ಶೂನ್ಯ ತೆರಿಗೆ ವ್ಯಾಪ್ತಿಗೆ ತರಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಅಂಗವಿಕಲರ ದೈನಂದಿನ ಬದುಕಿಗೆ ಅಗತ್ಯವಾಗಿರುವ ವಿವಿಧ ಸಾಧನಗಳು ಮತ್ತು ಸಲಕರಣೆಗಳು ಐಷಾರಾಮಿ ವಸ್ತುಗಳಲ್ಲ. ಅವುಗಳನ್ನು ವಿನಾಯಿತಿ ಪಡೆದ ವಸ್ತುಗಳ ಪಟ್ಟಿಗೆ ಸೇರಿಸುವ ಮೂಲಕ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ದೇಶದಾದ್ಯಂತ ಲಕ್ಷಾಂತರ ಅಂಗವಿಕಲರಿಗೆ ನೇರ ಪ್ರಯೋಜನ ಸಿಗಲಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆಗಳು, ಸುರಕ್ಷತೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಅಂಗವಿಕಲರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಈ ರೀತಿಯ ತೆರಿಗೆ ವಿನಾಯಿತಿ ಸಹಕಾರಿಯಾಗಲಿದೆ ಎಂದು ಲಾಡ್ ಅಭಿಪ್ರಾಯಪಟ್ಟಿದ್ದಾರೆ. ಸಾಧನಗಳ ಮೇಲಿನ ಜಿಎಸ್ಟಿ ಭಾರವು ಅಂಗವಿಕಲರು ಮತ್ತು ಅವರ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡವನ್ನು ಉಂಟುಮಾಡುತ್ತಿರುವುದರಿಂದ ಈ ವಿಷಯವನ್ನು ಮಾನವೀಯ ದೃಷ್ಟಿಕೋನದಿಂದ ಪರಿಗಣಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.




























