
ವಿದ್ಯೆ ವಿನಯ ಸಂಸ್ಕಾರದ ದಾರಿಯಲ್ಲಿ ಮುನ್ನಡೆದು ಬದುಕಿಗೊಂದು ಪರಮಾರ್ಥವನ್ನು ಒದಗಿಸಿಕೊಂಡು ಮಾತಾಪಿತರಿಗೆ ಶಿರಬಾಗಿ ನಮಸ್ಕರಿಸುತ್ತ, ಪರಮಪವಿತ್ರ ತಾಯ್ನೆಲಕ್ಕೆ ಪೊಡಮಡುತ್ತ, ಸಚ್ಚಾರಿತ್ರ್ಯದ ಭದ್ರ ಬುನಾದಿಯಲ್ಲಿ ಬೆಳೆದ ಯಾವುದೇ ಒಬ್ಬ ವ್ಯಕ್ತಿ ಶ್ರೇಷ್ಠ ಸಮಾಜ ನಿರ್ಮಾತೃನಾಗಿ ತಾನು ಹೊಕ್ಕಿದ ಯಾವುದೇ ಪ್ರದೇಶವನ್ನಾದರೂ ಹೊನ್ನಿನ ಕಲಸದಂತೆ ಹೊಳಪಿಸುವ ಚಾಖಚಖ್ಯತೆ ಹೊಂದುತ್ತಾನೆ,ಇಂತಹ ಅಸಾಧಾರಣ ಗುಣದ ಶ್ರೇಷ್ಠ ಆದರ್ಶ ವ್ಯಕ್ತಿಯೋರ್ವರ ವ್ಯಕ್ತಿ ಚಿತ್ರಣವನ್ನು ನಿಮ್ಮ ಮುಂದಿಡಲು ಅತ್ಯಂತ ಹೆಮ್ಮೆಯಾಗುತ್ತದೆ


ಸರಳ ಸಜ್ಜನಿಕೆಯ ಇವರು ರಮೇಶ್ ಶೆಟ್ಟಿ ಸಿದ್ಧಕಟ್ಟೆಯವರು.ಶ್ರೀಯುತರು ಸಿದ್ಧಕಟ್ಟೆ ಉಗ್ರೋಡಿ ಮನೆ ದಿ. ಮಹಾಬಲ ಶೆಟ್ಟಿ ಮತ್ತು ಕಲ್ಲಬೆಟ್ಟು ಮನೆ ದಿ.ಸೇಸಿ ಶೆಟ್ಟಿ ದಂಪತಿಗಳ ಸುಪುತ್ರನಾಗಿ 1968 ಜೂನ್ 4 ರಂದು ಜನಿಸಿದರು,ಇವರು ಪ್ರಾಥಮಿಕ ಶಿಕ್ಷಣವನ್ನು ಆರಂಬೋಡಿ ಶಾಲೆಯಲ್ಲೂ ಹೈಸ್ಕೂಲ್ ಶಿಕ್ಷಣವನ್ನು ಸಿದ್ಧಕಟ್ಟೆಯ “ಸೈಂಟ್ ಪ್ಯಾಟ್ರಿಕ್ ಹೈಸ್ಕೂಲ್”ನಲ್ಲಿ ಪೂರೈಸಿದ ನಂತರ ಭವಿಷ್ಯದ ಬಗೆಗೆ ಅತ್ಯಂತ ಮಹತ್ತರ ಕನಸನ್ನು ಹೊತ್ತು ದೂರದ ಮುಂಬೈಗೇ ಪಯಣ ಬೆಳೆಸುತ್ತಾರೆ,ಅಲ್ಲಿಯೇ ಒಂದು ಉದ್ಯೋಗವನ್ನು ಅರಸಿ, ಉದ್ಯೋಗ ಗಿಟ್ಟಿಸಿಕೊಂಡಿದ್ದು ಮಾತ್ರವಲ್ಲದೇ ವಿದ್ಯಾಭ್ಯಾಸವನ್ನು ಮುಂದುವರಿಸಿ ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಗೇ ಸೇರಿ ವಿದ್ಯೆ ಪೂರ್ಣಗೊಳಿಸಿದ ಮೇಲೆ ತಾನು ಮಾಡುತ್ತಿದ್ದ ಉದ್ಯೋಗವನ್ನು ತೊರೆದು ಶಿಪ್ಪಿಂಗ್ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರು.

