
ಹೆಬ್ರಿ :ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜೆಲ್ಲೆ ಆಯೋಜಿಸಿದ, ಶ್ರೀ ಜನಾರ್ಧನ ಶಾಲೆ ಎಳ್ಳಾರೆ ಇದರ ಆಶ್ರಯದಲ್ಲಿ 17 ನೇ ವರ್ಷದ ಜಿಲ್ಲಾ ಶೈಕ್ಷಣಿಕ ಸಹಮಿಲನ. 2024 ಕಾರ್ಯಕ್ರಮವು ದೊಂಡೆರಂಗಡಿ ಅಯೋಧ್ಯಾ ಸಭಾಂಗಣದಲ್ಲಿ ಸೆ. 14 ರಂದು ನಡೆಯಿತು.
ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಾಸ್ತಾವಿಕ ಮಾತನಾಡಿ ಜಿಲ್ಲಾ ವಿದ್ಯಾ ಭಾರತಿ ಸಂಸ್ಥೆಯ ಸಂಯೋಜಿತ ಶಾಲೆಗಳ ಆಡಳಿತ ಮಂಡಳಿ, ಭೋಧಕರು, ಭೋಧಕೇತರರಿಗಾಗಿ ಒಂದು ದಿನದ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮವನ್ನು ಈ ವರ್ಷವೂ ಏರ್ಪಡಿಸಲಾಗಿದ್ದು , ಕ್ರೀಡಾ ಕೂಟ, ವಿಜ್ಞಾನ ಮೇಳ ಚಟುವಟಿಕೆಗಳನ್ನು ಮುಗಿಸಿ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮದಲ್ಲಿ ನಾವಿದ್ದೇವೆ. ಶಾಲೆಯ ಕರ್ತವ್ಯದಿಂದ ಒಂದು ದಿವಸ ಬಿಡುಮಾಡಿಕೊಂಡು ಕಲಿಕೆ ಪರಿಣಾಮಕಾರಿಯಾಗಿಸಲು ಪುನಶ್ಚೇತನದ ರೀತಿಯಲ್ಲಿ ಸಮಗ್ರ ವ್ಯಕ್ತಿತ್ವ, ಉತ್ಕೃಷ್ಟ ಜವಾಬ್ದಾರಿಗಳನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ವಿಶೇಷ ಬೌದ್ಧಿಕ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಸಮಿತಿಗಳ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಒಟ್ಟು ಸೇರಿದ ಈ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮವು ಎಲ್ಲರಿಗೂ ಆಶಾದಾಯಕವಾಗಲಿದೆ ಎಂದರು.
ಭಾರತ ಮಾತೆ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೈಂದೂರು ವಿಧಾನ ಸಭಾ ಕ್ಷೇತ್ರ ಶಾಸಕರಾದ ಗುರುರಾಜ ಗಂಟಿಹೊಳೆ ಮಾತನಾಡಿ ಹಿರಿಯರು ಕಟ್ಟಿ ಬೆಳೆಸಿದ ಈ ಸಂಸ್ಥೆಯು ಶಿಕ್ಷಕರ ಸಾಧನೆಯಿಂದಾಗಿ ಇಂದಿನವರೆಗೆ ವಿದ್ಯಾ ಭಾರತಿ ಸಂಸ್ಥೆಗೆ ಒಳಪಟ್ಟ ಶಾಲೆಗಳು ಉನ್ನತ ಮಟ್ಟಕ್ಕೆ ಬೆಳೆದು ನಿಂತಿದೆ. ಮಕ್ಕಳಿಗೆ ಕಾಲ ಕಾಲಕ್ಕೆ ಗುಣಮಟ್ಟದ ಶಿಕ್ಷಣದ ಜೊತೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಿ, ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಚಿಂತನೆ ನಡೆಸಿ ಪ್ರೋತ್ಸಾಹ ನೀಡುವ ಸಂಸ್ಥೆಯವರ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ. ವಿದ್ಯಾರ್ಥಿಗಳಿಗೆ ಸರ್ವತೋಮುಖ ಬೆಳವಣಿಗೆ ವರದಾನವಾಗಿದ್ದ ಈ ಸಂಸ್ಥೆಯು ದೇಶಕ್ಕೆ ಮಾದರಿಯಾಗಲಿ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ ವಿದ್ಯಾ ಭಾರತಿ ಸಂಸ್ಥೆಯ ಅಧ್ಯಕ್ಷರಾದ ಪಾಂಡುರಂಗ ಪೈ ಸಿದ್ದಾಪುರ ಮತ್ತು ಅತಿಥಿಗಳಾಗಿ ಮಂಗಳೂರು ಕ್ಯಾಂಪ್ಕೋ ನಿರ್ದೇಶಕರಾದ ದಯಾನಂದ ಹೆಗ್ಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
2023-24 ಶೈಕ್ಷಣಿಕ ಸಾಲಿನ ಜಿಲ್ಲೆಯ ವಿವಿಧ ವಿದ್ಯಾ ಭಾರತಿ ಶಾಲೆಗಳಲ್ಲಿ ಕಲಿತ ಎಸ್. ಎಸ್.ಎಲ್. ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ಮತ್ತು ವಿಜ್ಞಾನ ಮೇಳದಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಹಾಗೂ ಜಿಲ್ಲಾ ಮಟ್ಟದಲ್ಲಿ ನಾಟಕ ಪ್ರದರ್ಶಿಸಿದ ಶಾಂತಿ ಧಾಮ ಕೋಟೇಶ್ವರ ತಂಡದ ಶಿಕ್ಷಕ ಕಲಾವಿದರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶ್ರೀ ಜನಾರ್ಧನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ದಿನೇಶ್ ಕಿಣಿ, ಸಂಚಾಲಕರಾದ ನಂದ ಕುಮಾರ್,ಕಾರ್ಯದರ್ಶಿ ಸಂತೋಷ್ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು.
ಜನಾರ್ಧನ ಶಾಲೆಯ ಮುಖ್ಯೋಪಾಧ್ಯಾಯನಿ ಅಶ್ವಿನಿ ಹೆಗ್ಡೆ ಸ್ವಾಗತಿಸಿ ಅಕ್ಷತಾ ನಿರೂಪಿಸಿದರು. ಶಕುಂತಲಾ ಮಾತಾಜಿ ವಂದಿಸಿದರು.ಜಿಲ್ಲೆಯ ವಿದ್ಯಾ ಭಾರತಿ ಶಾಲೆಗಳ ಮಾತಾಜಿಯವರು ಹಾಜರಿದ್ದರು.ಬಳಿಕ ವಿವಿಧ ಬೌದ್ಧಿಕ ಕಾರ್ಯಕ್ರಮಗಳು ನಡೆಯಿತು.ಸಂಜೆಯ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರು ಕಲ್ಲಡ್ಕ ಪ್ರಭಾಕರ ಭಟ್ ಸಮಗ್ರ ವ್ಯಕ್ತಿತ್ವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.ನೈತಿಕ ಮತ್ತು ಆಧ್ಯಾತ್ಮಿಕ ಪ್ರಮುಖ್ ವಿದ್ಯಾಭಾರತಿ ಕರ್ನಾಟಕ ಕ್ಷೇತ್ರ ವೆಂಕಟರಮಣ ಮಂಕುಡೆ ಸಮಾರೋಪ ಭಾಷಣ ಮಾಡಿದರು.








































