
ನವದೆಹಲಿ: ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದಿರುವುದಾಗಿ ಆರೋಪಿಸಲಾದ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಈ ಪ್ರಕರಣಕ್ಕೆ ಬಿಜೆಪಿ ನಾಯಕರು ಮುಂದೊಂದು ದಿನ ಉತ್ತರಿಸಲೇಬೇಕು ಎಂದು ಅವರು ಹೇಳಿದ್ದಾರೆ.
ಪ್ರಯಾಗರಾಜ್ನಲ್ಲಿ ಶನಿವಾರ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಬಳಿ ‘ಈಗ ಯಾವುದೇ ಆಯ್ಕೆಗಳಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ. ವರ್ಷಗಳ ಕಾಲ ಪರೀಕ್ಷೆಗೆ ಸಿದ್ಧತೆ ನಡೆಸಿ, ಕುಟುಂಬದ ಜಮೀನು ಮಾರಿ, ಸಾಲದ ಹೊರೆ ಹೊತ್ತರೂ ಕೊನೆಗೆ ಏನೂ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಇದು ವಿದ್ಯಾರ್ಥಿಯ ವೈಫಲ್ಯವಲ್ಲ, ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಲು ವಿಫಲವಾದ ವ್ಯವಸ್ಥೆಯ ಸಮಸ್ಯೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಜಂತರ್ ಮಂತರ್ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಮುಗಿದು ಹಲವು ದಿನಗಳಾದರೂ, ಅವರ ವಿರುದ್ಧದ ಪೊಲೀಸ್ ಕ್ರಮದ ಬಗ್ಗೆ ಅಮಿತ್ ಶಾ ಯಾವುದೇ ಹೇಳಿಕೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ರಾಜಧಾನಿಯ ಬೀದಿಗಳಲ್ಲಿ ಯುವಕರ ಮೇಲೆ ಲಾಠಿ ಮತ್ತು ಪೆಲೆಟ್ ಗುಂಡುಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ ರಾಹುಲ್, ‘ಅಮಿತ್ ಶಾ ಅವರೇ, ನಾವು ಹೊಣೆಗಾರಿಕೆಯನ್ನು ಆಗ್ರಹಿಸುವುದನ್ನು ನಿಲ್ಲಿಸುತ್ತೇವೆ ಎಂದು ಕ್ಷಣಮಾತ್ರವೂ ಭಾವಿಸಬೇಡಿ. ಇಂದು ಅಥವಾ ನಾಳೆ, ಈ ಅಪರಾಧಕ್ಕೆ ನೀವು ಉತ್ತರಿಸಲೇಬೇಕಾಗುತ್ತದೆ’ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳೇ ದೇಶದ ಭವಿಷ್ಯದ ಬೆಳಕು ಎಂದು ಹೇಳಿದ ರಾಹುಲ್, ಅವರ ಹೋರಾಟಕ್ಕೆ ತಾವು ಸಂಪೂರ್ಣ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ. ಜುಲೈ 20ರ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ದೌರ್ಜನ್ಯದ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಅಮಿತ್ ಶಾ ಹೇಳಿಕೆ ನೀಡಬೇಕೆಂಬ ವಿರೋಧ ಪಕ್ಷಗಳ ಒತ್ತಾಯದಿಂದಾಗಿ ಕಲಾಪದಲ್ಲಿ ಗದ್ದಲ ಮುಂದುವರಿದಿದೆ.

























