ತಾನು ಏನಾದರೂ ಸಾಧಿಸಬೇಕು ಎಂಬ ಧ್ಯೇಯವನ್ನು ಹೊಂದಿದ ರಮೇಶ್ ಶೆಟ್ಟಿಯವರು “ಸೃಷ್ಟಿ ಮೆರಿಟೈಮ್ ಸರ್ವಿಸಸ್” ಎಂಬ ಸ್ವಂತ ಕಂಪೆನಿಯನ್ನು ಆರಂಭಿಸಿ ಹಲವು ಜನರಿಗೆ ಕೆಲಸ ಕೊಟ್ಟು ಅನ್ನದಾತ ಎನಿಸಿಕೊಂಡರೂ ತನ್ನ ಯಶಸ್ಸಿಗೆ ಕಾರಣವಾದ ಶಿಪ್ಪಿಂಗ್ ಕಂಪೆನಿಯ ಉದ್ಯೋಗ ತೊರೆಯದೆ ಈಗಲೂ ಅದರಲ್ಲಿಯೇ ಕರ್ತವ್ಯ ಮುಂದುವರೆಸಿದ್ದಾರೆ.

ಮಹಾರಾಷ್ಟ್ರ ರಾಜ್ಯದಲ್ಲಿ ತುಳು ಹಾಗೂ ಕನ್ನಡಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶವೇ ಮೀರಾ-ಭಾಯಂಧರ್. ಆದ್ದರಿಂದ ಈ ಪ್ರದೇಶವು ಮಿನಿ ಮಂಗಳೂರು ಎಂದು ಕರೆಯಲ್ಪಡುತ್ತಿದೆ. ಈ ಪ್ರದೇಶದಲ್ಲಿ ಬಹಳಷ್ಟು ತುಳು-ಕನ್ನಡಿಗರ ಸಂಘ ಸಂಸ್ಥೆಗಳು ಇವೆ. ಪ್ರತೀ ವಾರಕ್ಕೊಮ್ಮೆಯಾದರೂ ಯಾವುದಾದರೂ ವಿಶೇಷ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಪರಿಸರದಲ್ಲಿ ಜರಗುವ ನಾಟಕ, ಯಕ್ಷಗಾನ, ಪುಸ್ತಕ ಬಿಡುಗಡೆ ಹಾಗೂ ಇತರ ಯಾವುದೇ ಕಾರ್ಯಕ್ರಮಕ್ಕೂ ತನು-ಮನ-ಧನದಿಂದ ರಮೇಶ್ ಶೆಟ್ಟಿಯವರು ಸಹಕರಿಸುವುದರಿಂದ ಇವರು ಸರ್ವೇ ಸಾಮಾನ್ಯವಾಗಿ ಸರ್ವರಿಗೂ ಚಿರಪರಿಚಿತರು, ಹಾಗೂ ಆತ್ಮೀಯರೂ ಕೂಡ,ಇವರು ತಾನು ದುಡಿದ ಸಂಪಾದನೆಯಲ್ಲಿ ಒಂದಿಷ್ಟು ಸಮಾಜಕ್ಕೆ ನೀಡುತ್ತಾ ಕೊಡುಗೈ ದಾನಿಗಳು ಎನಿಸಿಕೊಂಡಿದ್ದಾರೆ, ಆದರೆ ತಾನು ಕೊಡುವ ಯಾವುದೇ ದಾನವನ್ನು ಕೂಡ ಎಲ್ಲಿಯೂ ಪ್ರಸ್ತುತ ಪಡಿಸುವಲ್ಲಿ ಹಿಂದೇಟು ಹಾಕುತ್ತಾರೆ,ತನ್ನ ಬಲಗೈಯಿಂದ ನೀಡಿದ ದಾನ ಎಡಗೈಗೂ ಗೊತ್ತಾಗಬಾರದು ಅನ್ನುವುದು ಇವರ ಮನಸ್ಥಿತಿ.

