
ಉಡುಪಿ: ಮಂಗಳವಾರ ರಾತ್ರಿ ಆಗುಂಬೆ ಸಮೀಪ ಗಾಳಿ ಮಳೆಗೆ ಮರದ ಕೊಂಬೆ ಮುರಿದು ವಿದ್ಯುತ್ ತಂತಿ ಮೈಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಯುವ ಯಕ್ಷಗಾನ ಕಲಾವಿದ ರಂಜಿತ್ ಬನ್ನಾಡಿ ಸಾವನ್ನಪ್ಪಿದ್ದಾರೆ.
ಕೊಪ್ಪ ಸಮೀಪದಲ್ಲಿದ್ದ ಸೂರಾಲು ಮೇಳದ ಪ್ರದರ್ಶನ ಮಳೆಯಿಂದ ರದ್ದಾದ ಕಾರಣ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮರದ ಕೊಂಬೆ ಮುರಿದು ವಿದ್ಯುತ್ ತಂತಿ ಮೈಮೇಲೆ ಬಿದ್ದು ದ್ವಿಚಕ್ರ ವಾಹನ ಸವಾರ ರಂಜಿತ್ ಸಾವನ್ನಪ್ಪಿದ್ದಾರೆ. ಹಿಂಬದಿ ಸವಾರ ವಿನೋದ್ ರಾಜ್ ಎನ್ನುವವರು ಸ್ಥಳೀಯರ ಸಹಕಾರದಿಂದ ಪಾರಾಗಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳೀಯರ ಸಹಾಯದಿಂದ ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಕರೆತರಲಾದರೂ ಅಷ್ಟರಲ್ಲಾಗಲೇ ರಂಜಿತ್ ಕೊನೆಯುಸಿರೆಳೆದಿದ್ದು ವಿನೋದ್ ರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.





