ಯಾವುದೇ ಕಾರ್ಯಕ್ರಮಕ್ಕೂ ಸಹಕಾರ ನೀಡಲು ತಾನು ಸಿದ್ಧ ಎನ್ನುವ ಸಿದ್ಧಕಟ್ಟೆ ರಮೇಶ್ ಶೆಟ್ಟಿಯವರು ಆಗರ್ಭ ಶ್ರೀಮಂತರಲ್ಲ. “ನಾವು ಹುಟ್ಟುವಾಗ ಜೊತೆಯಲ್ಲಿ ಏನನ್ನೂ ತರಲಿಲ್ಲ ಮತ್ತು ಸಾಯುವಾಗ ಏನನ್ನೂ ಕೊಂಡೊಯ್ಯುವುದಿಲ್ಲ. ನಾವು ಗಳಿಸಿದುದರಲ್ಲಿ ಸ್ವಲ್ಪ ಭಾಗವನ್ನು ಇತರರ ಉತ್ತಮ ಕೆಲಸಕ್ಕೆ ದಾನ ನೀಡಿ ಸಹಕರಿಸಿದರೆ ಅದಕ್ಕಿಂತ ದೊಡ್ಡ ಪುಣ್ಯದ ಕೆಲಸ ಬೇರೆ ಇರಲಾರದು” ಎಂಬುದು ರಮೇಶ್ ಶೆಟ್ಟಿಯವರ ಹೃದಯಾ0ತರಾಳದ ಮಾತು.ಪ್ರಚಾರ ಪ್ರಿಯರಲ್ಲದ ಇವರು,ಉತ್ತಮ ಕೆಲಸ ಮಾಡಿದವರು ಬಹಳಷ್ಟು ಮಂದಿ ಇದ್ದಾರೆ ಅವರನ್ನು ಸನ್ಮಾನಿಸಿ ನನಗೆ ಸನ್ಮಾನ ಬೇಡ ಎಂದು ನಯವಾಗಿ ನಿರಾಕರಿಸುತ್ತ ಬಂದರೂ ಹಲವಾರು ಸಂಘ ಸಂಸ್ಥೆಗಳು ಒತ್ತಾಯ ಪೂರ್ವಕವಾಗಿ ರಮೇಶ್ ಶೆಟ್ಟಿಯವರನ್ನು ಸನ್ಮಾನಿಸಿವೆ.

ಬಂಟರ ಸಂಘ, ಮುಂಬೈಯ ಮೀರಾ-ಭಾಯಂಧರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ ಮಹತ್ವದ ಹೊಣೆಗಾರಿಕೆ ಹೊತ್ತಿರುವ ರಮೇಶ್ ಶೆಟ್ಟಿಯವರು “ನವ ತರುಣ ಮಿತ್ರ ಮಂಡಳಿ” ಮೀರಾ-ಭಾಯಂಧರ್ ಇದರ ಉಪಾಧ್ಯಕ್ಷರು. “ಬ್ರಾಹ್ಮರಿ” ಸುದ್ದಿ ವಾಹಿನಿ ಮುಂಬೈ ಮತ್ತು “ಯಕ್ಷ ಧ್ವನಿ” ಮುಂಬೈ ಇವುಗಳ ಸಲಹೆಗಾರರು. “ಬಂಟರ ಸಂಘ” ಕುರ್ಲಾ, ಮುಂಬೈ ಇದರ ಆಹ್ವಾನಿತ ಗೌರವ ಸದಸ್ಯರು.ಇದು ಮುಂಬೈಯಲ್ಲಿ ರಮೇಶ್ ಶೆಟ್ಟಿಯವರ ಕಾರ್ಯ ಕ್ಷೇತ್ರವಾದರೆ ತನ್ನ ಹುಟ್ಟೂರ ಬಗ್ಗೆ ಅಪಾರ ಪ್ರೀತಿ ಅಭಿಮಾನದೊಂದಿಗೆ ಊರಿನಲ್ಲಿಯ ಹಲವು ಸಂಸ್ಥೆಗಳಲ್ಲಿ ಸಹ ತೊಡಗಿಕೊಂಡಿದ್ದಾರೆ.

ಮುಖ್ಯವಾಗಿ “ಯಕ್ಷ ಮಿತ್ರ” ಪೂಂಜ, ಸಿದ್ಧಕಟ್ಟೆ ಇದರ ಸದಸ್ಯರು. “ಛಾಯಾ ಕಿರಣ” ಮಾಸ ಪತ್ರಿಕೆ ಹಾಗೂ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮುಖ್ಯ ಪ್ರವರ್ತಕರು. ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಪೂಂಜ, ಆರಂಬೋಡಿ ಸಿದ್ಧಕಟ್ಟೆ, ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಕಂಬಳ ಮತ್ತು ಬ್ರಹ್ಮ ಮುಗೇರ-ಮಹಾಕಾಳಿ- ಕೊರಗಜ್ಜ ದೈವಸ್ಥಾನ, ಸಿದ್ಧಕಟ್ಟೆ ಉಪ್ಪಾರ ಬಂಟ್ವಾಳ ಇವುಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದಾರೆ.


ರಮೇಶ್ ಶೆಟ್ಟಿಯವರಿಗೆ ಮಾರ್ಗದರ್ಶನದೊಂದಿಗೆ ಸಲಹೆ ಹಾಗೂ ಸಂಪೂರ್ಣ ಸಹಕಾರ ನೀಡುವ ಅವರ ಮಡದಿ ತೃಪ್ತಿ ಶೆಟ್ಟಿಯವರು ಶಿಕ್ಷಕಿಯಾಗಿದ್ದಾರೆ. ರಮೇಶ್ ಶೆಟ್ಟಿ ಮತ್ತು ತೃಪ್ತಿ ಶೆಟ್ಟಿ ದಂಪತಿಗಳ ಏಕೈಕ ಸುಪುತ್ರಿ “ಸೃಷ್ಟಿ ಶೆಟ್ಟಿ”ಯು ಬ್ಯಾಚುಲರ್ ಆಫ್ ಇನ್ ಕಮ್ಯುನಿಕೇಷನ್ ಆಫ್ ಎಂಐಟಿ ಪುಣೆ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಸುಂದರ ಸುಖಿ ಸಂಸಾರದೊಂದಿಗೆ ಸಾಮಾಜಿಕ ಕಳಕಳಿಯ ಅತ್ಯುತ್ತಮ ಸಮಾಜ ಬಾಂಧವ ರಮೇಶ್ ಶೆಟ್ಟಿ ಸಿದ್ಧಕಟ್ಟೆಯವರ ಬದುಕು ಅವರಂದುಕೊಂಡದ್ದಕ್ಕಿಂತಲೂ ಆನಂದವಾಗಿ ಸಮಾಜಮುಖಿಯಾಗಿರಲಿ, ಇಂದು ಇವರ ಜನ್ಮದಿನದ ಸಂಭ್ರಮಕ್ಕೆ ಸಾಕ್ಷಿಯಾಗಿ ಅವರ ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳಿಂದ ಪ್ರೇರಿತಳಾಗಿ ಅವರಿಗೇ ಶುಭಾಶಯಗಳನ್ನು ಅರ್ಪಿಸುವ ನಿಟ್ಟಿನಲ್ಲಿ ಈ ಲೇಖನವನ್ನು ಅವರಿಗೇ ಅರ್ಪಿಸಿದ್ದೇನೆ,ಬದುಕಿನ ಉದ್ದಗಲಕ್ಕೂ ಯಶಸ್ವೀ ನಾಳೆಗಳು ಜೊತೆಯಾಗುತ್ತಾ ಬದುಕು ಹಿತವಾಗಿರಲಿ ಎಂಬುದೇ ನಮ್ಮ ಆಶಯ..
✍🏻ರೇಷ್ಮಾ ಶೆಟ್ಟಿ ಗೊರೂರು.
